ರಾಜಕೀಯ

2023 ವಿಧಾನಸಭೆ ಚುನಾವಣೆ ಮೇಲೆ ಹೆಚ್'ಡಿಕೆ ಕಣ್ಣು: ದಲಿತ, ಮುಸ್ಲಿಂ ಮತ ಬೇಟೆಗೆ ಮುಂದು!

Manjula VN

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಅವಕಾಶ ಕಲ್ಪಿಸಲು ಪಂಚರತ್ನ ಯಾತ್ರೆ ಆರಂಭಿಸಿರುವ ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು, ಹಳೆ ಮೈಸೂರು ಭಾಗದಲ್ಲಿ ಮೊಕ್ಕಾಂ ಹೂಡಲು ಮುಂದಾಗಿದ್ದು, ಮುಸ್ಲಿಮರು ಮತ್ತು ದಲಿತರನ್ನು ಓಲೈಸಲು ಮುಂದಾಗಿದ್ದಾರೆ.

ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿರುವುದು ಮುಸ್ಲಿಂ ಮತದಾರರನ್ನು ಸೆಳೆಯಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಹೇಳಿಕೆ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿಯವರು, “ಇಬ್ರಾಹಿಂ ಏಕೆ ಮುಖ್ಯಮಂತ್ರಿಯಾಗಬಾರದು? ಅವರು ಅಸ್ಪೃಶ್ಯರೇ” ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದರು. ಬಳಿಕ ಸ್ಪಷ್ಟನೆ ನೀಡಿ. ದಲಿತರ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ದಲಿತ ಸಮುದಾಯವನ್ನು ಓಲೈಸುವುದು ನನ್ನ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ತುಮಕೂರಿನ ದಲಿತ ಪ್ರಾಬಲ್ಯವಿರುವ ದಿಬ್ಬೂರು ಪ್ರದೇಶದಲ್ಲಿ ವಾಸ್ತವ್ಯ ಹೂಡಲು ಮುಂದಾಗಿದ್ದಾರೆ.

ಕುಮಾರಸ್ವಾಮಿಯವರು ಜೆಡಿಎಸ್‌ನ ಎಸ್‌ಸಿ ವಿಭಾಗದ ನಗರಾಧ್ಯಕ್ಷ ಡಿಎನ್‌ ಭೈರೇಶ್‌ ಅವರ ಮನೆಯಲ್ಲಿ ಉಪಹಾರ ಸೇವಿಸಲಿದ್ದಾರೆ ಎಂದು ಜೆಡಿಎಸ್‌ ಮುಖಂಡ ನಾಗರಾಜ್‌ ಮಾಹಿತಿ ನೀಡಿದ್ದಾರೆ.

ನಿನ್ನೆ ಕೂಡ ಕುಮಾರಸ್ವಾಮಿಯವರು ಮುಸ್ಲಿಂ ಪ್ರಾಬಲ್ಯ ಇರುವ ಬೆಂಗಳೂರು ಗ್ರಾಮಾಂತರದ ನೆಲಮಂಗಲ ಕ್ಷೇತ್ರದ ತ್ಯಾಮಗೊಂಡಲು ಲಕ್ಕೂರಿಗೆ ಭೇಟಿ ನೀಡಿದ್ದರು.

“ಒಕ್ಕಲಿಗರು ಜೆಡಿಎಸ್‌ನ ಪರವಾಗಿ ನಿಂತಿದ್ದಾರೆ ಮತ್ತು ಪಕ್ಷದ ನಾಯಕ ಎಚ್‌ಡಿ ದೇವೇಗೌಡರನ್ನು ಹೆಚ್ಚು ಗೌರವಿಸುತ್ತಾರೆ. ಕುಮಾರಸ್ವಾಮಿ ಅವರು ಈಗ ಮುಸ್ಲಿಂ ಮತ್ತು ದಲಿತ ಮತದಾರರನ್ನು ಪಕ್ಷದೊಂದಿಗೆ ಉಳಿಸಿಕೊಳ್ಳುವ ಧ್ಯೇಯದಲ್ಲಿದ್ದಾರೆ. 2018ರಲ್ಲಿ ಎಸ್‌ಸಿಗೆ ಮೀಸಲಾದ ನೆಲಮಂಗಲ ಮತ್ತು ಮಳವಳ್ಳಿ ಸೇರಿದಂತೆ ಏಳು ಸ್ಥಾನಗಳನ್ನು ಜೆಡಿಎಸ್ ಗೆದ್ದುಕೊಂಡಿತ್ತು ಎಂದು ಜೆಡಿಎಸ್ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.

ದಲಿತ ಹೋರಾಟಗಾರ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿರುವುದರಿಂದ ಸಾಂಪ್ರದಾಯಿಕ ದಲಿತ ಮತದಾರರು ಪಕ್ಷದೊಂದಿಗೆ ಉಳಿಯುವಂತೆ ಮಾಡುವುದು ಇದೀಗ ಜೆಡಿಎಸ್‌ಗೆ ದೊಡ್ಡ ಟಾಸ್ಕ್ ಆಗಿದೆ. ಖರ್ಗೆ ಅವರು ದಲಿತ ಸಮುದಾಯವನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಿಲ್ಲ, ಆದರೆ ಕುಮಾರಸ್ವಾಮಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸುವ ಅವಕಾಶಗಳಿದ್ದು, ಇದು ಅದು ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT