ರಾಜಕೀಯ

ಜನತೆಯಿಂದ ಭಾರೀ ಬೆಂಬಲ: ಜನವರಿವರೆಗೂ ಜನಸಂಕಲ್ಪ ಯಾತ್ರೆ ನಡೆಸಲು ಬಿಜೆಪಿ ನಿರ್ಧಾರ!

Manjula VN

ಹುಬ್ಬಳ್ಳಿ/ಬೆಂಗಳೂರು: ಪಕ್ಷದ ಬಲ ಹೆಚ್ಚಿಸಲು ಜಿಲ್ಲೆ ಹಾಗೂ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲು ಬಿಜೆಪಿ ಆರಂಭಿಸಿದ್ದ ಜನಸಂಕಲ್ಪ ಯಾತ್ರೆಗೆ ಜನತೆಯಿಂದ ಭಾರೀ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷವು ಇದೀಗ ಜನವರಿವರೆಗೂ ರಾಜ್ಯಾದಾದ್ಯಂತ ಯಾತ್ರೆಯನ್ನು ಮುಂದುವರೆಸಲು ನಿರ್ಧರಿಸಿದೆ.

ಆರಂಭದಲ್ಲಿ ಬಿಜೆಪಿಯು ಪಕ್ಷಕ್ಕೆ ದುರ್ಬಲ ಬೆಂಬಲ ಇರುವ ಸ್ಥಳಗಳಲ್ಲಿ ಮಾತ್ರ ಜನಸಂಕಲ್ಪ ಯಾತ್ರೆ ನಡೆಸಲು ನಿರ್ಧರಿಸಿತ್ತು. ಆದರೀಗ ರಾಜ್ಯಾದ್ಯಂತ ಯಾತ್ರೆಯನ್ನು ಕೈಗೊಳ್ಳಲು ಮುಂದಾಗಿದೆ.

ಸಂಸದೀಯ ಮಂಡಳಿಯ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಯಾತ್ರೆಯ ಭಾಗವಾಗಿದ್ದು, ರಾಜ್ಯಾದ್ಯಂತ ವ್ಯಾಪಕವಾಗಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ವಿಧಾನಸಭೆ ಚುನಾವಣೆಗೆ ಇನ್ನು ಐದು ತಿಂಗಳು ಬಾಕಿ ಇರುವ ಕಾರಣ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಖ್ಯಮಂತ್ರಿಗಳ ಮೇಲೆ ಭಾರೀ ಒತ್ತಡವಿದೆ.

ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಎತ್ತಿ ಹಿಡಿಯಲು ಮತ್ತು ಒಟ್ಟಾರೆಯಾಗಿ ಕಾಂಗ್ರೆಸ್, ವಿಶೇಷವಾಗಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಸ್ಮರಿಸಲು ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಬಳಸಿಕೊಳ್ಳುತ್ತಿದೆ.

ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಯಾತ್ರೆಗೆ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರ ವಿಶ್ವಾಸ ಗಳಿಸಲು ಯಾತ್ರೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಚುನಾವಣಾ ವರ್ಷವಾಗಿರುವುದರಿಂದ ಮೊದಲಿನಂತೆ ಜನರ ಬಳಿಗೆ ಹೋಗುತ್ತಿದ್ದೇನೆ. “ಹೈದರಾಬಾದ್-ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಪ್ರದೇಶಗಳಲ್ಲಿ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಜನವರಿ ತಿಂಗಳಲ್ಲಿ ಯಾತ್ರೆಯು ತೀವ್ರಗೊಳ್ಳಲಿದೆ. ಇದರೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ದು ಅವರ ವಿಶ್ವಾಸ ಗಳಿಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿಗಳು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಯಾತ್ರೆಯು ಜನವರಿವರೆಗೆ ನಡೆಯಲಿದ್ದು, ಇದು ಪಕ್ಷದ ವೇಗವನ್ನು ಮುಂದುವರಿಸುತ್ತದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ನಾಯಕತ್ವವು ಪ್ರಚಾರ ಕಾರ್ಯಗಳನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.

ಮೇ ಆಸುಪಾಸಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಬೇಕಿದ್ದು, ಪಕ್ಷಕ್ಕೆ ಅನುಕೂಲವಾದಾಗ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳು ಶುರುವಾಗಿದೆ.

SCROLL FOR NEXT