ಬಳ್ಳಾರಿ: ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ರಾಜ್ಯ ರಾಜಕಾರಣಕ್ಕೆ ‘ಮರುಪ್ರವೇಶ’ ಮಾಡುವ ನಿರ್ಧಾರಕ್ಕೆ ಬಂದಿದ್ದು, ಈ ಬೆಳವಣಿಗೆ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಕಳವನ್ನುಂಟು ಮಾಡಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲು ಜನಾರ್ಧನ ರೆಡ್ಡಿಯವರು ನಿರ್ಧರಿಸಿದ್ದಾರೆ. ಈ ಮೂಲಕ ತಮ್ಮದೇ ಪಕ್ಷವನ್ನು ಪ್ರಾರಂಭಿಸುವುದು, ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿಯವರ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೇರುವುದು ಅಥವಾ ಬಿಜೆಪಿಯಲ್ಲಿ ಉಳಿಯುವ ಯಾವುದೇ ಆಯ್ಕೆಯನ್ನು ಜನಾರ್ಧನ ರೆಡ್ಡಿಯವರು ಆರಿಸಿಕೊಳ್ಳಬಹುದಾಗಿದೆ.
ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಜತೆಗಿನ ಸಂಬಂಧ ಹಳಸಿದ ಕಾರಣ ಅವರು ಕೊಪ್ಪಳದತ್ತ ಗಮನ ಹರಿಸಿದ್ದು, ಬಳ್ಳಾರಿಯತ್ತ ಗಮನ ಹರಿಸುತ್ತಿಲ್ಲ ಎನ್ನಲಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿಯವರಿಗೆ, ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಬಿಜೆಪಿಯೇ ನನ್ನ ಕುಟುಂಬ: ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ವಿಚಾರಕ್ಕೆ ತೆರೆ ಎಳೆದ ಗಾಲಿ ಜನಾರ್ಧನ ರೆಡ್ಡಿ
ಇದರಂತೆ ರಾಜಕೀಯ ಪ್ರವೇಶಿಸಲು ನಿರ್ಧರಿಸಿರುವ ಜನಾರ್ಧನ ರೆಡ್ಡಿಯವರು ತಮ್ಮ ಉದ್ದೇಶದಂತೆ ನಡೆಯಲು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ವಡ್ಡರಟ್ಟಿಯಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಅಲ್ಲಿಂದಲೇ ತಮ್ಮ ರಾಜಕೀಯ ಜೀವನವನ್ನು ಪುನರಾರಂಭಿಸಲು ಮುಂದಾಗಿದ್ದಾರೆ. ಹನಮ ಜಯಂತಿಯಂದು ರೆಡ್ಡಿಯವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದ್ದೇ ಆದರೆ, ಜನಾರ್ಧನ ರೆಡ್ಡಿ ಅಥವಾ ಅವರ ಪತ್ನಿ ಸ್ಪರ್ಧಿಸುತ್ತಾರೆಂದು ಹಾಗೂ ಟಿಕೆಟ್ ನೀಡದಿದ್ದರೆ ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸಬಹುದು ಎಂಬ ಗುಸುಗುಸು ಮಾತುಗಳು ಆರಂಭವಾಗಿದೆ. ಈ ಬೆಳವಣಿಗೆ ಬಿಜೆಪಿಯಲ್ಲಿ ಕಳವಳವನ್ನುಂಟು ಮಾಡಿದೆ.
ಇದನ್ನೂ ಓದಿ: ಹನುಮ ಮಾಲಾಧಾರಣೆ ಮಾಡಿದ ಮಾಜಿ ಸಚಿವ ಜನಾರ್ಧನ ರೆಡ್ಡಿ: ರಾಜಕೀಯ ಬದುಕಿನ ಎರಡನೇ ಅಧ್ಯಾಯ ಆರಂಭಿಸಲು ನಿರ್ಧಾರ?
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿಯವರು, ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ಡಿಸೆಂಬರ್ 18 ರ ನಂತರ ಹೇಳುತ್ತೇನೆ. ನನ್ನ ರಾಜಕೀಯ ಪ್ರಯಾಣದ ಮೊದಲ ದಿನದಿಂದಲೂ ನಾನು ಬಿಜೆಪಿಯ ಅನುಯಾಯಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನನಗೆ ಸ್ಫೂರ್ತಿ. ಬಿಜೆಪಿ ವರಿಷ್ಠರ ನಿರ್ಧಾರಕ್ಕಾಗಿ ನಾನು ಕಾಯುತ್ತಿದ್ದೇನೆಂದು ಹೇಳಿದರು.
“ಬೆಂಗಳೂರಿನಲ್ಲಿ ಇರಲು ಇಷ್ಟಪಡದ ಕಾರಣ ನಾನು ಗಂಗಾವತಿವನ್ನು ಆಯ್ಕೆ ಮಾಡಿಕೊಂಡೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಾನು ನನ್ನ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ತಿಳಿಸಿದರು.
ಜನಾರ್ಧನ ರೆಡ್ಡಿಯವರ ಕುಟುಂಬದ ಸದಸ್ಯರೊಬ್ಬರು ಆಂಧ್ರಪ್ರದೇಶದ ಪಕ್ಷದ ಸಂಸದರಾಗಿರುವ ಕಾರಣ ವೈಎಸ್ಆರ್ ಕಾಂಗ್ರೆಸ್ನೊಂದಿಗೆ ಕೈಜೋಡಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.