ರಾಜಕೀಯ

ರೌಡಿಸಂ ಕಾಂಗ್ರೆಸ್ ಶಕ್ತಿ; ಕುಖ್ಯಾತ ರೌಡಿ ಜಯರಾಜ್ ಬೆಳೆಸಿದವರು ಸಂಜಯ್ ಗಾಂಧಿ: ಬಿಜೆಪಿ ಆರೋಪ

Nagaraja AB

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ನಾನಾ ಕಾರಣಗಳಿಂದ ವಾಗ್ಯುದ್ಧ ಪ್ರತಿದಿನ ಮುಂದುವರೆದಿದೆ.

ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹೊಡೆದಾಟ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ, ರೌಡಿಸಂ ಕಾಂಗ್ರೆಸ್ ಶಕ್ತಿಯಾಗಿದ್ದು, ಕುಖ್ಯಾತ ರೌಡಿ ಜಯರಾಜ್ ಬೆಳೆಸಿದವರು ಸಂಜಯ್ ಗಾಂಧಿ ಎಂದು ಆರೋಪಿಸಿದೆ. 

ಈ ಸಂಬಂಧ ರಾಜ್ಯ ಬಿಜೆಪಿ ಟ್ವೀಟರ್ ನಲ್ಲಿ ಟ್ವೀಟ್ ಮಾಡಲಾಗಿದ್ದು, ಸಂಜಯ್ ಗಾಂಧಿ ರೌಡಿ ಜಯರಾಜ್ ಬೆಳೆಸಿದ್ದಂತೆ ಕೊತ್ವಾಲ ರಾಮಚಂದ್ರನ ಶಿಷ್ಯರಾಗಿದ್ದವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಇತಿಹಾಸವೇ ಹೀಗಿರಬೇಕಾದರೆ ಬೀದಿ ಹೊಡೆದಾಟಗಳು ಪಕ್ಷಕ್ಕೆ ಸಾಮಾನ್ಯ. ಆದರೆ ನಾಡಿನ ಜನರಿಗೆ ಇದನ್ನು ಸಹಿಸಿಕೊಳ್ಳುವ ಕರ್ಮ ಏಕೆ ಎಂದು ಪ್ರಶ್ನಿಸಿದೆ. 

ಟಿಕೆಟ್‌‌ಗಾಗಿ ಅರ್ಜಿ ಎಂಬುದು ಸಿದ್ದರಾಮಯ್ಯ ಹಣಿಯಲು ಡಿಕೆ ಶಿವಕುಮಾರ್ ತೋಡಿರುವ ಖೆಡ್ಡಾ, ಒರ್ವನ ಸ್ವಾರ್ಥ ಲಾಲಸೆಗೆ ಕಾರ್ಯಕರ್ತರು ಕತ್ತಿನ ಪಟ್ಟಿ ಹಿಡಿದುಕೊಂಡು ಹೊಡೆದಾಡುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಡಿಕೆಶಿ- ಸಿದ್ದು ನಡುವಿನ ಒಳಜಗಳ ಬೀದಿಗೆ ಬಂದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಈ ಇಬ್ಬರ ರಂಪಾಟಗಳು ಕಾರ್ಯಕರ್ತರ ತೋಳುಗಳಲ್ಲಿ ಕಾಣುತ್ತಿರುವುದು ಕಾಂಗ್ರೆಸ್ ಅಧ:ಪತನದ ಸೂಚನೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ. 

SCROLL FOR NEXT