ಕಲಬುರಗಿ: ಕಲ್ಯಾಣ ಕ್ರಾಂತಿ ಸಮಾವೇಶ ಪಾಲ್ಗೊಳ್ಳಲು ವೇದಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿದರೂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎದ್ದು ನಿಲ್ಲದೆ ಅಗೌರವ ತೋರಿದ್ದಾರೆಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಕಲಬುರಗಿಗೆ ಖರ್ಗೆ ಅವರ ಚೊಚ್ಚಲ ಭೇಟಿ ಇದಾಗಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ-ಕರ್ನಾಟಕದ ಏಳು ಜಿಲ್ಲಾ ಕಾಂಗ್ರೆಸ್ ಘಟಕಗಳು ಶನಿವಾರ ಅದ್ಧೂರಿ ಸ್ವಾಗತ ಕೋರುವ ಸಮಾವೇಶವನ್ನು ಆಯೋಜಿಸಿದ್ದವು.
ಇದನ್ನೂ ಓದಿ: ಕಲಬುರಗಿಯಲ್ಲಿಂದು 'ಕಲ್ಯಾಣ ಕ್ರಾಂತಿ' ಕಾಂಗ್ರೆಸ್ ಸಮಾವೇಶ; ಡಾ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ; ನಾಯಕರು ಭಾಗಿ
ಖರ್ಗೆ ಅವರು ವೇದಿಕೆ ಬಳಿ ಬಂದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರ ಮುಖಂಡರು ಎದ್ದು ನಿಂತು ಗೌರವ ಸೂಚಿಸಿದರು. ಖರ್ಗೆ ಅವರನ್ನು ವೇದಿಕೆಗೆ ಕರೆತರಲು ಡಿಕೆ.ಶಿವಕುಮಾರ್ ಅವರು ಮೆಟ್ಟಿಲು ಬಳಿ ತೆರಳಿದರು. ಆದರೆ ಸಿದ್ದರಾಮಯ್ಯ ಅವರು ಮಾತ್ರ ಕುಳಿತಿದ್ದ ಕುರ್ಚಿಯಿಂದ ಮೇಲೆ ಎದ್ದು ನಿಂತಿರಲಿಲ್ಲ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂಬಂಧ ಖರ್ಗೆ ಅವರ ಕಟ್ಟಾ ಅನುಯಾಯಿಯಾಗಿರುವ ಕೆಪಿಸಿಸಿ ಉಪಾಧ್ಯಕ್ಷ ಡಿ.ಶರಣಪ್ರಕಾಶ್ ಪಾಟೀಲ್ ಅವರನ್ನು ಸಂಪರ್ಕಿಸಲಾಗಿದ್ದು, ಈ ಘಟನೆಯನ್ನು ನಾನು ಗಮನಿಸಲಿಲ್ಲ ಎಂದಿದ್ದಾರೆ.