ರಾಜಕೀಯ

ಹೊಂಬಾಳೆ ಸಂಸ್ಥೆಗೂ ಕಾಂಗ್ರೆಸ್ ಆರೋಪಕ್ಕೂ ಸಂಬಂಧ ಇಲ್ಲ, ಅವರು ಒಳ್ಳೆ ಕೆಲಸ ಮಾಡಲ್ಲ, ಮಾಡುವವರನ್ನು ಬಿಡಲ್ಲ: ಸಚಿವ ಅಶ್ವಥ ನಾರಾಯಣ

Sumana Upadhyaya

ಬೆಂಗಳೂರು: ಬಿಜೆಪಿ ಸರ್ಕಾರ ಮತದಾರರ ಗುರುತಿನ ಚೀಟಿ ಹಗರಣದಲ್ಲಿ ಭಾಗಿಯಾಗಿದೆ, ವೋಟರ್ ಐಡಿ ಅಕ್ರಮದ ಹಿಂದೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಕೈವಾಡವಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಹೊಂಬಾಳೆ ಸಂಸ್ಥೆಗೂ ವೋಟರ್ ಐಡಿ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ, ಇದ್ದರೆ ನೀವೇ ತನಿಖೆ ಮಾಡಿ ನೋಡಿ, ನನ್ನ ಸೋದರರ ವ್ಯವಹಾರಕ್ಕೂ ಇದಕ್ಕೂ ಯಾವುದೇ ಸಂಬಂಧಗಳಿಲ್ಲ. ಹೊಂಬಾಳೆ ಪ್ರತಿಷ್ಠಿತವಾದ ಒಂದು ಸಂಸ್ಥೆಯಾಗಿದ್ದು ನಾಡಿಗೆ, ಭಾಷೆಗೆ ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಗೌರವ ತಂದ ಸಂಸ್ಥೆಯದು. ಸುಖಾಸುಮ್ಮನೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಮಟ್ಟದವರಲ್ಲ, ಈ ನಾಡಿಗೆ ಭಾರವಾಗಿರುವವರಲ್ಲ, ಈ ನಾಡಿಗೆ ಗೌರವ ತಂದವರು, ಅವರಿಗೂ ಕಾಂಗ್ರೆಸ್ ನವರಿಗೂ ಏಕೆ ಹೋಲಿಕೆ ಮಾಡುವುದು ಎಂದು ವ್ಯಂಗ್ಯವಾಗಿ ಕೇಳಿದರು. 

ಕಾಂಗ್ರೆಸ್​ ನಾಯಕರು ಏನೋ ಹೇಳಿಕೆ ಕೊಡಬೇಕಿತ್ತು ಕೊಟ್ಟಿದ್ದಾರೆ. ಇವರಂತೂ ನಾಡಿಗೆ ಒಳ್ಳೆ ಕೆಲಸ ಮಾಡಿಲ್ಲ, ಒಳ್ಳೆ ಕೆಲಸ ಮಾಡುವವರನ್ನಾದರೂ ಅವರ ಪಾಡಿಗೆ ಬಿಡಲಿ. ಡಿ ಕೆ ಶಿವಕುಮಾರ್ ಗೆ ನನ್ನ ಮೇಲೆ ಬಹಳ ಪ್ರೀತಿ ಅಂತ ಕಾಣುತ್ತದೆ, ಅದಕ್ಕೆ ಪದೇ ಪದೇ ವಿವಾದಗಳಿಗೆಲ್ಲ ನನ್ನ ಹೆಸರನ್ನು ಎಳೆದು ತರುತ್ತಾರೆ, ತಮ್ಮ ತಪ್ಪನ್ನು ಕಾಂಗ್ರೆಸ್ ನವರು ನಮ್ಮ ಮೇಲೆ ಹಾಕುತ್ತಿದ್ದಾರೆ, ಕಳ್ಳನ ಮನಸ್ಸು ಹುಳ್ಳುಹುಳ್ಳಗೆ ಎಂದರು.

ಚುನಾವಣಾ ಆಯೋಗದ ಸೂಚನೆ ಅಡಿಯಲ್ಲಿ ಇದು ನಡೆಯುವ ಕ್ರಿಯೆ, ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ರವಿ ಕುಮಾರ್ ಯಾರು ಎಂದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. 

SCROLL FOR NEXT