ರಾಜಕೀಯ

ಇಡೀ ಕಾಂಗ್ರೆಸ್ ಪಕ್ಷದ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ, ಅಂಥವರು ನಮಗೆ ಭ್ರಷ್ಟಾಚಾರದ ನೈತಿಕ ಪಾಠ ಮಾಡುತ್ತಾರೆ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ರಾಜ್ಯದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ, ಪೇ ಸಿಎಂ ಅಭಿಯಾನ ಮಾಡಿದ್ದಾರೆ. ರಾಹುಲ್ ಗಾಂಧಿ, ಅವರ ರಾಷ್ಟ್ರೀಯ ಅಧ್ಯಕ್ಷರು ಸೋನಿಯಾ ಗಾಂಧಿಯವರು ಬೇಲ್ ಮೇಲೆ ಹೊರಗಿದ್ದಾರೆ. ಇಲ್ಲಿನ ಅಧ್ಯಕ್ಷರು ಕೂಡ ಬೇಲ್ ಮೇಲೆ ಹೊರಗಿದ್ದಾರೆ. ಇಂತಹವರಿಂದ ನಾವು ನೈತಿಕತೆಯ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ಮತ್ತು ಭಾರತದ ಜನತೆ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಮುಂಬರುವ 2023 ರ ಚುನಾವಣೆಯಲ್ಲಿಯೂ ಕೂಡ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ.  ನಿನ್ನೆ ಸಿದ್ದರಾಮಯ್ಯ ಅವರು ಅರು ತಿಂಗಳಾದ ಮೇಲೆ ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿರುವುದು ಕನಸು. ಅವರ ಕನಸಾಗಿಯೇ ಉಳಿಯುತ್ತದೆ. ಇನ್ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅನ್ನುವುದು ಕನಸಿನ ಮಾತು ಎಂದು ಸಿಎಂ ಬೊಮ್ಮಾಯಿ‌ ನುಡಿದರು.

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಜತೆ ಜತೆಯಾಗಿಯೇ ಪಾದಯಾತ್ರೆ ಮಾಡಬೇಕು. ನಾವು ಅದಕ್ಕೆ ಬೇಡ ಅಂದಿಲ್ಲ‌. ಅವರು ಜೊತೆ ಜೊತೆಯಾಗಿ ಬಂದಾಗಲೇ ರಾಜಕಾರಣ ಸರಿ ಅಗುತ್ತದೆ. ಒಬ್ಬರು ಮುಂದೆ ಹೋಗಿ ಇನ್ನೊಬ್ಬರು ಹಿಂದೆ ಇರಬಾರದು. ಅವರಿಬ್ಬರೂ ಒಟ್ಟಿಗೆ ಇದ್ದಷ್ಟು ನಮಗೆ ಒಳ್ಳೆಯದು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಭಾರತ ಜೋಡೋ ಯಾತ್ರೆಗೆ ಜನಸಾಮಾನ್ಯರಿಂದ  ಪ್ರತಿಕ್ರಿಯೆ ಬರುತ್ತಿಲ್ಲ. ಕಷ್ಟಪಟ್ಟು ಬೇರೆ ಬೇರೆ ತಾಲ್ಲೂಕಿನಿಂದ ಜನರನ್ನು ಕರೆದುಕೊಂಡು ಬಂದು ಪ್ರದರ್ಶನ ಮಾಡುತ್ತಿದ್ದಾರೆ. ಅವರ ಜೊತೆಗೆ ಪಾದೆಯಾತ್ರೆ ಮಾಡುವವರ ಜನಸಂಖ್ಯೆ ಕಡಿಮೆಯಿದೆ. ಅಲ್ಲಲ್ಲಿ ಅಷ್ಟೇ ಜನರಿದ್ದಾರೆ, ಇಂದೊಂದು ತರಹ ಶೋ. ಕಾಂಗ್ರೆಸ್ ನವರು , ರಾಹುಲ್ ಗಾಂಧಿ ತಮ್ಮ ರಾಜಕೀಯ ಆಸ್ತಿತ್ವ ಉಳಿಸಿಕೊಳ್ಳಲು ಈ ಶೋ ಮಾಡುತ್ತಿದ್ದಾರೆ ಎಂದರು.

ನಿನ್ನೆ ಮತ್ತು ಇವತ್ತು ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ನಾನು ಅದನ್ನು ಗಮನಿಸಿದ್ದು, ಇಷ್ಟು ಸಣ್ಣಮಟ್ಟದ ರಾಜಕಾರಣವನ್ನು ಮಾಡುವುದಕ್ಕೆ ನಾವು ಬಯಸುವುದಿಲ್ಲ. ಅವರು ಪಾದಯಾತ್ರೆ ಮಾಡಿಕೊಂಡು ಹೋಗಲಿ. ಜನರು ತೀರ್ಮಾನ ಮಾಡುತ್ತಾರೆ ಎಂದರು. ಕೀಳು ಮಟ್ಟದ ಮಾತುಗಳು, ಅಧಿಕಾರಿಗಳಿಗೆ ಹೆದರಿಸುವುದು ನಡೆಯುವುದಿಲ್ಲ. ಇದನ್ನು ನಾನು ಸ್ಪಷ್ಟಪಡಿಸುತ್ತೇನೆ.  ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ  ಎಂದು ಸಿಎಂ ಬೊಮ್ಮಾಯಿ‌ ನುಡಿದರು.

SCROLL FOR NEXT