ಮೈಸೂರು: ರಾಹುಲ್ ಗಾಂಧಿಯವರ ಸಾರಥ್ಯದ ಕಾಂಗ್ರೆಸ್ ನ ಭಾರತ ಐಕ್ಯತಾ ಯಾತ್ರೆ ಕರ್ನಾಟಕದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಪದಾರ್ಪಣೆ ಮಾಡಿತು. ವಿಧಾನಸಭೆ ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ನೂರಾರು ನಾಯಕರು, ಕಾಂಗ್ರೆಸ್ ಕಾರ್ಯಕರ್ತರು ಅವರು ರಾಹುಲ್ ಗಾಂಧಿಯವರೊಂದಿಗೆ ನಡಿಗೆಯಲ್ಲಿ ಭಾಗಿಯಾದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರು ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo Yatra) ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ(Priyanka Gandhi) ಮೈಸೂರಿಗೆ ಆಗಮಿಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸೋನಿಯಾ ಆಗಮಿಸಲಿದ್ದಾರೆ.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಸದ್ಯ ಮೈಸೂರಿಗೆ ತಲುಪಿದ್ದು ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಯಾತ್ರೆಯಲ್ಲಿ ಭಾಗಿಯಾಗುವ ಮುನ್ನ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳುವ ಸಾಧ್ಯತೆ ಇದೆ. ನಂತರ ಮತ್ತೆ ಹೆಲಿಕಾಫ್ಟರ್ ಮೂಲಕ ಕೊಡಗಿಗೆ ತೆರಳಲಿದ್ದಾರೆ. ಕೊಡಗಿನ ರೆಸಾರ್ಟ್ ವೊಂದರಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಸಂಜೆ ವೇಳೆಗೆ ರಾಹುಲ್ ಗಾಂಧಿ ಕೂಡ ಕೊಡಗಿಗೆ ಹೋಗಿ ಕುಟುಂಬದ ಜೊತೆ ಎರಡು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಅಕ್ಟೋಬರ್ 4 ಹಾಗೂ 5ರಂದು ಪಾದಯಾತ್ರೆಗೆ ವಿರಾಮ ಇರಲಿದೆ.
ಇದನ್ನೂ ಓದಿ: 29 ವರ್ಷಗಳ ವೈಷಮ್ಯ, ದ್ವೇಷ ಮರೆದು ಒಂದಾದ ಲಿಂಗಾಯತರು-ದಲಿತರು: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕೃಪೆ!
ಬಳಿಕ ಅಕ್ಟೋಬರ್ 6 ರಂದು ಮಂಡ್ಯ ಜಿಲ್ಲೆಯ ಮಹದೇಶ್ವರಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದೆ. ಈ ಯಾತ್ರೆಯಲ್ಲಿ ರಾಹುಲ್, ಸೋನಿಯಾ ಭಾಗಿಯಾಗಲಿದ್ದಾರೆ. ಅಕ್ಟೋಬರ್ 7 ರಂದು ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು ಸಹೋದರ ರಾಹುಲ್ ಜೊತೆಗೆ ನಾಗಮಂಗಲದಲ್ಲಿ ಹೆಜ್ಜೆ ಹಾಕಲಿದ್ದಾರೆ. ಆದಿ ಚುಂಚನಗಿರಿ ಮಠಕ್ಕೂ ಪ್ರಿಯಾಂಕಾ ಗಾಂಧಿ ಭೇಟಿ ನೀಡುವ ಸಾಧ್ಯತೆ ಇದೆ.