ಮೈಸೂರು: ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಪಂಥಾಹ್ವಾನ ನೀಡಿದ ವಿಚಾರವಾಗಿ, ಇದೀಗ ಶ್ರೀರಂಗಪಟ್ಟಣ ಶಾಸಕ ರವಿಂದ್ರ ಶ್ರೀ ಕಂಠಯ್ಯಾ ತಿರುಗೇಟು ನೀಡಿದ್ದಾರೆ.
ದೆವ್ವದ ಜೊತೆ ಆಣೆ ಪ್ರಮಾಣಕ್ಕೆ ಹೋಗುತ್ತಾರಾ. ಸಂಸದೆ ಮಾತು ಕೇಳಿದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದ ರೀತಿ ಆಗುತ್ತಿದೆ ಎಂದು ಹೇಳಿದ್ದಾರೆ.
ಅವರು ಕರೆದಾಕ್ಷಣ ಹೋಗಲಾಗುವುದಿಲ್ಲ, ಉತ್ತಮರು ಕರೆದರೇ ಹೋಗಬಹುದು, ದೆವ್ವ ಕರೆದರೆ ಹೋಗಲು ಆಗುತ್ತಾ? ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಲು ಸಾಧ್ಯವೇ?” ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಟಾಂಗ್ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರನ್ನು ಆಣೆ ಪ್ರಮಾಣ ಮಾಡಲು ಬರುವಂತೆ ಸುಮಲತಾ ಅವರು ಆಹ್ವಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಸುಮಲತಾ ಜತೆಯಲ್ಲಿರುವವರು ಭ್ರಷ್ಟಾತಿಭ್ರಷ್ಟರು. ಮೈಸೂರು ಬೆಂಗಳೂರು ಹೈವೇ ಕಾಮಗಾರಿಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ. ಆ ಅಕ್ರಮಗಳಲ್ಲಿ ಸುಮಲತಾ ಬೆಂಬಲಿಗರು ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: ಮಂಡ್ಯಾನ ನಾನು ಬಿಡಲ್ಲ, ನನ್ನ ಮಂಡ್ಯ ಬಿಡಲ್ಲ; ಹಗಲುಗನಸು ಕಾಣುವವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ಸಂಸದೆ ಸುಮಲತಾ
ಸಂಸದೆಯ ಸುತ್ತ ಇರುವವರೆಲ್ಲಾ ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿರುವ ಜನ. ನೂರಾರು ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡಿದ ದೊಡ್ಡ ಗ್ಯಾಂಗ್ ಸಂಸದರ ಸುತ್ತ ಇದೆ. ಇವರು ನಮ್ಮ ಶಾಸಕರ ಬಗ್ಗೆ ಮಾತನಾಡುತ್ತಾರೆ. ಇಂತಹ ಸಂಸದೆ ಕರೆದಾಗ ಆಣೆ ಪ್ರಮಾಣಕ್ಕೆ ಹೋಗುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದರು.
ಸುಮಲತಾ ಏಟ್ರಿಯಾ ಹೋಟೆಲ್ ಗೆ ಏಕೆ ಹೋಗಿದ್ದರು? ಹೋಟೆಲ್ ನಲ್ಲಿ ಕುಳಿತು ಅವರು ಏನು ಮಾಡಿದರು ಎಂಬುದರ ವಿಡಿಯೋ ದಾಖಲೆಗಳಿವೆ. ಸೂಕ್ತ ಸಂದರ್ಭದಲ್ಲಿ ಆ ವಿಡಿಯೋ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಸುಮಲತಾ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ.ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದುಕಿಡಿ ಕಾರಿದರು.