ರಾಜಕೀಯ

ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಮಸೂದೆ ಜಾರಿಗೆ ಅಧಿವೇಶನ ಕರೆಯಿರಿ: ಸರ್ಕಾರಕ್ಕೆ ಸಿದ್ದರಾಮಯ್ಯ

Manjula VN

ರಾಯಚೂರು: ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬದಲು ಎರಡು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ಕರೆದು ವಿಧೇಯಕವನ್ನು ಅಂಗೀಕರಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. 

ಭಾರತ್ ಜೋಡೋ ಪಾದಯಾತ್ರೆ ವೇಳೆ ರಾಯಚೂರಿನ ಗಿಲ್ಲೆಸುಗೂರಿನಲ್ಲಿ ಮಾತನಾಡಿದ ಅವರು, ಡಿಸೆಂಬರ್‌ವರೆಗೆ ಅಧಿವೇಶನಕ್ಕೆ ಯಾಕೆ ಕಾಯಬೇಕು. ಒಂದು ವಾರದ ಒಳಗೆ ಕರೆಯಿರಿ. ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದ ಮೇಲೆ ದೆಹಲಿಯಲ್ಲಿ ಕುಳಿತು 9 ಶೆಡ್ಯೂಲ್ ಮಾಡಿ. ಅಡ್ಡ ದಾರಿ ಹಿಡಿಯಬೇಡಿ ಎಂದು ಹೇಳಿದರು. 

ಇದೇ ವೇಳೆ ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ ವಿರುದ್ಧವಾಗಿದೆ ಎಂಬ ಬೊಮ್ಮಾಯಿ ಆರೋಪವನ್ನು ತಳ್ಳಿಹಾಕಿದ ಅವರು, ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರಿಯಾಂಕ್ ಖರ್ಗೆ ಸಚಿವರಿದ್ದಾಗ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಸಮಿತಿ ವರದಿ ಬಂದಾಗ ನಮ್ಮ ಸರ್ಕಾರ ಇರಲಿಲ್ಲ. ವರದಿ ಕೊಟ್ಟು ಎರಡು ವರ್ಷದ ಮೂರು ತಿಂಗಳಿಗೂ ಜಾಸ್ತಿಯಾಗಿದೆ. ವರದಿ ಬಂದಾಗಿನಿಂದಾಗಲೂ ಎಸ್‌ಸಿ, ಎಸ್‌ಟಿ ಶಾಸಕರು‌ ಧ್ವನಿ ಎತ್ತಿದ್ದರು. ಕೊನೆ ಅಧಿವೇಶನದಲ್ಲಿ ಶಾಸಕರು ಬಾವಿಗಿಳಿದು ಹೋರಾಟ ಮಾಡಿದಾಗ ಸಿಎಂ ಸರ್ವಪಕ್ಷ ಶಾಸಕರ ಸಭೆ ಕರೆಯುತ್ತೇನೆ ಅಂತ ಹೇಳಿದರು. ಎಸ್‌ಟಿಗೆ ಶೇ.3 ರಿಂದ 7ರಷ್ಟು ಹೆಚ್ಚು ಮಾಡಬೇಕು. ಎಸ್‌ಸಿಗೆ ಶೇ.15 ರಿಂದ 17ರಷ್ಟು ಆಗಬೇಕು. ಒಟ್ಟು ಶೇ.24 ಆಗಬೇಕು ಅಂತ ವರದಿಯಲ್ಲಿದೆ. ಮೀಸಲಾತಿ ಸಾಮಾನ್ಯವಾಗಿ ಶೇ.50 ಗಿಂತ ಹೆಚ್ಚಾಗಬಾರದು ಅನ್ನೋ ಜಡ್ಜ್‌ಮೆಂಟ್ ಉಲ್ಲಂಘನೆಯಾಗುತ್ತದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರುವುದರಿಂದ ಇದಕ್ಕೆ ಸಂವಿಧಾನ ತಿದ್ದುಪಡಿ ಆಗಬೇಕು. ಒಂದು ವಾರ ದೆಹಲಿಯಲ್ಲಿ ಕೂತು 9 ಶೆಡ್ಯೂಲ್‌ನಲ್ಲಿ ಸೇರಿಸಿ, ಸುಗ್ರೀವಾಜ್ಞೆ ಬೇಡ ಎಂದು ಒತ್ತಾಯಿಸಿದರು.

SCROLL FOR NEXT