ರಾಜಕೀಯ

ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಫರ್ ಅಲಿ ನಾಮಪತ್ರ ತಿರಸ್ಕೃತ

Lingaraj Badiger

ಬೆಂಗಳೂರು: ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ‌ಅಬ್ದುಲ್ ಜಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಜೆಡಿಎಸ್​ಗೆ ಆರಂಭದಲ್ಲೇ ಆಘಾತ ಎದುರಾಗಿದೆ.

ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಜಾಫರ್ ಅಲಿ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲದಿರುವುದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ನಾಮಪತ್ರ ತಿರಸ್ಕೃತ ಆಗಿರುವುದನ್ನು ಶಿವಾಜಿನಗರ ಆರ್‌ಓ ಬಸವರಾಜ್ ಸೋಮಣ್ಣನವರ್ ದೃಢಪಡಿಸಿದ್ದಾರೆ.

ರಾಜ್ಯದ 220 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಶುಕ್ರವಾರ ಪೂರ್ಣಗೊಂಡಿತ್ತು. ಆದರೆ ತಕರಾರುಗಳಿದ್ದ ಕಾರಣ ಶಿವಾಜಿನಗರ ಔರಾದ್, ಸವದತ್ತಿ ಹಾಗೂ ಹಾವೇರಿ ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಬಾಕಿ ಉಳಿದಿತ್ತು. ತಕರಾರು ಕುರಿತು ವಿಚಾರಣೆ ನಡೆಸಿದ ಚುನಾವಣಾ ಅಧಿಕಾರಿಗಳು ಶಿವಾಜಿನಗರ ಜೆಡಿಎಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ನಂತರ ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್​ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಕಣದಲ್ಲಿದ್ದರೆ, ಬಿಜೆಪಿಯಿಂದ ಎನ್ ಚಂದ್ರ ಅವರು ಸ್ಪರ್ಧಿಸಿದ್ದಾರೆ.

SCROLL FOR NEXT