ರಾಜಕೀಯ

ಆಡಳಿತ-ವಿರೋಧ ಪಕ್ಷಗಳ ನಡುವೆ ತಿಕ್ಕಾಟ: ರಾಜಭವನದಲ್ಲಿ ನಿರಂತರ ಚಟುವಟಿಕೆ; ಬ್ಯುಸಿಯಾಗಿರುವ ರಾಜ್ಯಪಾಲರು!

Shilpa D

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಯು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ಕಾರ್ಯನಿರತರಾಗಿರುವಂತೆ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜಭವನಕ್ಕೆ ಜನರಿಂದ ಮಾತ್ರವಲ್ಲದೆ ಕೆಲವು ಅಧಿಕಾರಿಗಳು ಸರ್ಕಾರ ಮತ್ತು ಸಚಿವರ ವಿರುದ್ಧ ಅನೇಕ ದೂರು ನೀಡುತ್ತಿದ್ದಾರೆ.

ಇತ್ತೀಚೆಗಷ್ಟೇ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ “ನಕಲಿ” ಪತ್ರ ದೊಡ್ಡಗಾದಿ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ರಾಜ್ಯಪಾಲರ ಬಳಿಗೆ ತೆಗೆದುಕೊಂಡು ಹೋಗಿದ್ದು ಮಧ್ಯಸ್ಥಿಕೆ ವಹಿಸಿ ಕ್ರಮ ತೆಗೆದುಕೊಳ್ಳಲು ಮನವಿ ಮಾಡಲಾಗುತ್ತಿದೆ.

ಪ್ರಮುಖ ವಿರೋಧ ಪಕ್ಷವಾಗಿರುವ  ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನು ಶೀಘ್ರವೇ ಆಯ್ಕೆ ಮಾಡಬೇಕಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಚಲುವರಾಯಸ್ವಾಮಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಏಳು ಮಂದಿ ಕೃಷಿ ಅಧಿಕಾರಿಗಳು ರಾಜಭವನಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲಿಯೂ ರಾಜ್ಯಪಾಲರು  ಮದ್ಯ ಪ್ರವೇಶಿಸಿದ್ದಾರೆ. ಕೃಷಿ ಸಚಿವರ ಮೇಲಿನ ಆರೋಪದ ಬಗ್ಗೆ ಪರಿಶೀಲಿಸುವಂತೆ ರಾಜ್ಯಪಾಲರ ಕಚೇರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು.

ಚಲುವರಾಯಸ್ವಾಮಿ ಅವರು ಲಂಚ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಸಚಿವರು ಈ ಪತ್ರ ನಕಲಿ ಎಂದು ಹೇಳಿದ್ದಾರೆ. 

ತಮ್ಮ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ಈ ರೀತಿ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ವಿಷಯ ವಿವಾದಕ್ಕೆ ಕಾರಣವಾದಾಗ, ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರ ಸಂಘದ ಸದಸ್ಯರು ರಾಜ್ಯಪಾಲರನ್ನು ಭೇಟಿಯಾಗಿ 2019ರಿಂದ 2023ರವರೆಗಿನ ಕಾಮಗಾರಿಗಳ ಬಿಲ್‌ಗಳನ್ನು ಮಂಜೂರು ಮಾಡಲು ಮಧ್ಯಸ್ಥಿಕೆ ವಹಿಸುವಂತೆ ಮನವಿ ಪತ್ರ ಸಲ್ಲಿಸಲಾಗಿದೆ.  

ಕೆಲವು ದಿನಗಳ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ 10 ಬಿಜೆಪಿ ಶಾಸಕರನ್ನು ವಿಧಾನಸಭೆಯ ಸ್ಪೀಕರ್ ಅಮಾನತುಗೊಳಿಸಿದ ನಂತರ ಅವರ ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದಾರೆ. ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಮಾವೇಶಕ್ಕೆ ಸರ್ಕಾರ ಕೆಲವು  ಐಎಎಸ್ ಅಧಿಕಾರಿಗಳನ್ನು  ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿದ್ದರು.

SCROLL FOR NEXT