ರಾಜಕೀಯ

ಬಿಜೆಪಿಯವರು ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಡಿ ಕೆ ಶಿವಕುಮಾರ್ ಸವಾಲು

Sumana Upadhyaya

ಬೆಂಗಳೂರು: ನೂರು ದಿನಗಳ ಆಡಳಿತ ಪೂರೈಸಿರುವ ಸಂಭ್ರಮದಲ್ಲಿರುವ ರಾಜ್ಯ ಸರ್ಕಾರ ಇಂದು ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುತ್ತಿದೆ. ಕಾಂಗ್ರೆಸ್ ನ ರಾಷ್ಟ್ರ ನಾಯಕರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗಳನ್ನು ವಿಳಂಬ ಮಾಡುವಲ್ಲಿ ಸರ್ಕಾರ ಎಡವಿದೆ. ದಿಕ್ಕು ತಪ್ಪಿದೆ, ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ನಿನ್ನೆ ನೂರು ದಿನ ನೂರು ವೈಫಲ್ಯ ಶೀರ್ಷಿಕೆಯಡಿ ಬಿಜೆಪಿ ನಾಯಕರು ಜಾರ್ಜ್‌ಶೀಟ್ ಬಿಡುಗಡೆ ಮಾಡಿದ್ದರು. ಇದರಲ್ಲಿ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಡಿಕೆ ಶಿವಕುಮಾರ್ ವಿರುದ್ಧ ಕೂಡ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯವರು ಆರೋಪ ಸಾಬೀತು ಮಾಡಲಿ. ಇವರದ್ದನ್ನು ಬಿಚ್ಚೋ ಕಾಲ ಬರುತ್ತದೆ ಬಿಚ್ಚುತ್ತೇನೆ. ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಗುಡುಗಿದರು. 

ಇಂದು ಹಬ್ಬದ ವಾತಾವರಣ: ನೂರು ದಿನದಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮೊದಲ ಕ್ಯಾಬಿನೆಟ್​​ನಲ್ಲೇ ಎಲ್ಲಾ ಗ್ಯಾರಂಟಿ ಇತ್ಯರ್ಥ ಮಾಡಿದ್ದೇವೆ. ಬಿಜೆಪಿಯವರದ್ದು ಭರವಸೆ, ನಮ್ಮದು ಗ್ಯಾರಂಟಿ. ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುತ್ತಿದ್ದು, ನಾಡಿನೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರ ಮನೆಗಳಲ್ಲಿ ಹೆಣ್ಣು ಮಕ್ಕಳು ಹಬ್ಬದ ಸಂಭ್ರಮದಲ್ಲಿದ್ದಾರೆ. 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ, ಸಿಎಂ ಸಿದ್ದರಾಮಯ್ಯ, ನಾನು ಚೆಕ್​ಗೆ ಸಹಿ ಹಾಕಿದ್ದು, ಯಜಮಾನಿಯರ ಬ್ಯಾಂಕ್​ ಖಾತೆಗೆ 2000 ರೂಪಾಯಿ ಹಣ ಜಮೆಯಾಗುತ್ತೆ ಎಂದರು.

SCROLL FOR NEXT