ರಾಜಕೀಯ

ರಾಮಕೃಷ್ಣ ಹೆಗಡೆಯವರಿಗೆ ಕಲ್ಲು ಹೊಡೆದವರು ಯಾರು? ರಕ್ತದಲ್ಲೇ ಬ್ರಾಹ್ಮಣ ವಿರೋಧಿತನ ಇದೆ; 3 ಜಿಲ್ಲೆ ಇಟ್ಟುಕೊಂಡು ಸಿಎಂ ಆಗುವ ಕನಸೇತಕೆ?

Shilpa D

ಭಟ್ಕಳ: ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರಿಗೆ ಕಲ್ಲು ಹೊಡೆದವರು ಯಾರು? ಅವರ ರಕ್ತದಲ್ಲೇ ಬ್ರಾಹ್ಮಣ ವಿರೋಧಿತನ ಇದೆ. ರಾಮಕೃಷ್ಣ ಹೆಗಡೆಯವರ ಕಾಲದಿಂದಲೇ ದಾಳಿ ಮಾಡುತ್ತಾ ಬಂದವರು. ಈಗ ಬಾಯಲ್ಲಿ ನೇರವಾಗಿ ಹೇಳಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹರಿಹಾಯ್ದಿದ್ದಾರೆ.

ಭಟ್ಕಳದಲ್ಲಿ ಮಾತನಾಡಿದ ಅವರು, ಇಷ್ಟು ದಿನ ಕಲ್ಲಲ್ಲಿ ಹೊಡೆಯುತ್ತಿದ್ದರು. ಬ್ರಾಹ್ಮಣ ಸಮುದಾಯವನ್ನ ಕೀಳಾಗಿ ನೋಡುವ, ಸಮುದಾಯಕ್ಕೆ ಅಪಮಾನ ಮಾಡುವ, ತುಚ್ಛವಾಗಿ ಕಾಣುವುದು ಒಬ್ಬ ಮಾಜಿ ಮುಖ್ಯಮಂತ್ರಿಗೆ ಶೋಭೆಯಲ್ಲ ಎಂದರು.

‘ಎಚ್‌ಡಿಕೆ ಅವರಿಗೆ ಮೂರು ಜಿಲ್ಲೆಯಲ್ಲಷ್ಟೆ ಪ್ರಭಾವವಿದೆ. ಮತ್ತೆ ಸಿ.ಎಂ ಆಗುವ ಕನಸು ಹೊತ್ತು ತಿರುಗಾಡುತ್ತಿದ್ದಾರೆ. ಅಧಿಕಾರಕ್ಕೆ ಏರಲಾಗದು ಎಂಬುದು ಅರಿವಾಗುತ್ತಿದ್ದಂತೇ ಜಾತಿ ಹೇಳಿಕೆ ನೀಡುತ್ತಿದ್ದಾರೆ’  ಈ ಬಾರಿ ಕಳೆದ ಬಾರಿಯಷ್ಟೂ ಅವರು ಗೆಲ್ಲಲ್ಲ. ಕಳೆದ ಬಾರಿ ಯಾರ್ಯಾರದ್ದೋ ಸಹಾಯದಿಂದ ಗೆದ್ದಿದ್ದಾರೆ. ಈ ಬಾರಿ 20ಕ್ಕಿಂತ ಮೇಲೆ ಅವರು ಹೋಗಲ್ಲ. ಸರ್ವೆ ರಿಪೋರ್ಟ್ ನಲ್ಲಿ ಅವರಿಗೆ 20 ಸ್ಥಾನವನ್ನೂ ಮುಟ್ಟಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಮಾನಸಿಕ ಚಂಚಲತೆಯಿಂದ ಮಾತನಾಡುತ್ತಿದ್ದಾರೆ ಎಂದರು‌.

ಈ ಬಾರಿ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಲ್ಲ. ಬದಲಿಗೆ, ಸಾರ್ವಕರ್ ಹಾಗೂ ಟಿಪ್ಪು ಸಿದ್ಧಾಂತಗಳ ನಡುವೆ ನಡೆಯಲಿದೆ. ದೇಶಭಕ್ತ ಸಾವರ್ಕರ್ ಬೇಕಾ ಅಥವಾ ಮತಾಂಧ ಟಿಪ್ಪು ಬೇಕಾ ಎಂದು ಜನ ತೀರ್ಮಾನಿಸುತ್ತಾರೆ’ ಎಂದು ಕಟೀಲ್ ತಿಳಿಸಿದ್ದಾರೆ.

SCROLL FOR NEXT