ರಾಜಕೀಯ

2028ಕ್ಕೆ ಚನ್ನಪಟ್ಟಣದಿಂದ ಸ್ಪರ್ಧಿಸುವುದಿಲ್ಲ; ಹಾಸನದ ಗೊಂದಲಕ್ಕೆ ಸದ್ಯದಲ್ಲೇ ತೆರೆ: ಎಚ್‌.ಡಿ ಕುಮಾರಸ್ವಾಮಿ

Srinivasamurthy VN

ಚನ್ನಪಟ್ಟಣ: ಚನ್ನಪಟ್ಟಣದ ಅಭ್ಯರ್ಥಿಯಾಗಿ 2023ರ ಚುನಾವಣೆ ನನ್ನ ಕೊನೆಯ ಚುನಾವಣೆ. 2028ರಲ್ಲಿ ಇಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಸೋಮವಾರ ಹೇಳಿದ್ದಾರೆ. 

ಚನ್ನಪಟ್ಟಣದಲ್ಲಿ ಸೋಮವಾರ ಬಮುಲ್‌ ಉತ್ಸವದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘2028ರಲ್ಲಿ ಇಲ್ಲಿಂದ ಸ್ಪರ್ಧಿಸುವುದಿಲ್ಲ. ಇಲ್ಲಿನ ಕಾರ್ಯಕರ್ತರಿಗೇ ಟಿಕೆಟ್‌ ನೀಡುತ್ತೇನೆ. ನನಗೂ ರಾಜಕೀಯವಾಗಿ ವಿಶ್ರಾಂತಿಯ ಅಗತ್ಯವಿದೆ ಎಂದರು. 

ಹಾಸನದ ಗೊಂದಲಕ್ಕೆ ಸದ್ಯದಲ್ಲೇ ತೆರೆ
ಇನ್ನು ಹಾಸನ ಟಿಕೆಟ್ ಗೊಂದಲದ ಕುರಿತು ಮಾತನಾಡಿದ ಎಚ್ ಡಿಕೆ, ಹಾಸನದಲ್ಲಿ ಚುನಾವಣೆಗೆ ಅಭ್ಯರ್ಥಿ ಆಗಬೇಕು ಎಂದು ಆಸೆ ಇರುವವರು ಗೊಂದಲ ಸೃಷ್ಟಿಸುತ್ತಿದ್ದು, ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸದ್ಯದಲ್ಲೇ ಇದಕ್ಕೆಲ್ಲ ತೆರೆ ಎಳೆಯುತ್ತೇವೆ. ಸದ್ಯದಲ್ಲಿಯೇ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಲಿದ್ದು, ಅದರಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿಯ ಹೆಸರೂ ಇರಲಿದೆ. ನಿನ್ನೆ ಸ್ವರೂಪ್‌ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು. ಇವತ್ತು ಭವಾನಿ ರೇವಣ್ಣ ಪರವಾಗಿ ಕೆಲವರು ಪ್ರತಿಭಟಿಸಿದ್ದಾರೆ.   ದೇವೇಗೌಡರು ಸದ್ಯದ ಆರೋಗ್ಯ ಪರಿಸ್ಥಿತಿಯಲ್ಲಿ ಸ್ವಂತವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಒಟ್ಟಾಗಿ ಕೂತು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. 

ಅವನಿಗೆ ಇರುವುದು ಒಬ್ಬ ತಮ್ಮ. ಅವನನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ: ಪ್ರಹ್ಲಾದ್ ಜೋಷಿಗೆ ತಿರುಗೇಟು
ಇನ್ನು ಕುಮಾರಸ್ವಾಮಿ ಮೊದಲು ಕುಟುಂಬದ ಗೊಂದಲ ಸರಿಪಡಿಸಿಕೊಳ್ಳಲಿ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಮ್ಮನೆಯಲ್ಲಿ ಆರು ಜನ ಇದ್ದೇವೆ. ನಮ್ಮದು ದೊಡ್ಡ ಕುಟುಂಬ. ಆದರೆ ಅವನಿಗೆ ಇರುವುದು ಒಬ್ಬ ತಮ್ಮ. ಅವನನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ. ಆದರೂ ಕೆಣಕಿ ಅವರ ಬುಡಕ್ಕೆ ತಂದುಕೊಳ್ಳುತ್ತಾರೆ’ ಎಂದು ತಿರುಗೇಟು ನೀಡಿದರು.

ಮೆಡಿಕಲ್‌ ಕಾಲೇಜುಗಳಲ್ಲಿ ಅವ್ಯವಹಾರ ಕುರಿತು ಆರೋಗ್ಯ ಸಚಿವ ಸುಧಾಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ‘ ದಿನ ಬೆಳಿಗ್ಗೆ ನೇಮಕಾತಿ, ವರ್ಗಾವಣೆಗಳಿಗೆ ಇವರ ರೀತಿ ದುಡ್ಡು ತೆಗೆದುಕೊಂಡಿಲ್ಲ’ ಎಂದು ತಿರುಗೇಟು ನೀಡಿದರು. ಅಂತೆಯೇ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು ‘ ಮೋದಿ ರಾಜ್ಯಕ್ಕೆ ಇನ್ನೂ 10–20 ಸಲ ಬರಬಹುದು.  ಅದಕ್ಕೆ ನಾನು ಗಮನ ಕೊಡುವುದಿಲ್ಲ. ಯಾರು ಮಾಡದ ವಿಮಾನ ನಿಲ್ದಾಣ ಇವರೇನು ಮಾಡಿಲ್ಲ’ ಎಂದು ಟೀಕಿಸಿದರು.
 

SCROLL FOR NEXT