ರಾಯಚೂರು: ಹಾಸನ ಜಿಲ್ಲೆಯ ಜೆಡಿಎಸ್ ನಲ್ಲಿ ಟಿಕೆಟ್ ದಳ್ಳುರಿ ಜೋರಾಗಿದೆ. ದೇವೇಗೌಡರ ಕುಟುಂಬದೊಳಗೆ ಅಪಸ್ವರ, ಭಿನ್ನಮತ ಮೂಡಿದ್ದು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸೂರಜ್ ರೇವಣ್ಣ ಮಾತನಾಡಿ ಹಾಸನ ಟಿಕೆಟ್ ಬಗ್ಗೆ ಹೆಚ್ ಡಿ ದೇವೇಗೌಡರು ಮತ್ತು ರೇವಣ್ಣನವರ ತೀರ್ಮಾನವೇ ಅಂತಿಮ, ಹಾಸನವನ್ನು ರೇವಣ್ಣನವರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತಮ್ಮ ತಾಯಿಗೂ ಇಲ್ಲಿ ಜನಬೆಂಬಲವಿದ್ದು ಚೆನ್ನಾಗಿ ಕೆಲಸ ಮಾಡಿದ್ದಾರೆ, ಹೀಗಾಗಿ ತಮ್ಮ ತಾಯಿಗೆ ಟಿಕೆಟ್ ಸಿಗಬೇಕೆಂದು ರೆಬೆಲ್ ರೀತಿ ಮಾತನಾಡಿದ್ದರು.
ಅದಕ್ಕೆ ಪ್ರತಿಕ್ರಿಯೆ ಎಂಬಂತೆ ರಾಯಚೂರಿನಲ್ಲಿ ನಿನ್ನೆ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಮಾತನಾಡುತ್ತಾ ಅವರು ಭಾವಪರವಶರಾದರು. ನನಗೆ ನನ್ನ ತಂದೆ ಮುಖ್ಯ, ಅವರು ಕಟ್ಟಿ ಬೆಳೆಸಿದ ಪಕ್ಷವನ್ನು ಈ ಬಾರಿ 120 ಸೀಟು ಗೆಲ್ಲಿಸಿ ಅವರ ಜೀವನದ ಕೊನೆಯ ಹೊತ್ತಿಗೆ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ದೇವೇಗೌಡರು ಈಗ ಇರುವ ಸ್ಥಿತಿಯಲ್ಲಿ ಅವರ ಹೆಸರನ್ನು ರಾಜಕೀಯ ಭಿನ್ನಾಭಿಪ್ರಾಯಗಳಿಗೆ, ಹಾಸನ ವಿಚಾರಗಳಿಗೆ ತರಬೇಡಿ, ಅವರ ಜೀವ ಉಳಿಸುವುದು ನನಗೆ ಮುಖ್ಯವಾಗಿದೆ. ಹಾಸನ ಟಿಕೆಟ್ ವಿಚಾರದಲ್ಲಿ ಹೆಚ್ಡಿ ದೇವೇಗೌಡರ ಹೆಸರು ತರಬೇಡಿ. ನಾನು ಭಾವನಾತ್ಮಕ ಜೀವಿ. ಅವರು ಎಂತಹ ಪರಿಸ್ಥಿತಿಯಲ್ಲಿದ್ದಾರೆಂದು ನಮಗೆ ಮಾತ್ರ ಗೊತ್ತಿದೆ. ದೇವೇಗೌಡರ ಆಯುಷ್ಯ ಕಡಿಮೆ ಮಾಡುವುದು ನನಗೆ ಇಷ್ಟವಿಲ್ಲ, ಅವರು ಸಾಯುವುದಕ್ಕೆ ಮೊದಲು ಅವರ ಪಕ್ಷ ಉಳಿಯಬೇಕು ಎಂದು ಸಾಬೀತುಪಡಿಸಲು ನಾನು ಹೊರಟಿದ್ದೇನೆ ಎಂದು ತಂದೆಯ ಆರೋಗ್ಯದ ಬಗ್ಗೆ ಕೂಡ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.
ಹಾಸನ ಟಿಕೆಟ್ ವಿಚಾರವನ್ನು ಸರಿಪಡಿಸುವುದು ಹೇಗೆಂದು ಗೊತ್ತಿದೆ. ಆದರೆ ಯಾವುದೇ ಕಾರಣಕ್ಕೂ ದೇವೇಗೌಡರ ಹೆಸರು ತರಬೇಡಿ. ನಮ್ಮ ಮಕ್ಕಳು ದೇವೇಗೌಡರ ನಿರ್ಧಾರ ಅಂತಿಮವೆಂದು ಹೇಳಿರಬಹುದು. ಆದ್ರೆ ಹೆಚ್ಡಿಡಿ ಯಾವ ಪರಿಸ್ಥಿತಿಯಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ನಾನು ಜೆಡಿಎಸ್ ಪಕ್ಷಕ್ಕೆ 120 ಸೀಟ್ ತರಬೇಕೆಂದು ಓಡಾಡುತ್ತಿದ್ದೇನೆ. 120 ಸೀಟ್ ಗೆದ್ದು ಹೆಚ್ಡಿಡಿರವರಿಗೆ ಗಿಫ್ಟ್ ಕೊಡಬೇಕು ಅಂತಾ ಇದ್ದೇನೆ. ಗೊಂದಲಗಳನ್ನ ಸೃಷ್ಟಿ ಮಾಡಿ ಅವರಿಗೆ ತೊಂದರೆ ಕೊಡಲು ಇಷ್ಟವಿಲ್ಲ ಎಂದು ಹಾಸನ ರಾಜಕೀಯ ವಿಚಾರದಲ್ಲಿ ಮಾತನಾಡಿದರು.
ಸೂರಜ್ ರೇವಣ್ಣ ನಿನ್ನೆ ನೀಡಿದ್ದ ಹೇಳಿಕೆಗೆ ಪರೋಕ್ಷ ಟಾಂಗ್ ಕೊಟ್ಟಿರುವ ಹೆಚ್ಡಿಕೆ, ನಮ್ಮ ಮನೆ ಮಕ್ಕಳು ಶಕುನಿ ಮಾತು ಕೇಳಿ ಮಾತನಾಡಿದ್ದಾರೆ. ನಮ್ಮ ಮನೆ ಮಕ್ಕಳು ನಮ್ಮನ್ನು ಪ್ರಶ್ನಿಸುವುದು ದೊಡ್ಡ ವಿಷಯವಲ್ಲ. ಅವರೆಲ್ಲಾ ನಮ್ಮ ಹುಡುಗರೇ ಮಾತನಾಡಿದ್ದಾರೆ. ನಾವು ಮನೆಯಲ್ಲಿ ಕೂತುಕೊಂಡು ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಹಾಭಾರತದಲ್ಲಿ ನಡೆದಿದ್ದೇ ಇಲ್ಲೂ ನಡೆಯುತ್ತಿದೆ. ಇದು ಮಹಾಭಾರತವಾದ್ರೆ ಇದರಲ್ಲಿ ನಾನು ಸಾಮಾನ್ಯ ಪ್ರಜೆ. ಎಂಎಲ್ಸಿ ಸೂರಜ್, ಸಂಸದ ಪ್ರಜ್ವಲ್ ಹೇಳಿದ್ದರಲ್ಲಿ ತಪ್ಪೇನಿಲ್ಲ. ನಾನು ರಾಜ್ಯದ ಬಗ್ಗೆ ಗಮನಹರಿಸುತ್ತಿದ್ದೇನೆ. ರೇವಣ್ಣ ಹಾಸನ ನೋಡುತ್ತಿದ್ದಾರೆ. ಹಾಸನದಲ್ಲಿ ಪ್ರತಿ ಕೆಲಸ ನನ್ನಿಂದ, ದೇವೇಗೌಡರಿಂದ ಮಾಡಿಸಿಕೊಂಡಿದ್ದಾರೆ. ಯಾರು ನಿರ್ಧಾರ ಕೈಗೊಳ್ಳಬೇಕೆಂದು ಮನೆಯಲ್ಲಿ ತೀರ್ಮಾನಿಸುತ್ತೇವೆ. ಬೀದಿಯಲ್ಲಿ ಚರ್ಚೆ ಮಾಡಿ ಉತ್ತರ ಕೊಡಲ್ಲ ಎಂದು ಹೇಳಿದರು.