ರಾಜಕೀಯ

ನಿಗಮ-ಮಂಡಳಿಗಳಲ್ಲಿ ಹುದ್ದೆಗಳ ಭರ್ತಿ: ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳಿಂದ ಲಾಬಿ

Sumana Upadhyaya

ವಿಜಯಪುರ: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆ ಬಳಿಕ ವಿವಿಧ ಮಂಡಳಿ ಮತ್ತು ನಿಗಮಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ನಡೆಯಲಿದೆ ಎಂದು ಕಾಂಗ್ರೆಸ್ ಇತ್ತೀಚೆಗೆ ಸುಳಿವು ನೀಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿ ಆಗಿರುವುದರಿಂದ ಜಿಲ್ಲೆಯಾದ್ಯಂತ ಪ್ರಮುಖ ಸ್ಥಾನಗಳಿಗೆ ಲಾಬಿ ಮುಂದುವರಿದಿದೆ.

ಪ್ರಮುಖ ಹುದ್ದೆಗಳಿಗೆ ತಮ್ಮ ಹೆಸರನ್ನು ಶಿಫಾರಸು ಮಾಡಲು ಹಲವು ಆಕಾಂಕ್ಷಿಗಳು ಕಾಂಗ್ರೆಸ್ ಶಾಸಕರು ಮತ್ತು ಪ್ರಭಾವಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಎನ್ನಲಾಗಿದೆ. ವಿವಿಧ ಹುದ್ದೆಗಳಿಗೆ ಹೆಸರುಗಳನ್ನು ಪರಿಗಣನೆಗೆ ಶಿಫಾರಸು ಮಾಡುವಂತೆ ಕೆಪಿಸಿಸಿ ವಿವಿಧ ಜಿಲ್ಲಾ ಸಮಿತಿಗಳಿಗೆ ಪತ್ರಗಳನ್ನು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಒಂದು ನಿರ್ದಿಷ್ಟ ಪಕ್ಷ ಅಧಿಕಾರಕ್ಕೆ ಬಂದಾಗ, ಆ ಪಕ್ಷದ ನಾಯಕರು ಯಾವುದಾದರೂ ಮಂಡಳಿ ಅಥವಾ ನಿಗಮದ ಭಾಗವಾಗಲು ಬಯಸುವುದು ಸಹಜ. ಹಲವು ಕಾಂಗ್ರೆಸ್ ಮುಖಂಡರು ಬೇರೆ ಬೇರೆ ಹುದ್ದೆಗಳಿಗೆ ಲಾಬಿ ನಡೆಸುತ್ತಿದ್ದಾರೆ ಎಂದು ವಿಜಯಪುರ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ. 

ಪಕ್ಷದೊಂದಿಗೆ ದೀರ್ಘ ಕಾಲದಿಂದ ಒಡನಾಟ ಇಟ್ಟುಕೊಂಡು ಸರ್ಕಾರದಲ್ಲಿ ಯಾವುದೇ ಹುದ್ದೆ ಸಿಗದವರನ್ನು ಈ ಬಾರಿ ಪರಿಗಣಿಸುವ ಸಾಧ್ಯತೆ ಇದೆ ಎಂದರು.

ರಾಜ್ಯ ಸಚಿವ ಸಂಪುಟಕ್ಕೆ ಹಲವಾರು ಹೊಸ ಮುಖಗಳನ್ನು ಕಾಂಗ್ರೆಸ್ ಈ ಬಾರಿ ಸೇರ್ಪಡೆ ಮಾಡಿರುವುದರಿಂದ ಕೆಲವು ಜನಪ್ರಿಯ ಮತ್ತು ಹಿರಿಯ ಶಾಸಕರು ಸಂಪುಟ ದರ್ಜೆ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ಪಕ್ಷವು ಕೆಲವು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಕ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ, ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರಣರಾದ ನಾಯಕರಿಗೂ ಸಹ ಅನುಮೋದನೆ ಸಿಗಬಹುದು. ಇನ್ನು ಕೆಲವೇ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಕಾಂಕ್ಷಿಗಳ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಪಕ್ಷ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆ ಇದೆ.

SCROLL FOR NEXT