ಬೆಂಗಳೂರು: ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು, ರಾಷ್ಟ್ರೀಯ ಪಕ್ಷದ ನಾಯಕರ ಸ್ವಾಗತಿಸಲು ಐಎಎಸ್ ಅಧಿಕಾರಿಗಳ ನಿಯೋಜನೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದೆ.
ಶಿಷ್ಟಾಚಾರದಂತೆಯೇ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆಂದು ಆಮ್ ಆದ್ಮಿ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ಅವರು ಹೇಳಿದ್ದಾರೆ.
ಸಭೆ ಹಿನ್ನೆಲೆಯಲ್ಲಿ ಹಾಲಿ ಮುಖ್ಯಮಂತ್ರಿಗಳಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ರಾಜ್ಯಕ್ಕೆ ಭೇಟಿ ನೀಡಿದ್ದರು. ಐಎಎಸ್ ಅಧಿಕಾರಿಗಳು ಅವರನ್ನು ಸ್ವಾಗತಿಸಿದ್ದರು. ಶಿಷ್ಟಾಚಾರ ಅನುಸರಿಸಲಾಗಿದೆ. ನಿಯಮದಂತೆಯೇ ಕರ್ತವ್ಯ ನಿರ್ವಹಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಭಾಗವಹಿಸಿದ್ದವರ ಅದರಲ್ಲೂ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬಂದಾಗ ಸ್ವಾಗತ ಕೋರುವುದು ದೇಶದ ಪರಿಪಾಠ ಹಾಗೂ ಸಂಪ್ರದಾಯ. ಇಂತಹ ಗಣ್ಯಾತಿ ಗಣ್ಯ ವ್ಯಕ್ತಿಗಳು ರಾಜ್ಯಕ್ಕೆ ಬಂದಾಗ ಹಿರಿಯ ಐಎಎಸ್ ಅಧಿಕಾರಿಗಳು ಸ್ವಾಗತ ಕೋರುವರಲ್ಲಿ ಯಾವುದೇ ತಪ್ಪಿಲ್ಲ. ಅಲ್ಲದೇ ಐಎಎಸ್ ಅಧಿಕಾರಿಗಳೇನು ಸ್ವರ್ಗದಿಂದ ಬಂದವರಲ್ಲ. ಹೀಗಿರುವಾಗ ಸುಖಾ ಸುಮ್ಮನೇ ರಾಜಕೀಯವನ್ನು ಬೆರೆಸಿ ವಿಧಾನಸಭೆಯ ಕಲಾಪಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಎನ್ಡಿಎ ಸಭೆ ಸೇರಿದ್ದ ಪಕ್ಷಗಳಲ್ಲಿ 8 ಪಕ್ಷಗಳಿಗೆ ಸೇರಿಸಿ ಕೇವಲ 9ಸಂಸದರು ಮಾತ್ರ ಇದ್ದರು. ಇವುಗಳಲ್ಲಿ 11 ಪಕ್ಷಗಳು ಮಾನ್ಯತೆಯನ್ನೇ ಪಡೆದಿಲ್ಲ. ಇಂತಹವರೊಂದಿಗೆ ಪ್ರಧಾನಮಂತ್ರಿಗಳು ಭಾಗವಹಿಸುವುದು ಅಗೌರವ ಎಂದು ಹೇಳಲು ಸಾಧ್ಯವೇ ಎಂದು ಎನ್ಡಿಎ ಸಭೆ ಬಗ್ಗೆ ಲೇವಡಿ ಮಾಡಿದರು.
ಇದನ್ನೂ ಓದಿ: 'INDIA' ಸಮಾವೇಶದಲ್ಲಿ ಸರ್ಕಾರಿ ಅಧಿಕಾರಿಗಳ ಭಾಗವಹಿಸುವಿಕೆ: ಸರ್ಕಾರದ ವಿವರಣೆ ಕೇಳಲು ಬಿಜೆಪಿ-ಜೆಡಿಎಸ್ ರಾಜ್ಯಪಾಲರಿಗೆ ಒತ್ತಾಯ
ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಉಪ ಸಭಾಪತಿಗಳ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅನುಚಿತ ವರ್ತನೆ ತೋರುತ್ತಿರುವುದು ಅವರ ಹತಾಶ ಭಾವನೆಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.