ರಾಜಕೀಯ

ನಾನು ಹಳ್ಳಿಯಿಂದ ಬಂದವನು, 45 ವರ್ಷಗಳಿಂದ ಮಣ್ಣು ಹೊರುತ್ತಿದ್ದೇನೆ; ಒಂದು ಸಣ್ಣ ಅವಮಾನವಾದರೂ ಸಹಿಸಲಾಗದು: ಸೋಮಣ್ಣ

Shilpa D

ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಚಿವ ವಿ ಸೋಮಣ್ಣ ಅವರು ಬಿಜೆಪಿಯಿಂದ ಅಸಮಾಧಾನಗೊಂಡಿದ್ದಾರೆ ಹಾಗೂ ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸಚಿವ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ನನ್ನ ಮನಸ್ಸು ಹಾಗೂ ಆರೋಗ್ಯ ಎರಡೂ ಸರಿ ಇಲ್ಲ. ಹೀಗಾಗಿ ಪಕ್ಷದ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿಲ್ಲ. ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ. ಸದ್ಯ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ನನಗೂ ಕೆಲವು ನಿಬಂಧನೆ, ನಿರ್ಧಾರಗಳಿವೆ. ವೈಯಕ್ತಿಕವಾಗಿ ಕೆಲವೊಂದು ವಿಚಾರಗಳಲ್ಲಿ ನೋವು ಇರುತ್ತದೆ. ಅದೆಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಲು ಆಗುವುದಿಲ್ಲ ಎಂದರು. 75 ವರ್ಷ ಮೀರಿದವರಿಗೆ ಹಾಗೂ ಹಾಲಿ ಶಾಸಕರಲ್ಲಿ ಕೆಲವರಿಗೆ ಪಕ್ಷ ಟಿಕೆಟ್ ನೀಡುವುದಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದರ ಬಗ್ಗೆ ನನಗೆ ಗೊತ್ತಿಲ್ಲ. ನನಗಿನ್ನೂ 72 ವರ್ಷವಷ್ಟೇ’ ಎಂದರು.

ಬಿಜೆಪಿ ಮೇಲೆ ನನಗೆ ಅಸಮಾಧಾನವಿಲ್ಲ. ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಪಾಲ್ಗೊಂಡಿದ್ದೇನೆ. ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಅಭಿಮಾನವಿದೆ. ನನ್ನ ಕ್ಷೇತ್ರದಲ್ಲಿ ಪಕ್ಷೇತರನಾಗಿಯೂ ಗೆದ್ದಿದ್ದೇನೆ. ಚುನಾವಣೆ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಭಗವಂತ ನೀಡಿದ್ದಾನೆ ಎಂದರು.

ನಾನು ಹಳ್ಳಿಯಿಂದ ಬಂದವನು, 45 ವರ್ಷಗಳಿಂದ ಮಣ್ಣು ಹೊರುತ್ತಿದ್ದೇನೆ, ಕೆಲಸವನ್ನು ದೇವರು ಎಂಬು ನಂಬಿರುವವನು ನಾನು, ಹಸಿವಿನಿಂದ ಬೆಂಗಳೂರಿಗೆ ಬಂದಿದ್ದೇನೆ, ನಾನು ಇಲ್ಲಿ ಬಹಳ ನೋವು ಹಾಗೂ ಅನುಭವ ಪಡೆದಿದ್ದೇನೆ, ಒಂದು ಸಣ್ಣ ಅವಮಾನವಾದರೂ ನಾನು ಸಹಿಸುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

SCROLL FOR NEXT