ರಾಜಕೀಯ

'ಮಾನವೀಯತೆ ಮೊದಲು, ರಾಜಕೀಯ ನಂತರ; ದರ್ಶನ್ ನನ್ನ ಮಗ ಇದ್ದಂಗೆ, ಅವನಿಗೆ ನನ್ನ ಬೆಂಬಲ': ಹೆಚ್ ಸಿ ಮಹದೇವಪ್ಪ

Sumana Upadhyaya

ಮೈಸೂರು: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದು, ಕಾಂಗ್ರೆಸ್ ನಾಯಕ ದಿವಂಗತ ಆರ್.ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. 

ಮಾಜಿ ಸಂಸದ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ತೀವ್ರ ಹೃದಯಾಘಾತದಿಂದ ಕಳೆದ ಶನಿವಾರ ನಿಧನರಾದರು. ಮಹದೇವಪ್ಪ ಅವರು ತಮ್ಮ ಪುತ್ರ ಸುನೀಲ್ ಬೋಸ್ ಅವರೊಂದಿಗೆ ನಿನ್ನೆ ದುಃಖದಲ್ಲಿರುವ ಧ್ರುವನಾರಾಯಣ ಅವರ ಕುಟುಂಬವನ್ನು ಭೇಟಿ ಮಾಡಿದರು.

ಮಹದೇವಪ್ಪ ಅವರು ಧ್ರುವನಾರಾಯಣ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆದು ಅವರ ಯೋಗಕ್ಷೇಮ ವಿಚಾರಿಸಿದರು. ತಂದೆಯ ಆಸೆಯನ್ನು ಪೂರೈಸಲು ದರ್ಶನ್ ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು. “ನೀನೂ ಕೂಡ ನನ್ನ ಮಗ ಸುನಿಲ್ ಇದ್ದಂತೆ. ನಾನು ನಿಮ್ಮ ಕುಟುಂಬಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇನೆ ಮತ್ತು ರಾಜಕೀಯದಲ್ಲಿ ನಿಮ್ಮನ್ನು ಬೆಳೆಸಲು ಸಹಾಯ ಮಾಡುತ್ತೇನೆ ಎಂದು ಅವರು ದರ್ಶನ್ ಅವರಿಗೆ ಮಹದೇವಪ್ಪ ಭರವಸೆ ನೀಡಿದ್ದಾರೆ. 

“ನಾನು ದರ್ಶನ್‌ಗೆ ಬೆಂಬಲವನ್ನು ನೀಡುತ್ತೇನೆ. ಅವರು ಭಾರಿ ಅಂತರದಿಂದ ಗೆಲ್ಲಲು ಎಲ್ಲಾ ರೀತಿಯಿಂದ ಶ್ರಮ ಹಾಕುತ್ತೇವೆ. ನನ್ನ ನಿರ್ಧಾರವನ್ನು ಧ್ರುವನಾರಾಯಣ ಅವರ ಕುಟುಂಬಕ್ಕೆ ಅವರ ಸಾವಿನ ದಿನದಂದು ತಿಳಿಸಲು ನಾನು ಬಯಸಿದ್ದೆ. ಆದರೆ ಕುಟುಂಬವು ಆಘಾತದಿಂದ ಚೇತರಿಸಿಕೊಳ್ಳಲು ಕಾಯುತ್ತಿದ್ದೆ. ಸಾವಿನಲ್ಲಿ ರಾಜಕೀಯ ಮಾಡಲು ನಾನು ಬಯಸುವುದಿಲ್ಲ. ಬದ್ಧತೆಯಿರುವ ನಾಯಕನನ್ನು ಪಕ್ಷ ಕಳೆದುಕೊಂಡಿದ್ದು, ಪಕ್ಷ ಮತ್ತು ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮಹದೇವಪ್ಪ ಹೇಳಿದರು. ದರ್ಶನ್‌ಗೆ ಬೆಂಬಲ ನೀಡುವಂತೆ ತಮ್ಮ ಹಿಂಬಾಲಕರಲ್ಲಿ ಮನವಿ ಮಾಡಿದರು.

ತಾವು ಮತ್ತು ಧ್ರುವನಾರಾಯಣ ಇಬ್ಬರೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೆವು ಎಂದು ಕೂಡ ಇದೇ ಸಂದರ್ಭದಲ್ಲಿ ಮಹದೇವಪ್ಪ ಹೇಳಿದರು. ಸಾಮಾನ್ಯ ಕಾರ್ಯಕರ್ತನಂತೆ ದುಡಿದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಇದೇ ವೇಳೆ ದರ್ಶನ್ ಮಹದೇವಪ್ಪನವರ ಇಂಗಿತಕ್ಕೆ ಧನ್ಯವಾದ ಅರ್ಪಿಸಿದರು.

SCROLL FOR NEXT