ಕಾಂಗ್ರೆಸ್ ಸಿಇಸಿ ಸಭೆ 
ರಾಜಕೀಯ

ಕಾಂಗ್ರೆಸ್ 124 ಅಭ್ಯರ್ಥಿಗಳ ಪಟ್ಟಿ ಫೈನಲ್: ಹಲವು ಕ್ಷೇತ್ರಗಳಲ್ಲಿ ಅಪ್ಪ-ಮಕ್ಕಳಿಗೆ ಟಿಕೆಟ್! ಪರಮೇಶ್ವರ್ ಕೊರಟಗೆರೆಯಿಂದ ಸಿ.ವಿ ರಾಮನ್ ನಗರಕ್ಕೆ ಶಿಫ್ಟ್?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಶುಕ್ರವಾರ ನವದೆಹಲಿಯಲ್ಲಿ ನಡೆದ ಚೊಚ್ಚಲ ಸಭೆಯಲ್ಲಿ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ.

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಶುಕ್ರವಾರ ನವದೆಹಲಿಯಲ್ಲಿ ನಡೆದ ಚೊಚ್ಚಲ ಸಭೆಯಲ್ಲಿ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ.

ಮೋಹನ್ ಪ್ರಕಾಶ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿಯು ಪ್ರಸ್ತಾಪಿಸಿದ ಬಹುತೇಕ ಎಲ್ಲಾ 71 ಹಾಲಿ ಶಾಸಕರು ಮತ್ತು ಏಕೈಕ ಹೆಸರುಗಳನ್ನು ಫೈನಲ್ ಮಾಡಲಾಗಿದ್ದು, 2018 ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತವರಿಗೆ  ಮತ್ತೆ ಮಣೆ ಹಾಕಲಾಗಿದೆ.

ತಂದೆ-ಮಕ್ಕಳ ಕಾಂಬಿನೇಷನ್‌ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು,  ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.  ‘ತಂದೆ, ಮಗ, ಮಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ, ಹಾಗೆಯೇ ನಮ್ಮ ಪಕ್ಷದಲ್ಲಿಯೂ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಕಷ್ಟು ಸುಳಿವು ನೀಡಿದ್ದಾರೆ.

ಸಾಧ್ಯವಾದರೇ  ಸೋಮವಾರ ಅಥವಾ ಯುಗಾದಿ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಗೆ ಭೇಟಿ ನೀಡಿದ ನಂತರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ನಡೆದ ಸಭೆಯ ನಂತರ ಮತ್ತೊಂದು ಸುತ್ತಿನ ಚರ್ಚೆಗಾಗಿ ನಾಯಕರು ಖರ್ಗೆ ಅವರ ಅಧಿಕೃತ ನಿವಾಸಕ್ಕೆ ತೆರಳಿದರು.

ಕೊನೆಯ ಗಳಿಗೆಯಲ್ಲಿ ಪಕ್ಷಕ್ಕೆ ಸೇರಲು ಸಿದ್ಧರಾಗಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರಕ್ಕೆ ಇತ್ತೀಚೆಗೆ ನಿಧನರಾದ ಲೋಕಸಭೆಯ ಮಾಜಿ ಸದಸ್ಯ ಧ್ರುವನಾರಾಯಣ್ ಅವರ ಪುತ್ರ ದರ್ಶನ್, ಮುಳಬಾಗಲು ಶಾಸಕ ನಾಗೇಶ್ ಮತ್ತು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಕೆಲವು ಅಭ್ಯರ್ಥಿಗಳ ಹೆಸರನ್ನು ಸಿಇಸಿ ತೆರವುಗೊಳಿಸಿದೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಪುತ್ರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್, ಸಿ.ಎಲ್.ಪಿ.ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ, ವರುಣಾ ಶಾಸಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಜವ್ಹರ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಕೊರಟಗೆರೆಯಲ್ಲಿ ಗೆಲುವು ಕಷ್ಟ ಎಂದು ಭಾವಿಸಿದರೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಸಿ.ವಿ.ರಾಮನ್ ನಗರ ಕ್ಷೇತ್ರವನ್ನು, ಎಚ್.ಸಿ.ಮಹದೇವಪ್ಪ ಅವರಿಗೆ ಬೆಂಗಳೂರಿನ ಮಹದೇವಪುರ ಅಥವಾ ಪುಲಿಕೇಶಿನಗರ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.  ಬೆಂಗಳೂರಿನಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಪಕ್ಷದ ತಂತ್ರದ ಭಾಗವಾಗಿದೆ. ಮುನಿಯಪ್ಪ ಅವರಿಗೆ ದೇವನಹಳ್ಳಿ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಖಂಡ ಶ್ರೀನಿವಾಸಮೂರ್ತಿ ಅವರು ಪ್ರತಿನಿಧಿಸುವ ಪುಲಿಕೇಶಿನಗರ ಸ್ಥಾನವನ್ನು ಅಲ್ಪಸಂಖ್ಯಾತರು ವಿರೋಧಿಸಿದ್ದರಿಂದ ಘೋಷಣೆ ಮಾಡಲಾಗಿಲ್ಲ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದೆ.

ಚಿಂತಾಮಣಿಗೆ ಡಾ.ಎಂ.ಸಿ.ಸುಧಾಕರ್, ಬಾಗೇಪಲ್ಲಿಗೆ ಸುಬ್ಬಾರೆಡ್ಡಿ, ಗೌರಿಬಿದನೂರಿಗೆ ಶಿವಶಂಕರರೆಡ್ಡಿ, ಶ್ರೀನಿವಾಸಪುರದಿಂದ ರಮೇಶ್ ಕುಮಾರ್, ಬಂಗಾರಪೇಟೆಯಿಂದ ಎಸ್.ನಾರಾಯಣಸ್ವಾಮಿ ಅವರನ್ನೂ ತೆರವುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ಗೊಲ್ಲ ಸಮುದಾಯದವರಾದ ಮಾಜಿ ಸಚಿವ ದಿವಂಗತ ಎ ಕೃಷ್ಣಪ್ಪ ಅವರ ಪುತ್ರಿ ಹಿರಿಯೂರಿನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ ಮೋಹನ್ ಪ್ರಕಾಶ್, ರಾಹುಲ್ ಗಾಂಧಿ ಮತ್ತಿತರ ಮುಖಂಡರು ಭಾಗವಹಿಸಿದ್ದರು. ಬಹು ಆಕಾಂಕ್ಷಿಗಳು ಸೇರಿದಂತೆ ಉಳಿದ 99-100 ಸ್ಥಾನಗಳ ಅಭ್ಯರ್ಥಿಗಳನ್ನು ಬಂಡಾಯ ಶಮನಗೊಳಿಸಲು ಚುನಾವಣೆ ದಿನಾಂಕ ಸಮೀಪದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ.
,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

ಒಂದೇ ಸೂರಿನಡಿ ರಾಮ್-ರಹೀಮ್: ದ್ವೇಷ ಹರಡುವವರ ಮಧ್ಯೆ ಮುಸ್ಲಿಮರಿಗಾಗಿ ‘ಇಫ್ತಾರ್ ಕೂಟ’ ಆಯೋಜಿಸುತ್ತಿರುವ ಹಿಂದೂ ಮಹಿಳೆ..!

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Video: 'ನಿಂಗಿದು ಬೇಕಿತ್ತಾ ಮಗನೇ..': ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ, ಕೆರಳಿ ಕೆಂಡವಾದ Salman Agha

SCROLL FOR NEXT