ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಸ್ವರ್ಧಿಸಲು ನಿರ್ಧರಿಸಿದ್ದಾರೆ ಎಂದು ಅವರ ಪುತ್ರ, ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಅವರು, ಹೈಕಮಾಂಡ್ ಕೋಲಾರ ಬೇಡ ವರುಣಾದಲ್ಲಿ ಸ್ಪರ್ಧಿಸಿ ಅಂತ ಹೇಳಿತ್ತು. ಈ ಸಮಯದಲ್ಲಿ ಕೋಲಾರ ಕ್ಷೇತ್ರದಿಂದ ಹಿಂದೆ ಸರಿದರೆ ಕಾಂಗ್ರೆಸ್ಗೆ ಹಿನ್ನಡೆಯಾಗುತ್ತೆ ಎಂದು ಅಲ್ಲಿನ ನಾಯಕರು ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಕೋಲಾರ – ವರುಣಾ ಎರಡೂ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ವರುಣಾ ಒಂದರಲ್ಲಿ ನಿಂತುಕೊಳ್ಳಿ ಅಂತಾ ನಾನು ಮೊದಲು ಸಲಹೆ ಕೊಟ್ಟಿದ್ದೆ. ಆದರೆ ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಲ್ಲಿ ನಿಂತರೂ ಅವರ ವೈರಿಗಳು ಒಂದಾಗಿ ಸೋಲಿಸಲು ಯತ್ನಿಸುತ್ತಾರೆ. ಎಲ್ಲಿ ನಿಂತರೂ ಶತ್ರುಗಳು ಒಂದಾಗುತ್ತಾರೆ. ಇದಕ್ಕೆಲ್ಲ ಹೆದರೋಕೆ ಆಗಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್. ಆಕಸ್ಮಾತ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಾರೆ. ಇದನ್ನು ಸಹಿಸಲು ಬಲಪಂಥೀಯರಿಗೆ ಆಗುತ್ತಿಲ್ಲ ಎಂದರು.