ರಾಜಕೀಯ

ಕಾಂಗ್ರೆಸ್ ನಿಂದ ಭಜರಂಗದಳ ನಿಷೇಧ ಪ್ರಸ್ತಾಪ, ರಾಜ್ಯಾದ್ಯಂತ ಹೊತ್ತಿಕೊಂಡ 'ವಿವಾದದ ಬೆಂಕಿ', ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಅಸ್ತ್ರ

Sumana Upadhyaya

ಬೆಂಗಳೂರು: ಮೊನ್ನೆ ಬಿಡುಗಡೆಯಾದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಭಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಕೈ ಪಕ್ಷ ಘೋಷಿಸಿಕೊಂಡಿದೆ. ಚುನಾವಣೆ ಹೊತ್ತಿನಲ್ಲಿ ಇದನ್ನೇ ಕೇಸರಿ ಪಡೆ ಅಸ್ತ್ರವಾಗಿ ಬಳಸಿಕೊಂಡಿದ್ದು ರಾಜ್ಯಾದ್ಯಂತ ಭಜರಂಗ ಬಲಿ ಮಂತ್ರವನ್ನು ಜಪಿಸುತ್ತಿದೆ. 

ಚುನಾವಣೆ ಹೊತ್ತಿನಲ್ಲಿ ಸುಮ್ಮನೆ ಕೂರದೆ ಇರುವೆ ಬಿಟ್ಟುಕೊಂಡಂತಾಗಿದೆ ಈಗ ಕೈ ಪಡೆಯ ಪರಿಸ್ಥಿತಿ. ಬಲಪಂಥೀಯರು, ಹಿಂದೂಪರ ಸಂಘಟನೆಗಳು, ಬಿಜೆಪಿ ಬೆಂಬಲಿಗರು ಈಗ ಬೀದಿಗಿಳಿದು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆಯಿಂದ ರಾಜ್ಯಾದ್ಯಂತ ಜನರ ಸಮಸ್ಯೆಗಳ ಬಗ್ಗೆ ಮಾತನಾಡದೆ ರಾಜಕೀಯ ನಾಯಕರ ಬಾಯಲ್ಲಿ ಬರೀ ಭಜರಂಗದಳ ನಿಷೇಧದ ಬಗ್ಗೆಯೇ ಚರ್ಚೆ, ವಾಗ್ಯುದ್ಧ, ಆರೋಪಗಳು ಕೇಳಿಬರುತ್ತಿವೆ. ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಇಂದು ಬೆಂಗಳೂರಿನ ವಿಜಯನಗರದಲ್ಲಿ ಹನುಮಾನ್ ಚಾಲೀಸ ಪಠಿಸುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ವಿರೋಧಿಸಿದರು.

ಭಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಹಿಂದೂ ಮುಖಂಡರು ಕೆಂಡ ಕಾರಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಸೋಲಿಸಲು ಬೀದಿಗಿಳಿದು ಹೋರಾಟ ಮಾಡಲು ಭಜರಂಗದಳ ಕರೆ ನೀಡಿದೆ. ನಿನ್ನೆ ಮಂಗಳೂರು ನಗರದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. 

ಚುನಾವಣೆಯಲ್ಲಿ ಸೋಲುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿರುವ ಜನವಿರೋಧಿ ಕಾಂಗ್ರೆಸ್ ಪಕ್ಷವು ಭಜರಂಗದಳ ಸಂಘಟನೆಯನ್ನು ನಿಷೇಧ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ ಸುಧಾಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಅಭಿಯಾನ: ಮಾಧ್ಯಮಗಳಲ್ಲಿ, ರಸ್ತೆಗಿಳಿದು ಪ್ರತಿಭಟನೆ ನಡೆಸಿ ಹಲವು ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ ಸೋಷಿಯಲ್ ಮೀಡಿಯಾಗಳಲ್ಲಿ ಸಹ ಬಿಜೆಪಿ ನಾಯಕರು, ಕಾರ್ಯಕರ್ತರು, ಹಿಂದೂಪರ ಸಂಘಟನೆಯವರು ಹಿಂದೆ ಬಿದ್ದಿಲ್ಲ, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹನುಮಂತನ ಫೋಟೋ ಹಾಕಿ ನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು ನಾನೊಬ್ಬ ಭಜರಂಗಿ ಎಂದು ಹಾಕಿಕೊಂಡಿದ್ದಾರೆ.

SCROLL FOR NEXT