ರಾಜಕೀಯ

‘ಹಣ ಬಲ’ದಿಂದ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ಬಯಸಿದೆ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

Ramyashree GN

ಮೈಸೂರು: ಜನರಿಗೆ ತೋರಿಸಲು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದ ಕಾರಣ ಆಡಳಿತಾರೂಢ ಬಿಜೆಪಿಯು 'ಹಣಬಲ'ದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಯಸಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬುಧವಾರ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರಣಿ ಸಾರ್ವಜನಿಕ ಸಭೆಗಳಲ್ಲಿ ರಾಜ್ಯದಲ್ಲಿನ ಬೆಲೆ ಏರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ಬಗ್ಗೆ ಮೌನವಾಗಿದ್ದರು ಎಂದು ಆರೋಪಿಸಿದರು.

'ಹಣದ ಹೊಳೆ ಹರಿದಿದೆ (ಚುನಾವಣೆಯಲ್ಲಿ). ಈಗ ಮತದಾರರ ಬಳಿಗೆ ಹೋಗಲು ಬಿಜೆಪಿಯವರು ಹಣ ನೀಡುವುದನ್ನು ಬಿಟ್ಟು ಬೇರೆ ಏನು ಮಾಡಿದ್ದಾರೆ?. ಅವರ ಬಳಿ ಹಣವಿದೆ ಎನ್ನುವುದನ್ನು ಬಿಟ್ಟು ರಾಜ್ಯದ ಬಗ್ಗೆ ಏನು ಹೇಳಲು ಸಾಧ್ಯ?. ಅವರು ಮಾಡಿರುವ ಅಭಿವೃದ್ಧಿ ಏನು?’ ಎಂದು ಪ್ರಶ್ನಿಸಿದರು.

'ಬಿಜೆಪಿಯಿಂದ ಒಂದೇ ಒಂದು ಮನೆ ನೀಡಲು ಸಾಧ್ಯವಿಲ್ಲ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 'ಅನ್ನ ಭಾಗ್ಯ' ಯೋಜನೆಯಡಿ ತಿಂಗಳಿಗೆ 7 ಕೆಜಿಯಿಂದ 4 ಕೆಜಿಗೆ ಉಚಿತ ಅಕ್ಕಿಯನ್ನು ಕಡಿಮೆ ಮಾಡಿದ್ದಾರೆ ಎಂದು ದೂರಿದರು.

'ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯ ಸಾಧನೆ ಶೂನ್ಯ. ಹೀಗಾಗಿ ಹಣದ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. ಪ್ರಧಾನಿ ರ‍್ಯಾಲಿಗಳಿಂದ ಯಾವುದೇ ಪರಿಣಾಮ ಬೀರುವುದಿಲ್ಲ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಅದರಲ್ಲೂ ಶೇ 40 ಕಮಿಷನ್ ಬಗ್ಗೆ ಏನಾದರೂ ಮಾತನಾಡಿದ್ದೀರಾ?. ಎರಡು ವರ್ಷಗಳ ಹಿಂದೆ ಶೇ 40 ಕಮಿಷನ್ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆ ಅರ್ಜಿಯ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ಅವರು ಏನಾದರೂ ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ವರುಣಾದಲ್ಲಿ ಸಿದ್ದರಾಮಯ್ಯ ಅವರ ಎದುರಿಗೆ ಬಿಜೆಪಿ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ. 224 ಸದಸ್ಯ ಬಲದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13 ರಂದು ನಡೆಯಲಿದೆ.

SCROLL FOR NEXT