ರಾಜಕೀಯ

ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತಿದೆಯೇ: ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ; ಎಂ.ಬಿ ಪಾಟೀಲ್ ಟ್ವೀಟ್, ಕೇಸ್ ದಾಖಲು

Shilpa D

ವಿಜಯಪುರ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಪಕ್ಷದ ಅಭ್ಯರ್ಥಿ ವಿಜಯಗೌಡ ಪಾಟೀಲ್ ಅವರನ್ನು ಅನರ್ಹಗೊಳಿಸಬೇಕೆಂದು ಎಂ.ಬಿ ಪಾಟೀಲ್ ಒತ್ತಾಯಿಸಿದ್ದಾರೆ.

ಬಹಿರಂಗ ಪ್ರಚಾರ ಅಂತ್ಯವಾದರೂ ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಕಾನೂನು ಉಲ್ಲಂಘಿಸಿ ಭರ್ಜರಿ ಪ್ರಚಾರ ನಡೆದಿದೆ ಎಂದು ದೂರಿ ಟ್ಟೀಟ್ ಮಾಡಿದ್ದಾರೆ.

ಬಬಲೇಶ್ವರ ಕ್ಷೇತ್ರದಲ್ಲಿ ಜಂಗಲ್ ರಾಜ್. ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತಂತಿದೆ. ಬಬಲೇಶ್ವರ ಬಿ.ಜೆಪಿ. ಅಭ್ಯರ್ಥಿ ಹಾಗೂ ಬೆಂಬಲಿಗರು ನಂಬರ್ ಪ್ಲೇಟ್ ಇಲ್ಲದ ಕಾರುಗಳಲ್ಲಿ ಪೊಲೀಸರ ಕಣ್ಣ ಮುಂದೆಯೇ ಒಡಾಡುತ್ತಿದ್ದಾರೆ. ಡಿ.ಸಿ., ಎಸ್.ಪಿ. ಹಾಗೂ ಎಲೆಕ್ಷನ್ ಕಮಿಷನ್ ಅಧಿಕಾರಿಗಳು ನಿದ್ರಿಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಡಿಎಸ್ಪಿ ಗಿರ್ಮಳಪ್ಪ ತಳಕಟ್ಟಿ ಅವರ ಮೇಲೆ ಬಿಜೆಪಿ ಬಬಲೇಶ್ವರ ಅಭ್ಯರ್ಥಿ ವಿಜುಗೌಡ ಪಾಟೀಲ್ ಮತ್ತು ಅವರ ಗೂಂಡಾಗಳು ಟಿಕೋಟಾ ಟೌನ್‌ನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ವಿಜಯಪುರದಲ್ಲಿ ಜಂಗಲ್ ರಾಜ್ ಆಡಳಿತ ನಡೆಸುತ್ತಿದೆ. ಈ ಅಕ್ರಮವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಬಿಜೆಪಿ ಬಬಲೇಶ್ವರ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು’’ ಎಂದು ಪಾಟೀಲ್ ಟ್ವೀಟ್ ಮಾಡಿ ಬಳಸಿದ ವಾಹನಗಳ ಚಿತ್ರಗಳನ್ನು ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯಪುರ ಎಸ್ಪಿ ಎಚ್.ಡಿ.ಆನಂದಕುಮಾರ್, ಟಿಕೋಟಾ ಮತ್ತಿತರ ಕಡೆಗಳಲ್ಲಿ ನೆರೆದಿದ್ದ ಜನರ ಮೇಲೆ ನಾನೇ ಖುದ್ದಾಗಿ ಚಾರ್ಜ್ ಮಾಡಿದ್ದೇನೆ. ಪೊಲೀಸರು ಸಹ 3 ಕಾರುಗಳನ್ನು ಬೆನ್ನಟ್ಟಿ ಮಧ್ಯಪ್ರವೇಶಿಸಿ ಎಲ್ಲಾ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ, 144 ರ ಉಲ್ಲಂಘನೆಗಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಮತ್ತು ಎಂಸಿಸಿ ಮತ್ತು ಅಕ್ರಮ ವಾಹನ ಬಳಕೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಅಕ್ರಮ ಪ್ರಚಾರಕ್ಕೆ ಬಳಸಿದ್ದ ಮೂರು ವಾಹನಗಳನ್ನು ವಶಪಡಿಸಿಕೊಂಡು ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ, ಆದರೆ ಬುಧವಾರ ಚುನಾವಣೆ ಇರುವುದರಿಂದ ಯಾರನ್ನೂ ಬಂಧಿಸಲಾಗಿಲ್ಲ ಎಂದು ಹೆಚ್ಚುವರಿ ಎಸ್ಪಿ ಶಂಕರ್ ಮಾರಿಹಾಳ್ ಹೇಳಿದರು. ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ದೃಢಪಡಿಸಿದರು. ವಿಜಯಗೌಡ ಪಾಟೀಲ್ ಅವರನ್ನು ಸಂಪರ್ಕಿಸಿದಾಗ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

SCROLL FOR NEXT