ರಾಜಕೀಯ

ಶೀಘ್ರದಲ್ಲೇ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು; ಸದನದಲ್ಲಿ ಬೊಮ್ಮಾಯಿ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ

Ramyashree GN

ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರೊಂದಿಗೆ 8 ಮಂದಿ ಸಚಿವರಾಗಿ ಮೇ 20 ರಂದು ಪ್ರಮಾಣ ವಚನ ಸ್ವೀಕರಿಸಿದ್ದು, ಈವರೆಗೂ ಖಾತೆ ಹಂಚಿಕೆಯಾಗಿಲ್ಲ. ಈ ಕುರಿತು ಪ್ರತಿಪಕ್ಷ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಲ್ಲಿರುವ ಸಚಿವರಿಗೆ ಶೀಘ್ರದಲ್ಲೇ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಬುಧವಾರ ಹೇಳಿದ್ದಾರೆ.

ಸಚಿವರಿಗೆ ಖಾತೆ ಹಂಚಿಕೆ ವಿಳಂಬದ ಕುರಿತು ಮಾಜಿ ಮುಖ್ಯಮಂತ್ರಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಕೇಳಿದ ಪ್ರಶ್ನೆಗೆ ಸದನದಲ್ಲಿ ಸಿಎಂ ಈ ಭರವಸೆ ನೀಡಿದರು.

ಸಿಎಂ ತಮ್ಮ ಸಂಪುಟದ ಸಚಿವರನ್ನು ವಿಧಾನಸಭೆಯಲ್ಲಿ ಪರಿಚಯಿಸಿದ ತಕ್ಷಣ ಮಧ್ಯಪ್ರವೇಶಿಸಿದ ಬೊಮ್ಮಾಯಿ, ‘ಮುಖ್ಯಮಂತ್ರಿ ಅವರು ಸಚಿವರನ್ನು ಸದನಕ್ಕೆ ಪರಿಚಯಿಸಿದ್ದಕ್ಕೆ ಖುಷಿಯಾಗಿದೆ, ಅವರೆಲ್ಲರೂ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಎಲ್ಲಾ ಸಚಿವರಿಗೆ ಅಭಿನಂದನೆಗಳು. ಆದರೆ, ಅವರಿಗೆ ಖಾತೆ ಹಂಚಿಕೆ ನಂತರ ಅವರನ್ನು ಮುಖ್ಯಮಂತ್ರಿಗಳು ಪರಿಚಯಿಸಿದ್ದರೆ ಸೂಕ್ತವಾಗಿತ್ತು ಎಂದರು. 

'ಏಕೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ? ಆದಷ್ಟು ಬೇಗನೆ ಖಾತೆ ಹಂಚಿಕೆ ಮಾಡಬೇಕು. ನನ್ನ ಅಭಿಪ್ರಾಯದಲ್ಲಿ ಅದನ್ನು ಬೇಗನೆ ಮಾಡಿದರೆ ಒಳ್ಳೆಯದು' ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶೀಘ್ರದಲ್ಲಿಯೇ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಈ ಹಿಂದೆ ಸಚಿವ ಸಂಪುಟದ ಏಕಾಂಗಿ ಸದಸ್ಯರಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು ಎಂಬುದನ್ನು ನೆನಪಿಸಿದರು.

'ನಾವು ಅವರಿಗೆ ಆದಷ್ಟು ಬೇಗ ಜವಾಬ್ದಾರಿಯನ್ನು ನೀಡುತ್ತೇವೆ. ಬಿಎಸ್ ಯಡಿಯೂರಪ್ಪ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಸಂಪುಟದಲ್ಲಿ ಇದ್ದರು? ಮಾಜಿ ಮುಖ್ಯಮಂತ್ರಿ (ಬೊಮ್ಮಾಯಿ), ನಿಮಗೆ ಯಾವುದೇ ಅನುಮಾನ ಬೇಡ, ಅವರಿಗೆ (ಸಚಿವರಿಗೆ) ಆದಷ್ಟು ಬೇಗ ಜವಾಬ್ದಾರಿಯನ್ನು ನೀಡಲಾಗುತ್ತದೆ' ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಯಡಿಯೂರಪ್ಪ ಆಗ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗಾಗಿ ಏಕಾಂಗಿಯಾಗಿದ್ದರು. ಆದರೆ, ಈ ವೇಳೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಜೊತೆಗೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದರು.

ನೀವೆ ಅವರನ್ನು ಸಚಿವರನ್ನಾಗಿ ಮಾಡಿದ್ದೀರಿ. ಆದರೆ, ಖಾತೆ ಹಂಚಿಕೆ ಮಾಡಿಲ್ಲ. ಹೀಗಾದರೆ, ಜನರು ಏನೆಂದು ತಿಳಿದುಕೊಳ್ಳುತ್ತಾರೆ? ಎಂದು ಬೊಮ್ಮಾಯಿ ಹೇಳಿದರು. ಇದಕ್ಕೆ ಉತ್ತರಿಸಿ ಸಿಎಂ, ಯಾರೂ ಏನನ್ನೂ ಯೋಚಿಸುವುದಿಲ್ಲ, ವಿರೋಧ ಪಕ್ಷದವರು ಈ ಬಗ್ಗೆ ಯೋಚಿಸದಿದ್ದರೆ ಸಾಕು ಎಂದು ಕಿಚಾಯಿಸಿದರು.

ನಾನು ಸಚಿವರ ಪರವಾಗಿ ಮಾತನಾಡುತ್ತಿದ್ದೇನೆ ಎಂದ ಬೊಮ್ಮಾಯಿ ಅವರಿಗೆ ಉತ್ತರಿಸಿದ ಸಿದ್ದರಾಮಯ್ಯ, ನಿಮ್ಮ ಸಲಹೆಗೆ ಧನ್ಯವಾದಗಳು ಎಂದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಂದು ಪ್ರತ್ಯೇಕವಾಗಿ ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಮತ್ತು ಹಾಲಿ ಸಚಿವರಿಗೆ ಖಾತೆ ಹಂಚಿಕೆ ಕುರಿತು ಚರ್ಚಿಸುವ ನಿರೀಕ್ಷೆಯಿದೆ.

SCROLL FOR NEXT