ರಾಜಕೀಯ

ಸಿದ್ದರಾಮಯ್ಯಗೆ ಬೇಡ ಎಂದರೆ ಪರಮೇಶ್ವರ ಮುಖ್ಯಮಂತ್ರಿ ಆಗಲಿ; ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ: ರಾಜಣ್ಣ

Shilpa D

ತುಮಕೂರು: ಹಾಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸಿಎಂ ಆಗುವ ಅವಕಾಶವಿದೆ. ಸಿದ್ದರಾಮಯ್ಯ ಸಿಎಂ ಆಗಿ ಇರುವವರೆಗೆ ನಾವೆಲ್ಲ ಸಿದ್ದರಾಮಯ್ಯ ಪರ.‌ ಸಿದ್ದರಾಮಯ್ಯ ಹೊರತು ಪಡಿಸಿದರೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಅಂತ ಬಯಸುತ್ತೇವೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.

ನೂತನ ಪೊಲೀಸ್ ಸಮುಚ್ಛಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಇದ್ದಾರೆ. ಮುಂದಿನ ದಿನಗಳಲ್ಲಿ ಅವರು ಏನು ಬೇಕಾದರೂ ಆಗಬಹುದು. ಡಾಕ್ಟರೇ ನಿಮಗೆ ಅದೃಷ್ಟ ಇದೆ, ನಡೆಸುತ್ತೀರಿ ಅಂತ ಹಿಂದೊಮ್ಮೆ ಹೇಳಿದ್ದೆ. ಯಾಕಂದ್ರೆ ಅವರಿಗೆ ಅದೃಷ್ಟ ಇದೆ ಅಂತ ನಾನು ಭಾವಿಸಿದ್ದೇನೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗುತ್ತಾರೆ ಅಂತಾದರೆ ನಾವೆಲ್ಲ ಸಂತೋಷ ಪಡುತ್ತೇವೆ. ನಾವೆಲ್ಲ ಮುಖ್ಯಮಂತ್ರಿ ಆದಂತೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಗಾದಿಯಲ್ಲಿ ಇರುವವರೆಗೆ ನಾವೆಲ್ಲರೂ ಸಿದ್ದರಾಮಯ್ಯ ಪರ. ಇರುತ್ತೇವೆ. ಅಂದರೆ, ಪರಮೇಶ್ವರ್ ಆದಿಯಾಗಿ ನಾವೆಲ್ಲರೂ ಸಿದ್ದರಾಮಯ್ಯ ಅವರ ಪರವಿರುತ್ತೇವೆ. ಸಿದ್ದರಾಮಯ್ಯ ಹೊರತು ಪಡಿಸಿದರೆ, ಪರಮೇಶ್ವರ್ ಸಿಎಂ ಆಗಬೇಕು ಅಂತ ಬಯಸುತ್ತೇವೆ.

ಎಐಸಿಸಿಯವರು ನಮಗೆ ಹೇಳಿದ್ದಾರೆ ಏನು ಮಾತನಾಡಬಾರದು ಅಂತ. ಆದರೆ, ನಾನು ಮತ್ತು ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು.‌ ಹಾಗಾಗಿ ನನ್ನ ಮನಸಿನ ಭಾವನೆಯನ್ನು ಹೇಳಿದ್ದೇನೆ. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ ಎಂದು ಕೆ.ಎನ್.‌ ರಾಜಣ್ಣ ಹೇಳಿದರು.

ನಾಯಕತ್ವ ಬದಲಾವಣೆ, ಸರ್ಕಾರದ ವಿಚಾರದಲ್ಲಿ ಏನೂ ಮಾತನಾಡಬಾರದು ಎಂದು ಎಐಸಿಸಿ ಮುಖಂಡರು ಹೇಳಿದ್ದಾರೆ. ನಾನು, ಇಂತಹ ಯಾವ ಸೂಚನೆಗೂ ಅಂಜುವವನಲ್ಲ. ಈಗ ಮಾತನಾಡಿದ್ದೇನೆ, ಮುಂದೆ ಮಾತನಾಡುವುದಿಲ್ಲ ಎಂದು ಹೇಳುತ್ತೇನೆ. ಏನೂ ಬೇಕಾದರೂ ಮಾಡಿಕೊಳ್ಳಲಿ. ಮುಂದೆ ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ’ ಎಂದು ಹೈಕಮಾಂಡ್ ವಿರುದ್ಧ ಗುಡುಗಿದರು.

SCROLL FOR NEXT