ರಾಜಕೀಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವುದೇ ನಮ್ಮ ಗುರಿ: ಸಿಪಿ ಯೋಗೇಶ್ವರ್

Ramyashree GN

ರಾಮನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವುದೇ ಬಿಜೆಪಿ-ಜೆಡಿಎಸ್ ಮೈತ್ರಿಯ ಗುರಿ ಯೆಂದು ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣ ಬಿಜೆಪಿ ಮುಖಂಡರ ಸಭೆ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಮತಾನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವಿನ ಕಿತ್ತಾಟದ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಆ ತಪ್ಪು ಮರುಕಳಿಸುವುದಿಲ್ಲ. ಹೀಗಾಗಿಯೇ ಅನಿವಾರ್ಯವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

ಹೊಂದಾಣಿಕೆ ಎಂಬುದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಸಭೆ ನಡೆಸಿ, ಮೈತ್ರಿಯ ಅನಿವಾರ್ಯತೆಯ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕೆಂದು ಎರಡೂ ಪಕ್ಷಗಳ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

ರಾಜಕೀಯವಾಗಿ ಈಗ ಕಣ್ಣು ಬಿಟ್ಟಿರುವ ಇಕ್ಬಾಲ್ ಹುಸೇನ್ ಅವರು ಕುಚೋದ್ಯದ ಮಾತುಗಳನ್ನಾಡಿದ್ದಾರೆ. ನಾನು ಕಾಂಗ್ರೆಸ್‌ಗೆ ಸೇರ್ಪಡೆಯಾದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲ್ಲಬಹುದು ಎಂಬ ಭಾವನೆ ಅವರಿಗೆ ಇರಬಹುದು. ಆದರೆ, ಅದೆಲ್ಲಾ ಸಾಧ್ಯವಿಲ್ಲ. ಇಷ್ಟಕ್ಕೂ ನಾನು ಮಾತನಾಡಲು ಅವರು ಯಾರು? ಎಂದು ಪ್ರಶ್ನಿಸಿದರು. 

ಪಕ್ಷ ತೊರೆಯುವುದಾದರೆ ಸ್ವಾಗತ

ಎಸ್‌ಟಿ ಸೋಮಶೇಖರ್ ಅವರು ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದಮೇಲೆ ಬಿಡಿಎ ಅಧ್ಯಕ್ಷರಾದರು. ಸಚಿವರಾಗಿ ಪ್ರಬಲ ಖಾತೆ ಪಡೆದರು. ಅಧಿಕಾರ ಅನುಭವಿಸಿದರು. ಈಗ ಅಧಿಕಾರ ಇಲ್ಲ ಅಂತ ಹೀಗೆ ಮಾತನಾಡುತ್ತಿದ್ದಾರೆ. ಅವರು ಪಕ್ಷ ತೊರೆಯುವುದಿದ್ದರೆ ಸ್ವಾಗತಿಸುತ್ತೇವೆ ಎಂದರು. 

ಡಿಕೆ ಶಿವಕುಮಾರ್ ಜೊತೆಗೆ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡುತ್ತಿದ್ದರು. ಈಗಲೂ ಟೀಕೆ ಮಾಡುತ್ತಿದ್ದಾರೆ. ಬಹುಶಃ ಅವರು ಎಂಎಲ್ಎ ಸ್ಥಾನಕ್ಕೆ ರಾಜಿನಾಮೆ ಕೊಟ್ರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

SCROLL FOR NEXT