ರಾಜಕೀಯ

ಸನಾತನ ಧರ್ಮ ಬಗ್ಗೆ ಉದಯನಿಧಿ ಹೇಳಿಕೆ: ವಿವಾದ ಮೈಮೇಲೆ ಎಳೆದುಕೊಳ್ಳದೆ ಅಂತರ ಕಾಯ್ದುಕೊಂಡ ಕಾಂಗ್ರೆಸ್

Sumana Upadhyaya

ಬೆಂಗಳೂರು: ಸನಾತನ ಧರ್ಮ ಮಲೇರಿಯಾ, ಡೆಂಗ್ಯು ಜ್ವರವಿದ್ದಂತೆ, ಅದನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿ ತೀವ್ರ ವಿವಾದ ಎದುರಿಸುತ್ತಿರುವ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪುತ್ರ ಸಚಿವ ಉದಯನಿಧಿ ಮಾರನ್ ಗೆ ಬೆಂಬಲ ನೀಡುವ ಬದಲು ಕರ್ನಾಟಕ ಕಾಂಗ್ರೆಸ್ ನಾಯಕರು ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ 26 ಪಕ್ಷಗಳಿದ್ದು ಕಾಂಗ್ರೆಸ್ ಮತ್ತು ಡಿಎಂಕೆ ಕೂಡ ಪ್ರಮುಖ ಭಾಗವಾಗಿದೆ. ಇಂಡಿಯಾ ಮೈತ್ರಿಕೂಟದ ಭಾಗವಾದರೂ ಕೂಡ ಉದಯನಿಧಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.

ಉದಯನಿಧಿ ಅವರ ವಿವಾದ ಕುರಿತು ಯಾವುದೇ ಹೇಳಿಕೆ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ತಾನು ಹಿಂದೂ ವಿರೋಧಿ ಎಂದು ಹಣೆಪಟ್ಟಿ ಕಟ್ಟಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ಈ ವಿವಾದದಿಂದ ಬಿಜೆಪಿಗೆ ರಾಜಕೀಯ ಲಾಭವಾಗುವುದನ್ನು ತಪ್ಪಿಸಬೇಕೆಂಬುದು ರಾಜ್ಯ ಕಾಂಗ್ರೆಸ್ ನಾಯಕರ ಪ್ರಯತ್ನವಾಗಿದೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ 20 ಸ್ಥಾನಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ನೋಡುತ್ತಿರುವ ಕಾಂಗ್ರೆಸ್ ಈ ಸಂದರ್ಭದಲ್ಲಿ ವಿವಾದಗಳಿಂದ ದೂರ ಉಳಿಯಲು ನೋಡುತ್ತಿದೆ.

ನಿನ್ನೆ ಸುದ್ದಿಗಾರರು ಪರಮೇಶ್ವರ್ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ ವಿವಾದ ಏನು, ಯಾರು ವಿವಾದ ಎಬ್ಬಿಸಿದ್ದು, ಹಿಂದುತ್ವ ಜೀವನದ ಕ್ರಮ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ನಿಮಗೆ ಗೊತ್ತಿದೆಯೇ, ಸುಪ್ರೀಂ ಕೋರ್ಟ್ ನಿಂದ ನಾವು ದೊಡ್ಡವರೇ, ಸಚಿವ ಉದಯನಿಧಿ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ.ಅದನ್ನು ನಾನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಉದಯನಿಧಿ ಅವರ ಹೇಳಿಕೆಯನ್ನು ನಾನು ಏಕೆ ಸಮರ್ಥಿಸಬೇಕು, ನಾನು ಯಾವ ಧರ್ಮವನ್ನು ಯಾರ ಮೇಲೆ ಕೂಡ ಹೇರುವುದಿಲ್ಲ. ಭಾರತದ ಸಂವಿಧಾನ ನನ್ನ ಧರ್ಮ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.

ಇದಕ್ಕೂ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಧರ್ಮ ಸಮಾನತೆಯನ್ನು ಪ್ರೋತ್ಸಾಹಿಸದಿದ್ದರೆ, ಸಮಾನ ಹಕ್ಕುಗಳನ್ನು ನೀಡದಿದ್ದರೆ ಅಥವಾ ಮನುಷ್ಯರನ್ನು ಮನುಷ್ಯರಾಗಿ ಕಾಣದಿದ್ದರೆ ಅದು ಧರ್ಮವಲ್ಲ, ಅದು ರೋಗಕ್ಕೆ ಸಮ ಎಂದು ಹೇಳಿದ್ದರು.

ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಜನ್ಮ ನೀಡಿದರು ಎಂಬ ಪ್ರಶ್ನೆಯಿದೆ. ಬೌದ್ಧ ಧರ್ಮ ಹುಟ್ಟಿದ್ದು ಭಾರತದಲ್ಲಿ. ಜೈನ ಧರ್ಮವು ಭಾರತದಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ವಿದೇಶಗಳಿಂದ ಬಂದವು. ನೀವು ವಿಶ್ಲೇಷಿಸಿದರೆ, ಇವೆಲ್ಲವುಗಳ ಸಾರಾಂಶವು ಮನುಕುಲಕ್ಕೆ ಒಳ್ಳೆಯದನ್ನು ಮಾಡುವುದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆ ವಿವಾದ ಹುಟ್ಟುಹಾಕಿದ ನಂತರ  ತಾವು ಹಿಂದೂ ಧರ್ಮದ ಬಗ್ಗೆ ತಪ್ಪು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಆಸ್ತಿಕರಾಗಿರುವುದರಿಂದ ಮೃದು ಹಿಂದುತ್ವಕ್ಕೆ ಜನಪ್ರಿಯರು. ಅವರು ಹೆಮ್ಮೆಯ ಹಿಂದೂ ಎಂದು ಹೇಳಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ.

ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷವು ಅಂತರವನ್ನು ಕಾಯ್ದುಕೊಳ್ಳಲು ಬಯಸುತ್ತದೆ ಎಂದು ಕೂಡ ಅವರು ಹೇಳಿದ್ದಾರೆ. ಶೇಕಡಾ50 ಕ್ಕಿಂತ ಹೆಚ್ಚು ಮತದಾರರು ಮಹಿಳೆಯರು, ಅವರಲ್ಲಿ ಹೆಚ್ಚಿನವರು ಹಿಂದೂ ಅಥವಾ ಸನಾತನ ಧರ್ಮವನ್ನು ತಿಳಿದೋ ಅಥವಾ ತಿಳಿಯದೆಯೋ ಆಚರಿಸುವ ಆಸ್ತಿಕರು. ಕಾಂಗ್ರೆಸ್ ಸರ್ಕಾರದ ಐದು ಖಾತರಿ ಯೋಜನೆಗಳ ಫಲಾನುಭವಿಗಳು. ಆದ್ದರಿಂದ, ಜನರ ನಂಬಿಕೆಗೆ ವಿರುದ್ಧವಾಗಿ ಹೋಗಲು ಕಾಂಗ್ರೆಸ್ ಬಯಸುತ್ತಿಲ್ಲ ಎನ್ನುತ್ತಾರೆ.

SCROLL FOR NEXT