ರಾಜಕೀಯ

ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಟೆಂಡರ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ: ಶಿವರಾಜ್ ತಂಗಡಗಿ

Ramyashree GN

ಕೊಪ್ಪಳ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳೇ ಕಳೆದಿದ್ದರೂ, ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಬಿಜೆಪಿಗೆ ಕಗ್ಗಂಟಾಗಿಯೇ ಉಳಿದಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

‘ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಇಂತಿಷ್ಟು ಹಣವನ್ನು ನೀಡಬೇಕು ಎಂದು ಒಪ್ಪಂದ ಆಗಿದೆ. ಆದರೆ, ಆ ಹಣದ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ಬಹುಕೋಟಿ ರೂಪಾಯಿ ಪಡೆದು, ವಂಚಿಸಿರುವ ಹಿಂದುತ್ವವಾದಿ ಚೈತ್ರಾ ಕುಂದಾಪುರ ವಿಚಾರ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಶೇ 79 ರಷ್ಟು ಬಿಜೆಪಿಗಳು ಡೀಲ್ ಮಾಸ್ಟರ್‌ಗಳಾಗಿದ್ದಾರೆ ಎಂದು ಹೇಳಿದರು.

ಕನಕಗಿರಿ ಕ್ಷೇತ್ರದ ತಿಮ್ಮರೆಡ್ಡಿ ಗಿಲ್ಲೆಸೂಗೂರು ಅವರು ಸಹ ಬಿಜೆಪಿ ಟಿಕೆಟ್ ಪಡೆಯಲು 21 ಲಕ್ಷ ರೂ. ನೀಡಿರುವುದು ಮಾಧ್ಯಮಗಳ ವರದಿಯಿಂದ ಗೊತ್ತಾಗಿದೆ. ಬಿಜೆಪಿಯಲ್ಲಿ ಸಚಿವರಾಗಲು 60 ಕೋಟಿಯಿಂದ 70 ಕೋಟಿ ರೂ. ಕೊಡಬೇಕು. ಮುಖ್ಯಮಂತ್ರಿಯಾಗಲು 2 ಸಾವಿರ ಕೋಟಿ ನೀಡಬೇಕು ಎಂದು ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಹಿಂದೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು ಎಂದು ಹೇಳಿದರು.

SCROLL FOR NEXT