ರಾಜಕೀಯ

ಲೋಕಸಭಾ ಚುನಾವಣೆಗೆ ಸಿದ್ಧತೆ: ಸನಾತನ ಧರ್ಮ ವಿವಾದವನ್ನೇ ಮಹಾ ಅಸ್ತ್ರವಾಗಿಸಿಕೊಂಡ ಬಿಜೆಪಿ, ಕಾಂಗ್ರೆಸ್'ಗೆ ತಿರುಗೇಟು ನೀಡಲು ಮುಂದು!

Manjula VN

ಬೆಂಗಳೂರು: ಭಾರತೀಯ ಸನಾತನ ಧರ್ಮ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಪರ ವಿರೋಧ ಚರ್ಚೆಗಳು, ಖಂಡನೆ ಮುಂದುವರಿದಿದೆ. ಈ ವಿವಾದವನ್ನೇ ಮುಂಬರುವ ಲೋಕಸಭಾ ಚುನಾವಣೆಗೆ ಮಹಾ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಇದರಂತೆ ಕಾಂಗ್ರೆಸ್ ವಿರುದ್ಧ ಸೆಣಸಾಟ ನಡೆಸಲು ಸಜ್ಜಾಗಿದೆ.

ಸನಾತನ ಧರ್ಮ ಕುರಿತು ಸ್ಟಾಲಿನ್ ಅವರು ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಖಂಡನೆ ವ್ಯಕ್ತಪಡಿಸಿಲ್ಲ. ಮೌನ ತಾಳಿದ್ದಾರೆ. ಹೀಗಾಗಿ ಇದನ್ನು ಪ್ರಶ್ನಿಸುತ್ತಲೇ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ನಿನ್ನೆಯಷ್ಟೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಹಾಗೂ ನಂತರದ ಸಿದ್ದರಾಮಯ್ಯ ಅವರ ಫೋಟೋ ಹಾಗೂ ವಿಡಿಯೋ ಬಳಸಿಕೊಂಡು ಸನಾತನ ಧರ್ಮದ ವಿವಾದ ಸಂಬಂಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸನಾತನ ಧರ್ಮದ ವಿರೋಧಿ ಎಂದು ಬಿಂಬಿಸಿದ್ದಾರೆ.

ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಮಾತನಾಡಿ, “ಸಮಸ್ಯೆಯನ್ನು ನಿರ್ಲಕ್ಷಿಸಿದಾಗ ಮತ್ತಷ್ಟು ದೊಡ್ಡ ಸಮಸ್ಯೆಯಾಗಿ ಬೆಳೆಯತೊಡಗುತ್ತದೆ. ಬಿಜೆಪಿ ಐಟಿ ಸೆಲ್ ಧಾರ್ಮಿಕ ಸಮಸ್ಯೆಗಳನ್ನು ಹುಡುಕಲು ಮತ್ತು ಅವುಗಳನ್ನು ವಿಷಕಾರಿ ಮಟ್ಟಕ್ಕೆ ಹೆಚ್ಚಿಸಲು ಉತ್ತಮವಾಗಿ ಕೆಲಸ ಮಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯವಾಗಿದೆ. ಆದರೆ ಹಾಗಾಗುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಎಂಎಲ್‌ಸಿ ಅಡಗೂರು ವಿಶ್ವನಾಥ್ ಮಾತನಾಡಿ, ಸನಾತನ ಧರ್ಮ ಎಂದರೆ ಯಾರೋ ಒಬ್ಬರು ಮಂಗಳಾರತಿ ಮಾಡುತ್ತಾರೋ ಇಲ್ಲವೋ ಎಂಬುದಲ್ಲ. ಇದು ಒಬ್ಬರ ಆಯ್ಕೆಗೆ ಬಿಟ್ಟದ್ದು, ಆದರೆ. ದೃಷ್ಟಿಕೋನವನ್ನು ತಿಳಿಯದೆ ಹೇಳಿಕೆ ನೀಡುವುದು ಕಷ್ಟಸಾಧ್ಯ. ಸನಾತನ ಧರ್ಮ ಎಂದರೆ ಎಲ್ಲರನ್ನೂ ಪ್ರೀತಿಸುವುದು. ಆದರೆ. ಸನಾತನ ಧರ್ಮದಲ್ಲಿ ದಲಿತರು ಮತ್ತು ಒಬಿಸಿಗಳಿಗೆ ಸ್ಥಾನವಿಲ್ಲದಂತಾಗಿದೆ. ಧರ್ಮ ಗುರು ಬಸವಣ್ಣ ಸನಾತನ ಧರ್ಮವನ್ನು ಟೀಕಿಸಿ ಎಲ್ಲರನ್ನೂ ಒಳಗೊಳ್ಳಲು ಲಿಂಗಾಯತ ಧರ್ಮ ಎಂಬ ನಂಬಿಕೆಯನ್ನು ಹುಟ್ಟು ಹಾಕಿದ್ದನ್ನು ಮರೆಯಬಾರದು. ಕನಕದಾಸರೂ ಎಲ್ಲರನ್ನೂ ಒಳಗೊಳ್ಳುವ ಆಂದೋಲನ ಆರಂಭಿಸಿದ್ದರು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಎಚ್‌.ಹನುಮಂತಪ್ಪ ಮಾತನಾಡಿ, ಮತಕ್ಕಾಗಿ ಧರ್ಮ, ಧಾರ್ಮಿಕ ಭಾವನೆಗಳನ್ನು ಯಾರೂ ಬಳಸಿಕೊಳ್ಳಬಾರದು ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು. ಇಂತಹ ದುರುಪಯೋಗ ಕೇವಲ ಒಬ್ಬರ ಪಕ್ಷದ ಲಾಭಕ್ಕಾಗಿ ಆಗಿದೆಯೇ ಹೊರತು ನ್ಯಾಯಯುತವಾಗಿ ಅಲ್ಲ ಎಂದು ಹೇಳಿದ್ದಾರೆ.

SCROLL FOR NEXT