ರಾಜಕೀಯ

ಎನ್ ಡಿಎ ಸೇರಿರುವುದರಿಂದ ದಕ್ಷಿಣ ಮಾತ್ರವಲ್ಲ, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲೂ ಜೆಡಿಎಸ್ ಬಲಿಷ್ಠ: ಜಿ.ಟಿ.ದೇವೇಗೌಡ

Shilpa D

ಬೆಂಗಳೂರು: ದಕ್ಷಿಣ ಕರ್ನಾಟಕ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲೂ ಜೆಡಿಎಸ್ ಬಲಿಷ್ಠವಾಗಿದೆ.  ಜೆಡಿಎಸ್ ಪಕ್ಷ ಎನ್‌ಡಿಎ ಸೇರಿರುವುದರಿಂದ ಮುಂದಿನ ದಿನಗಳಲ್ಲಿ ಪಕ್ಷ ಬಲಿಷ್ಠವಾಗಲಿದೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದೆ ಎಂದು ಹಿರಿಯ ನಾಯಕ ಜಿ.ಟಿ ದೇವೇಗೌಡ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಂಗಳವಾರ ನಡೆದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ಸಮಿತಿ ಸಭೆ ಹಾಗೂ ಪುನಶ್ಚೇತನ ಪರ್ವ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಕಲ್ಯಾಣ ಕರ್ನಾಟಕದ ಬಾಪುಗೌಡ ದರ್ಶನಾಪುರ, ಎಸ್.ಕೆ.ಕಾಂತಾ, ವಿಶ್ವನಾಥ ಪಾಟೀಲ್ ಹೆಬ್ಬಾಳ, ಎಂ.ವೈ.ಪಾಟೀಲ್, ಸುಭಾಷ್ ಗುತ್ತೇದಾರ್ ಮುಂತಾದ ನಾಯಕರು ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು.

ನಂತರ ತಮ್ಮ ನಿಷ್ಠೆಯನ್ನು ಬೇರೆ ಪಕ್ಷಗಳಿಗೆ ಬದಲಾಯಿಸಿದರು. ಕೆಲವರು ನಿವೃತ್ತರಾದರು ಇನ್ನೂ ಕೆಲವರು ನಿಧನರಾದರು. ಆದರೆ ಅವರ ಅನುಯಾಯಿಗಳು ಜನತಾದಳದಲ್ಲಿಯೇ ಇದ್ದು ನಮ್ಮ ಪಕ್ಷದ ಆಧಾರ ಸ್ತಂಭಗಳಿದ್ದಂತೆ ಎಂದುಹೇಳಿದರು.

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು, ಮತ್ತದೇ ರೀತಿಯ ಕಾರ್ಯಕ್ರಮಗಳಿಗಾಗಿ ಕರ್ನಾಟಕದ ಲಕ್ಷಾಂತರ ಜನರು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು. ಲೋಕಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಮೂರು ಹೋಳಾಗಲಿದ್ದು, ಪ್ರತಿಯೊಂದು ಗುಂಪು ತನ್ನ ಶಕ್ತಿ ಪ್ರದರ್ಶನಕ್ಕೆ ಕಾಯುತ್ತಿದೆ ಎಂದು ದೇವೇಗೌಡ ಹೇಳಿದರು.

SCROLL FOR NEXT