ಕಂದಾಯ ಸಚಿವ ಕೃಷ್ಣ ಬೈರೇಗೌಡ 
ರಾಜಕೀಯ

ದಕ್ಷಿಣ ಭಾರತದ ಎಲ್ಲಾ ಲೋಕಸಭಾ ಸೀಟುಗಳು ಹೇಗೆ ಇವೆಯೋ ಅದೇ ರೀತಿ ಉಳಿಸುವಿರಾ: ಪ್ರಧಾನಿ ಮೋದಿಗೆ ಸರ್ಕಾರ ಪ್ರಶ್ನೆ

ನಮ್ಮಿಂದ ತೆರಿಗೆ ಹಣ, ಸಂಸತ್ ಸೀಟುಗಳನ್ನು ಕಸಿಯಲಾಗುತ್ತಿದೆ. ನೆಂಟರ ಮನೆಗೆ ಹೋದಾಗ ಖಾಲಿ ಕೈಯಲ್ಲಿ ಹೋಗುವುದು ಭಾರತೀಯ ಸಂಸ್ಕೃತಿಯಲ್ಲ. ಆದರೆ, ಬಿಜೆಪಿಯವರದ್ದು ಉಂಡು ಹೋದ ಕೊಂಡು ಹೋದ ಸಂಸ್ಕೃತಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಕಿಡಿಕಾರಿದರು.

ಬೆಂಗಳೂರು: ನಮ್ಮಿಂದ ತೆರಿಗೆ ಹಣ, ಸಂಸತ್ ಸೀಟುಗಳನ್ನು ಕಸಿಯಲಾಗುತ್ತಿದೆ. ನೆಂಟರ ಮನೆಗೆ ಹೋದಾಗ ಖಾಲಿ ಕೈಯಲ್ಲಿ ಹೋಗುವುದು ಭಾರತೀಯ ಸಂಸ್ಕೃತಿಯಲ್ಲ. ಆದರೆ, ಬಿಜೆಪಿಯವರದ್ದು ಉಂಡು ಹೋದ ಕೊಂಡು ಹೋದ ಸಂಸ್ಕೃತಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಕಿಡಿಕಾರಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತೆರಿಗೆ ಜೊತೆಗೆ ನದಿ ನೀರು ಹಂಚಿಕೆಯಲ್ಲೂ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಕೃಷ್ಣ, ತುಂಗಭದ್ರಾ, ಮಹದಾಯಿ, ಕಾವೇರಿ ಸೇರಿದಂತೆ ಅನೇಕ ನದಿ ನೀರಿನ ವಿಚಾರದಲ್ಲಿ ಮೋಸವಾಗಿದೆ. ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಖುಷ್ಕಿ ಭೂಮಿ ಇರುವುದು ಕರ್ನಾಟಕದಲ್ಲಿ. ಅತಿ ಹೆಚ್ಚು ಮಳೆ ಆಶ್ರಯ ಹೊಂದಿರುವ ಕರ್ನಾಟಕ. ಅತಿ ಹೆಚ್ಚು ಬರಕ್ಕೆ ಈಡಾಗಿದೆ. ನಮ್ಮ ನದಿ ನೀರುಗಳನ್ನು ಉಪಯೋಗಿಸಲು ಕೇಂದ್ರ ಸರ್ಕಾರ ಅನುವು ಮಾಡಿಕೊಡದೆ ಅನ್ಯಾಯ ಎಸಗುತ್ತಿದೆ. ನಮ್ಮ ಪಾಲಿನ ನೀರನ್ನು ಕೊಡಿ ಎಂದು ಪ್ರಧಾನಿಗಳನ್ನು ಪ್ರಶ್ನೆ ಮಾಡುತ್ತೇನೆಂದು ಹೇಳಿದರು.

ಭಾರತದಲ್ಲೇ ಅತ್ಯಂತ ಕಡಿಮೆ ತೆರಿಗೆ ಪಾಲು ಪಡೆಯುತ್ತಿರುವ ರಾಜ್ಯವೇ ಕರ್ನಾಟಕ. ರಾಜ್ಯದಿಂದ ಮೈತ್ರಿ ಅಭ್ಯರ್ಥಿಯೂ ಸೇರಿ 27 ಜನ ಸಂಸತ್ ಸದಸ್ಯರು ಇದ್ದರೂ ಏನೂ ಪ್ರಯೋಜನವಾಗಲಿಲ್ಲ. ನಮ್ಮಿಂದ ತೆರಿಗೆ ಜೊತೆಗೆ ಸಂಸತ್ ಸೀಟುಗಳನ್ನು ಕಸಿಯಲಾಗುತ್ತಿದೆ.

ನೆಂಟರ ಮನೆಗೆ ಹೋದಾಗ ಖಾಲಿ ಕೈಯಲ್ಲಿ ಹೋಗುವುದು ಭಾರತೀಯ ಸಂಸ್ಕೃತಿಯಲ್ಲ. ಆದರೆ ಬಿಜೆಪಿಯವರದ್ದು ಉಂಡು ಹೋದ ಕೊಂಡು ಹೋದ ಸಂಸ್ಕೃತಿ. ತೆರಿಗೆ ಜೊತೆಗೆ ನದಿ ನೀರು ಹಂಚಿಕೆಯಲ್ಲೂ ನಮಗೆ ಸಾಕಷ್ಟು ಅನ್ಯಾಯವಾಗಿದೆ.

2023-24ನೆ ಸಾಲಿನ ಕೇಂದ್ರ ಬಜೆಟ್ ಪುಸ್ತಕದ ಪ್ಯಾರಾ 39 ರಲ್ಲಿ ಬರ ಪೀಡಿತ ಮಧ್ಯ ಕರ್ನಾಟಕದ ಕೆರೆಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡಬೇಕು ಎಂದು ಬಜೆಟ್ ಅಲ್ಲಿ ಘೋಷಣೆ ಮಾಡಿ ಒಂದು ವರ್ಷ ಮೂರು ತಿಂಗಳು ಆದರೂ ಏಕೆ ಕೊಡುತ್ತಿಲ್ಲ?

ಅಪರ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರಕಾರದ ಕಾರ್ಯದರ್ಶಿಗಳಿಗೆ ಭದ್ರಾ ಮೇಲ್ದಂಡೆ ಯೊಜನೆಗೆ ಹಣ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದರು. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿಯವರು ಪತ್ರ ಬರೆದಿದ್ದರು. ಡಿ.ಕೆ.ಶಿವಕುಮಾರ್ ಖುದ್ದಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೂ ಹಣ ಬಿಡುಗಡೆ ಮಾಡದೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಅವರು ದೂರಿದರು.

ಇದು ಕರ್ನಾಟಕದ 5 ಜಿಲ್ಲೆಗಳಿಗೆ ಮಾಡಿದ ಮೋಸ. ಕರ್ನಾಟಕಕ್ಕೆ ಬರುವ ಮೋದಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತೀರಾ? ಅಥವಾ ಕರ್ನಾಟಕದ ತೆರಿಗೆ ಹಣ ತೆಗೆದು ಕೊಂಡು ಮೋಸ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ರೈತರಿಗೆ ಮೂರು ನಾಮ ಹಾಕುತ್ತಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ಎಂದು ಕೃಷ್ಣ ಬೈರೇಗೌಡ ಆಕ್ರೋಶ ಹೊರಹಾಕಿದರು.

ಮಹಾದಾಯಿ ನೀರಿಗಾಗಿ ರೈತರು ಸಾವಿರಾರು ದಿನಗಳ ಕಾಲ ಹೋರಾಟ ಮಾಡಿದ್ದಾರೆ. 13.4 ಟಿಎಂಸಿ ನೀರನ್ನು 2019 ರಲ್ಲಿ ಟ್ರಿಬ್ಯುನಲ್ ಕರ್ನಾಟಕಕ್ಕೆ ಎಂದು ಗೆಜೆಟ್ ನೋಟಿಫಿಕೇಷನ್ ಮಾಡಿದೆ. ಅಂದರೆ ನೀರಿನ ಹಂಚಿಕೆಯ ಸೂತ್ರವನ್ನು ಅಂತಿಮಗೊಳಿಸಿದೆ. ಕುಡಿಯುವ ನೀರಿಗೆ 5.4 ಟಿಎಂಸಿ, ವಿದ್ಯುತ್ ಉತ್ಪಾದನೆಗೆ 8.02 ನೀರನ್ನು ಹಂಚಿಕೆ ಮಾಡಲಾಗಿದೆ. ಇಷ್ಟು ಆದರೂ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ ಎಂದು ಅವರು ಹೇಳಿದರು.

ಕಳೆದ 4 ವರ್ಷಗಳಿಂದ ಟೆಂಡರ್ ಆದರೂ ಕಿತ್ತೂರು ಕರ್ನಾಟಕ ಭಾಗದ ರೈತರಿಗೆ ಅನ್ಯಾಯ ಮಾಡಿದೆ. ಮಹಾದಾಯಿ ಯೋಜನೆ ಕುರಿತು ಉಪ ಮುಖ್ಯಮಂತ್ರಿ, ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಸರ ಇಲಾಖೆಯ ಅನುಮತಿ ಕೊಡದಿರುವ ಹಿಂದೆ ದುರುದ್ದೇಶ ಅಡಗಿದೆ ಎಂದು ಅವರು ದೂರಿದರು.

ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ವಾಡಿಕೆಯ ಮಳೆಯಾದರೆ ಒಂದು ವರ್ಷಕ್ಕೆ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಬಿಡಬೇಕು. 2022-23ರಲ್ಲಿ 405.04 ಟಿಎಂಸಿ, 2019-20ರಲ್ಲಿ 205 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿತ್ತು. 2020-21ರಲ್ಲಿ 211 ಟಿಎಂಸಿ, 2021-22 ರಲ್ಲಿ 281 ಟಿಎಂಸಿ ನೀರನ್ನು ಬಿಟ್ಟಿದ್ದೇವೆ. ಈವರೆಗೆ 1 ಸಾವಿರ ಟಿಎಂಸಿಗೂ ಹೆಚ್ಚು ನೀರನ್ನು ಬಿಡಲಾಗಿದ್ದು, ಈ ಹೆಚ್ಚುವರಿ ನೀರನ್ನು ಮೇಕೆದಾಟು ಯೋಜನೆಯಿಂದ ಸಂಗ್ರಹಿಸಿ ಸಂಕಷ್ಟದ ಕಾಲದಲ್ಲಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಮೇಕೆದಾಟು ಸಮತೋಲನ ಅಣೆಕಟ್ಟು ಮಾಡಿದರೆ ಎರಡು ರಾಜ್ಯಗಳಿಗೂ ಅನುಕೂಲ. ಈ ಯೋಜನೆಗೆ ಅನುಮತಿ ನೀಡಬೇಕು ಎಂದು ಪತ್ರ ಬರೆದು 5 ವರ್ಷಗಳಾಗಿವೆ. ಆದರೂ, ಅನುಮತಿ ನೀಡದೆ ನಮ್ಮ ಮೇಲೆ ಕೇಂದ್ರ ಸರಕಾರ ಏಕೆ ಹಗೆತನ ಸಾಧಿಸುತ್ತಿದೆ. ಪ್ರಧಾನಿಯವರು ಕರ್ನಾಟಕಕ್ಕೆ ಏಕೆ ಮೋಸ ಮಾಡುತ್ತಾ ಇದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿ ಎಂದು ಒತ್ತಾಯಿಸಿದರು.

ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಲೋಕಸಭಾ ಸೀಟುಗಳು 129 ಇದ್ದು, ಕ್ಷೇತ್ರ ಮರು ವಿಂಗಡಣೆ ಮಾಡಿದರೆ 103ಕ್ಕೆ ಇಳಿಯಲಿದೆ. ದಕ್ಷಿಣ ಭಾಗದ ಎಲ್ಲ ರಾಜ್ಯಗಳ ಹಕ್ಕನ್ನು, ಪ್ರಾತಿನಿಧ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಇದರ ಬಗ್ಗೆ ಮೋದಿ ಉತ್ತರಿಸಬೇಕು. ನಮ್ಮ ಸೀಟು, ತೆರಿಗೆ, ನೀರು ಎಲ್ಲವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT