ಬಿಡದಿ: ನಿಮ್ಮ ತಂದೆ ಈ ಜಿಲ್ಲೆಗೆ ಬಂದು ನನ್ನ ಕರ್ಮಭೂಮಿ, ಪುಣ್ಯ ಭೂಮಿ ಎಂದು ಹೇಳಿ ಇಡೀ ಕುಟುಂಬ ಅಧಿಕಾರ ಅನುಭವಿಸುವಂತೆ ಮಾಡಿದರು. ನಿಮ್ಮ ತಂದೆ ಈ ಜಿಲ್ಲೆಯಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರು. ನಿಮ್ಮ ಧರ್ಮಪತ್ನಿ ಇದೇ ಜಿಲ್ಲೆಯಲ್ಲಿ ಶಾಸಕರಾದರು. ನೀನು ಈ ಭಾಗದಿಂದ ಸಂಸದನಾಗಿ, ಶಾಸಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದೆ. ಆದರೂ ನಿಮ್ಮ ಪಕ್ಷದ ಬಾವುಟ ಇಲ್ಲದೇ ಈ ಪಾದಯಾತ್ರೆ ಮಾಡುತ್ತಿದ್ದೀರಲ್ಲಾ, ನಿಮಗೆ ಸ್ವಾಭಿಮಾನವೇನಾದರೂ ಇದೆಯೇ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬಿಡದಿಯಲ್ಲಿ ಮಾತನಾಡಿದ ಅವರು, ಕುದುರೆ ಎಷ್ಟೇ ಚೆನ್ನಾಗಿ ರಥ ಓಡಿಸಿದರೂ ಚಾಟಿ ಏಟು ತಪ್ಪುವುದಿಲ್ಲ. ಚುನಾವಣೆಯಲ್ಲಿ ಮೈಸೂರಿನಿಂದ ಕೆಂಗೇರಿವರೆಗೂ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ, ನಿಮ್ಮ ಹೋರಾಟ ನಡೆಯುತ್ತದೆ. ಕೆಲವೆಡೆ ನಾವು ಗೆದ್ದಿದ್ದೇವೆ, ಕೆಲವೆಡೆ ನೀವು ಗೆದ್ದಿದ್ದೀರ. ಲೋಕಸಭೆ ಚುನಾವಣೆಯಲ್ಲಿ ನಾನು ಯಾಮಾರಿದೆ, ನನ್ನ ಲೆಕ್ಕಾಚಾರ ವಿಫಲವಾಗಿ ನೀವು ಗೆದ್ದಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅವರು ಹೇಳಿರುವ ಪಾಠ ಕಲಿಯುತ್ತೇನೆ. ಕುಮಾರಸ್ವಾಮಿ ಮೊನ್ನೆಯಷ್ಟೇ ಮಾಧ್ಯಮಗಳ ಮುಂದೆ ನೀನು ಏನು ಹೇಳಿದ್ದೆ? ಪಾದಯಾತ್ರೆಗೆ ಬೆಂಬಲವಿಲ್ಲ ಎಂದಿದ್ದೆ. ಆದರೆ ಇಲ್ಲಿಯವರೆಗೂ ಇದು ನನ್ನ ಭೂಮಿ, ಇಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇನೆ, ಬಿಜೆಪಿ ಅಲ್ಲ ಎಂದು ಹೇಳಲು ನಿನಗೆ ಧೈರ್ಯ ಸಾಲುತ್ತಿಲ್ಲ ಅಲ್ಲವೇ ” ಎಂದು ಕಿಡಿ ಕಾರಿದರು.
ಕುಮಾರಸ್ವಾಮಿ ಅವರೇ, ನೀವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನನ್ನ ಕುಟುಂಬದ ಆಸ್ತಿಯ ಪಟ್ಟಿ ಕೊಟ್ಟಿರುವುದು ನನಗೆ ಗೊತ್ತಿದೆ. ನನ್ನ ಆಸ್ತಿ ಎಷ್ಟಿದೆ, ಸಿದ್ದರಾಮಯ್ಯ ಅವರ ಆಸ್ತಿ ಎಷ್ಟಿದೆ ಅಂತ ಪಟ್ಟಿ ಕೊಟ್ಟಿದ್ದೀರಿ. ಬಹಳ ಸಂತೋಷ, ಇದಕ್ಕೆಲ್ಲಾ ನಾನು ಸಿದ್ಧನಾಗಿದ್ದೇನೆ, ಉತ್ತರ ಕೊಡುತ್ತೇನೆ” ಎಂದು ತಿಳಿಸಿದರು.
“ಕುಮಾರಸ್ವಾಮಿ ಅವರಿಗೆ ಒಂದು ಮಾತು ಕೇಳುತ್ತೇನೆ. ನಿಮ್ಮ ತಂದೆ ಈ ಜಾಗಕ್ಕೆ ಬಂದಾಗ ನಿಮ್ಮ ತಂದೆ ಬಳಿ ಎಷ್ಟು ಆಸ್ತಿ ಇತ್ತು, ಇಲ್ಲಿ ಬಂದ ನಂತರ ಎಷ್ಟು ಜಮೀನು ಪಡೆದುಕೊಂಡಿರಿ? ಯಾರ ಜಮೀನನ್ನು ಪಡೆದುಕೊಂಡಿರಿ? ಈಗ ಎಷ್ಟು ಎಕರೆ ಅಸ್ತಿಯಾಗಿದೆ? ಆ ಆಸ್ತಿಗಳು ಯಾರ ಹೆಸರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಮತ್ತೆ ಮರಳಿ ನಿಮ್ಮ ಹೆಸರಿಗೆ ಬಂದಿದ್ದು ಹೇಗೆ? ನಿಮ್ಮ ಹಾಗೂ ನಿಮ್ಮ ಕುಟುಂಬದವರದ್ದು ಇಲ್ಲಿ ನೂರಾರು ಎಕರೆ, ಕುಂಬಳಗೋಡು ಬಳಿ 200-250 ಎಕರೆ, ದೊಡ್ಡ ಗುಬ್ಬಿ ಹಾಗೂ ಚಿಕ್ಕ ಗುಬ್ಬಿ, ಬೆಂಗಳೂರು ಉತ್ತರದ ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ, ಹಾಸನ, ನೆಲಮಂಗಲದಲ್ಲಿ ಎಷ್ಟು ಆಸ್ತಿ ಇದೆ? ಇವುಗಳ ಮೌಲ್ಯ ಎಷ್ಟು?” ಎಂದು ಪ್ರಶ್ನಿಸಿದರು.
“ನಿಮ್ಮ ಸಹೋದರ ಬಾಲಕೃಷ್ಣ ಗೌಡ ಒಬ್ಬ ಸರ್ಕಾರಿ ಅಧಿಕಾರಿ, ನೀವು ಸಿನಿಮಾ ಪ್ರದರ್ಶಕರು, ಗುತ್ತಿಗೆದಾರರು. ನಿಮ್ಮ ತಂದೆ ಬಳಿ ಜಮೀನು ಇರಲಿಲ್ಲ. ಆದರೂ ಇಷ್ಟು ಆಸ್ತಿ ಎಲ್ಲಿಂದ ಬಂತು? ಹೇಗೆ ಬಂತು ಎಂದು ಹೇಳಿ. ನೀವು ಹೊಲ ಉಳುಮೆ ಮಾಡುತ್ತಿರುವುದು, ವ್ಯಾಪಾರ ಮಾಡುತ್ತಿರುವುದರ ಬಗ್ಗೆ ಮಾತನಾಡಿ. ರಾಜ್ಯದ ಜನರ ಮುಂದೆ ನಿಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಿ” ಎಂದು ಸೆಡ್ಡು ಹೊಡೆದರು. ನನಗೆ ಲುಲುಕುಮಾರ, ಬೇರೆ ತರಹದ ಚಿತ್ರ ತೋರಿಸಿದ್ದೆ ಎಂದು ಟೀಕೆ ಮಾಡುತ್ತೀರಲ್ಲಾ ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ನೀಡಿದೆ. ಆದರೂ ನೀವು ಬರಲಿಲ್ಲ. ಕಳೆದ ಎರಡು ಅಧಿವೇಶನಗಳಲ್ಲೂ ನೀವು ಚರ್ಚೆಗೆ ಬರಲಿಲ್ಲ. ಈಗಲೂ ನಿಮ್ಮ ಸಹೋದರ, ಶಾಸಕರುಗಳ ಬಳಿ ದಾಖಲೆಗಳನ್ನು ಕೊಟ್ಟು ಸದನದಲ್ಲಿ ಚರ್ಚೆ ಮಾಡಲು ಹೇಳಿ. ಎಲ್ಲಾ ಅಂಶಗಳು ಸದನದಲ್ಲಿ ದಾಖಲೆಯಾಗಿ ಉಳಿಯಲಿ” ಎಂದು ಸವಾಲು ಹಾಕಿದರು.
ನಾನು ಮರೆತಿದ್ದ ಹಳೇ ವಿಚಾರ ಮತ್ತೆ ನೆನಪಿಸಿದ್ದೀರಿ
“ನಾನು, ನೀವು ಒಂದಾಗಿ ಸರ್ಕಾರ ಮಾಡಿದಾಗ, ನೀವು ಈ ಹಿಂದೆ ನಿಮ್ಮ ಅಣ್ಣ ಬಾಲಕೃಷ್ಣಗೌಡ ಎಂಬ ಅಧಿಕಾರಿ ಮೂಲಕ ನನ್ನ ತಂಗಿ, ಮಡದಿ, ಸಹೋದರ, ರವಿ ಅವರ ಮೇಲೆ ಕೇಸು ದಾಖಲಿಸಿದ್ದನ್ನು ಮರೆತಿದ್ದೆ. ಚಂದ್ರಪ್ಪ ಅವರಿಂದ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಯಾವ ರೀತಿ ಕೇಸು ದಾಖಲಿಸಿದ್ದಿರಿ ಎಂಬುದನ್ನು ನಾನು ಮರೆತಿದ್ದೆ. ಆದರೆ ಕಳೆದ ಒಂದು ವರ್ಷದಲ್ಲಿ ಅವುಗಳನ್ನು ನೆನೆಸಿಕೊಳ್ಳುವಂತೆ ಮಾಡಿದ್ದೀರಿ. ಇದಕ್ಕೆಲ್ಲಾ ಉತ್ತರ ಕೊಡಲು, ಚರ್ಚೆ ಮಾಡಲು ಸಿದ್ಧನಾಗಿದ್ದೇನೆ. ಮುಂದಿನ ಅಧಿವೇಶನದಲ್ಲಾದರೂ ಚರ್ಚೆಗೆ ಕಳಿಸಿ. ನಿಮ್ಮ ಅನಿಷ್ಟಗಳು, ನಿಮ್ಮ ಸಹೋದರ ಬಾಲಕೃಷ್ಣಗೌಡನ ಆಸ್ತಿಗಳ ಬಗ್ಗೆ ಚರ್ಚೆ ಮಾಡೋಣ. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾನೆ ಎಂದು ಬಯಲು ಮಾಡಲು ಸಿದ್ಧನಿದ್ದೇನೆ” ಎಂದು ಗುಡುಗಿದರು.