ನವದೆಹಲಿ: 2024ರ ಲೋಕಸಭಾ ಚುನಾವಣೆ ನಂತರ ಪುಟಿದೆದ್ದ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ ಬಣ'ವನ್ನು ರಾಜಕೀಯ ತಜ್ಞರು ಇಂದಿರಾ ಗಾಂಧಿಯನ್ನು ಅಧಿಕಾರದಿಂದ ತೊಲಗಿಸಲು ಒಗ್ಗೂಡಿದ ವಿರೋಧ ಪಕ್ಷಗಳ 1977ರ ಮಾದರಿಗೆ ಹೋಲಿಕೆ ಮಾಡಿದ್ದರು. ಆದಾಗ್ಯೂ, ಚುನಾವಣಾ ಕದನದಲ್ಲಿ ವಿಪಕ್ಷಗಳ ಮೈತ್ರಿಕೂಟ 'ರನ್ನರ್ ಆಫ್' ಅಷ್ಟೇ ಆಯಿತು. ಸರ್ಕಾರ ರಚನೆಗೆ ಅಗತ್ಯವಾದ 272 ಬಹುಮತವನ್ನು ಬಿಜೆಪಿ ಪಡೆಯಬಾರದು ಎಂಬುದು ಅದರ ಪ್ರಮುಖ ಗುರಿಯಾಗಿತ್ತು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 292 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿತು.
ಆಂತರಿಕ ಕಲಹ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಮೈತ್ರಿಕೂಟ ಯಶಸ್ವಿಯಾಗಲ್ಲ ಎಂಬ ಊಹೆಗಳು ಹೆಚ್ಚಾಗಿತ್ತು. ಆದರೆ ಚುನಾವಣೆ ಫಲಿತಾಂಶ ಬಂದ ನಂತರ ಎಲ್ಲಾ ಲೆಕ್ಕಾಚಾರ ತಲೆಕೆಳಕಾದದ್ದು ಇಂಡಿಯಾ ಬಣದಲ್ಲಿ ಹೊಸ ಹುರುಪಿಗೆ ಕಾರಣವಾಗಿತ್ತು. ಇದಲ್ಲದೆ, ಸಮೀಕ್ಷೆಗಳು ಮತ್ತು ತಜ್ಞರು ಕೂಡಾ ಬಿಜೆಪಿಯ ಜಯದ ಓಟಕ್ಕೆ ಅಂಕುಶ ಹಾಕುವ ಮೈತ್ರಿಯ ಸಾಮರ್ಥ್ಯ, ಆರ್ಥಿಕ ಯಶಸ್ಸು ಮತ್ತು ಹಿಂದುತ್ವದ ಬಗ್ಗೆ ಅದರ ನಿಲುವಿನ ಬಗ್ಗೆ ಸಂದೇಶ ವ್ಯಕ್ತಪಡಿಸಿದ್ದವು. ಅನೇಕ ಸಂದರ್ಭಗಳಲ್ಲಿ ಇಂಡಿಯಾ ಬಣ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಮುಂಚೂಣಿಗೆ ಬಂದಿದ್ದವು.
ಪಶ್ಚಿಮ ಬಂಗಾಳದಲ್ಲಿ, ಸಿಎಂ ಮಮತಾ ಬ್ಯಾನರ್ಜಿ ಕಾಂಗ್ರೆಸ್ಗೆ ಯಾವುದೇ ಸ್ಥಾನಗಳನ್ನು ಬಿಟ್ಟುಕೊಡಲು ನಿರಾಕರಿಸಿದರು. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ-ಯುನೈಟೆಡ್ (ಜೆಡಿಯು) ಬಿಜೆಪಿ ನೇತೃತ್ವದ ಎನ್ಡಿಎಗೆ ಸೇರಲು ನಿರ್ಧರಿಸಿದ ನಂತರ ಮೈತ್ರಿಕೂಟಕ್ಕೆ ಭಾರಿ ಹೊಡೆತ ಬಿದ್ದಿತು. 'ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಣೆ' ಹೆಸರಿನಲ್ಲಿ ನಡೆಸಿದ ಹೋರಾಟ ಹೆಚ್ಚಿನ ಪ್ರಭಾವ ಬೀರಲಿಲ್ಲ.
ಚುನಾವಣೆಯಲ್ಲಿ ಅದ್ಬುತ ಕಂಬ್ಯಾಕ್ ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಪುನರುಜ್ಜೀವನ ಎಂದು ವ್ಯಾಖ್ಯಾನಿಸಲಾಗಿದ್ದರೂ ಅನೇಕ ಸಂದೇಹಗಳಿವೆ. ಇತ್ತೀಚಿಗೆ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಬಿಜೆಪಿ ವಿರೋಧಿ ಪಾಳಯ ಆಂತರಿಕ ಸಂಘರ್ಷಗಳೊಂದಿಗೆ ನಲುಗುತ್ತಿರುವಂತೆ ಕಂಡುಬಂದಿತು.
ಇತ್ತೀಚೆಗೆ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿನ ಬಿರುಕುಗಳನ್ನು ಮತ್ತಷ್ಟು ಬಹಿರಂಗಪಡಿಸಿತು. ಹಲವಾರು ಮೈತ್ರಿ ಪಕ್ಷಗಳು ಒಕ್ಕೂಟವನ್ನು ಮುನ್ನಡೆಸುವ ಕಾಂಗ್ರೆಸ್ನ ಸಾಮರ್ಥ್ಯವನ್ನು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನಕ್ಕೆ ನಾಯಕತ್ವದ 'ಅತಿಯಾದ ಆತ್ಮವಿಶ್ವಾಸ ಮತ್ತು ದುರಹಂಕಾರ' ಕಾರಣ ಎಂದು ಹಲವು ಮೈತ್ರಿ ಪಕ್ಷಗಳ ನಾಯಕರು ಟೀಕಿಸಿದ್ದಾರೆ. ಸಮಾಜವಾದಿ ಪಕ್ಷ (ಎಸ್ಪಿ), ಶಿವಸೇನೆ (ಯುಬಿಟಿ), ಮತ್ತು ಆರ್ಜೆಡಿ ಸೇರಿದಂತೆ ಹಲವು ಪಕ್ಷಗಳು ಮಮತಾ ಬ್ಯಾನರ್ಜಿ ಅವರನ್ನು ಮೈತ್ರಿಕೂಟದ ಮುಖವಾಗಿ ಬೆಂಬಲಿಸುವುದರೊಂದಿಗೆ ಮಿತ್ರಪಕ್ಷಗಳ ನಡುವಿನ ಅಸಮಾಧಾನವು ಸ್ಪಷ್ಟವಾಗಿದೆ.
ಚಳಿಗಾಲದ ಅಧಿವೇಶನದ ಆರಂಭದಲ್ಲಿ ಸಂಸತ್ತಿನಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸುವ ವಿಚಾರದಲ್ಲಿ ಎಸ್ಪಿ, ಟಿಎಂಸಿ ಮತ್ತು ಎಎಪಿಯಂತಹ ಪಕ್ಷಗಳು ಕಾಂಗ್ರೆಸ್ನಿಂದ ದೂರವಾಗಿದ್ದರೂ, ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನಂತರ ಪಕ್ಷಗಳ ಮರುಸಂಘಟನೆಗೆ ಕಾರಣವಾಯಿತು. ಮುಂಬರುವ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆ ಮೈತ್ರಿ ಪಕ್ಷಗಳಿಗೆ ಸವಾಲಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯುವಲ್ಲಿ ವಿಫಲವಾದರೆ ಹಳೆಯ ಪಕ್ಷವು ನಾಯಕತ್ವದಿಂದ ಕೆಳಗಿಳಿಯಬೇಕೆಂಬ ಬೇಡಿಕೆ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.