ರಮೇಶ್ ಜಿಗಜಿಣಗಿ, ಸುರೇಶ್ ಅಂಗಡಿ ಮತ್ತು ಸತೀಶ್ ಜಾರಕಿಹೊಳಿ
ರಮೇಶ್ ಜಿಗಜಿಣಗಿ, ಸುರೇಶ್ ಅಂಗಡಿ ಮತ್ತು ಸತೀಶ್ ಜಾರಕಿಹೊಳಿ 
ರಾಜಕೀಯ

ನಿಷ್ಠರ ಕಡೆಗಣನೆ; ಎಲ್ಲಾ ಪಕ್ಷಗಳಲ್ಲೂ 'ಫ್ಯಾಮಿಲಿ ಪಾಲಿಟಿಕ್ಸ್' ಗೆ ಮನ್ನಣೆ: ಪ್ರಭಾವಿ ಕುಟುಂಬಗಳ ನೆಚ್ಚಿ ಕೂತ ಬಿಜೆಪಿ-ಕಾಂಗ್ರೆಸ್!

Shilpa D

ಬೆಳಗಾವಿ: ದೊಡ್ಡ ಚುನಾವಣೆಗಳನ್ನು ಗೆಲ್ಲುವ ಸಾಮರ್ಥ್ಯವಿರುವ ಹಲವಾರು ಕ್ರಿಯಾಶೀಲ ಯುವ ನಾಯಕರನ್ನು ರಾಜಕೀಯ ಪಕ್ಷಗಳು ತಯಾರು ಮಾಡುತ್ತಿದ್ದರೂ, ಕೆಲವು ಆಯ್ದ ರಾಜಕೀಯವಾಗಿ ಪ್ರಭಾವಿ ಕುಟುಂಬಗಳು ಹಲವಾರು ಕ್ಷೇತ್ರಗಳಲ್ಲಿ ಲೋಕಸಭೆ ಟಿಕೆಟ್‌ಗಳನ್ನು ಪಡೆಯುತ್ತಲೇ ಇರುತ್ತವೆ.

ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ದಶಕಗಳಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆಲವು ಕುಟುಂಬಗಳು ಒಟ್ಟಿಗೆ ಟಿಕೆಟ್ ಪಡೆದ ಉದಾಹರಣೆಗಳಿವೆ. 1960 ರ ದಶಕದಿಂದ ಆರಂಭದಿಂದ ಲೋಕಸಭೆ ಚುನಾವಣೆಯಿಂದ ಅನೇಕ ಕ್ಷೇತ್ರಗಳಲ್ಲಿ ಕೇವಲ ಒಂದು ಅಥವಾ ಎರಡು ಕುಟುಂಬಗಳನ್ನು ಮಾತ್ರ ಪರಿಗಣಿಸುವ ಕಾಂಗ್ರೆಸ್ ನ ವಿಶಿಷ್ಟ ಪ್ರವೃತ್ತಿಯು ಜಿಲ್ಲೆಯಲ್ಲಿ ಇಂದಿಗೂ ಮುಂದುವರೆದಿದೆ.

ಮಾಜಿ ಕೇಂದ್ರ ಸಚಿವ ದಿವಂಗತ ಬಿ ಶಂಕರಾನಂದ್ ಅವರಂತಹ ಕೆಲವು ಕಾಂಗ್ರೆಸ್ ನಾಯಕರು ಚಿಕ್ಕೋಡಿಯಿಂದ ಒಂಬತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ಎಸ್‌ಬಿ ಸಿದ್ನಾಳ್ ಬೆಳಗಾವಿಯಿಂದ ನಾಲ್ಕು ಬಾರಿ ಸ್ಪರ್ಧಿಸಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಬಂದರೆ 1967ರಿಂದ 1999ರವರೆಗೆ 32 ವರ್ಷಗಳ ಕಾಲ ಕೇಂದ್ರದ ಮಾಜಿ ಸಚಿವ ದಿವಂಗತ ಬಿ ಶಂಕರಾನಂದ್ ಅವರ ಕುಟುಂಬವನ್ನೇ ಕಾಂಗ್ರೆಸ್ ನೆಚ್ಚಿಕೊಂಡಿತ್ತು.

ಪಕ್ಷವು ಶಂಕರಾನಂದ ಕುಟುಂಬದ ಸದಸ್ಯರನ್ನು 10 ಬಾರಿ (1967 ರಿಂದ 1999 ರವರೆಗೆ) ಕಣಕ್ಕಿಳಿಸಿತು ಮತ್ತು ಅವರು ಏಳು ಚುನಾವಣೆಗಳನ್ನು ಗೆದ್ದರು ಮತ್ತು ಎರಡರಲ್ಲಿ ಸೋತರು, ಅವರ ಮಗ ಪ್ರದೀಪ್ ಕಣಗಲಿ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

ಮೂರು ದಶಕಗಳಿಂದ ಚಿಕ್ಕೋಡಿಯಿಂದ ಸ್ಪರ್ಧಿಸಲು ಶಂಕರಾನಂದ ಕುಟುಂಬವನ್ನು ಬಿಟ್ಟು ಬೇರೆ ನಾಯಕರಿಗೆ ಪಕ್ಷ ಅವಕಾಶ ನೀಡಿರಲಿಲ್ಲ. 1998 ರಿಂದ 2009 ರ ವರೆಗೆ ರಮೇಶ ಜಿಗಜಿಣಗಿ ಚಿಕ್ಕೋಡಿಯಿಂದ ಮೂರು ಬಾರಿ ಜೆಡಿಯು ಟಿಕೆಟ್‌ನಲ್ಲಿ ಮತ್ತು ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.

ಶಂಕರಾನಂದ್ ಮತ್ತು ಜಿಗಜಿಣಗಿ ಅವರು ಸುಮಾರು 43 ವರ್ಷಗಳ ಕಾಲ ಚಿಕ್ಕೋಡಿ ಸ್ಥಾನವನ್ನು ಅಲಂಕರಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 1980 ರಿಂದ 1991 ರವರೆಗೆ ಸತತ ನಾಲ್ಕು ಬಾರಿ ಎಸ್‌ಬಿ ಸಿದ್ನಾಳ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು ಮತ್ತು ಅವರು 16 ವರ್ಷಗಳ ಕಾಲ ಸಂಸದರಾಗಿದ್ದರು.

2000 ರ ದಶಕದ ಆರಂಭದಲ್ಲಿ ಬಿಜೆಪಿ ಹೊರಹೊಮ್ಮಿದ ನಂತರ, ನಾಲ್ಕು ಬಾರಿ ಅಂದರೆ 2004 ರಿಂದ 2019 ರವರೆಗೆ ಪಕ್ಷದ ಟಿಕೆಟ್ ಪಡೆದು ಎಲ್ಲಾ ಚುನಾವಣೆಗಳಲ್ಲಿ ಗೆದ್ದ ಸುರೇಶ ಅಂಗಡಿ ಅವರ ಕುಟುಂಬದ ಮೇಲೆ ಬಿಜೆಪಿ ಸಂಪೂರ್ಣವಾಗಿ ಅವಲಂಬಿತವಾಗಿದೆ.

ಅವರ ನಿಧನದ ನಂತರ, ಪಕ್ಷವೂ ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ಹಂಚಿಕೆ ಮಾಡಿತು. 2022 ರಲ್ಲಿ ಅವರ ಪತ್ನಿ ಮಂಗಳಾ ಅಂಗಡಿಗೆ ಟಿಕೆಟ್ ನೀಡಿತು. ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯಗಳ ಹಲವಾರು ಯುವ ಮುಖಂಡರು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬಿಜೆಪಿಯಲ್ಲಿ ಮುಂದುವರಿದ ಪ್ರವೃತ್ತಿಯಿಂದ ಅಸಮಾಧಾನಗೊಂಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಆಯ್ದ ಒಂದು ಅಥವಾ ಎರಡು ರಾಜಕೀಯವಾಗಿ ಪ್ರಭಾವಿ ಕುಟುಂಬಗಳ ಮೇಲೆ ಕಾಂಗ್ರೆಸ್ ಅವಲಂಬಿತವಾಗಿದೆ. ಲೋಕಸಮರಕ್ಕೆ ಚಿಕ್ಕೋಡಿಯಲ್ಲಿ ಜಾರಕಿಹೊಳಿ ಕುಟುಂಬದ ಸದಸ್ಯರನ್ನು ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ನಾಯಕತ್ವ ಉತ್ಸುಕವಾಗಿದೆ, ಕುಟುಂಬವು ಈಗಾಗಲೇ ಮನೆಯಲ್ಲಿ ಮೂವರು ಶಾಸಕರು ಮತ್ತು ಒಬ್ಬ ಎಂಎಲ್‌ಸಿಯನ್ನು ಹೊಂದಿದ್ದರೂ ಸಹ ಮತ್ತೆ ಜಾರಕಿಹೊಳಿ ಕುಟುಂಬಕ್ಕೆ ಮಣೆ ಹಾಕಲಾಗುತ್ತಿದೆ.

ಇನ್ನೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುಟುಂಬದ ಮೇಲೆ ಪಕ್ಷ ಅವಲಂಬಿತವಾಗಿದೆ, ಹೆಬ್ಬಾಳ್ಕರ್ ಪುತ್ರ ಮೃಣಾಲ್ ಪಕ್ಷದ ಟಿಕೆಟ್‌ಗಾಗಿ ಮುಂಚೂಣಿಯಲ್ಲಿದ್ದಾರೆ.

ಹೆಬ್ಬಾಳ್ಕರ್ ಅವರ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಬೆಳಗಾವಿಯ ಹಾಲಿ ಎಂಎಲ್ ಸಿ. ಮತ್ತೊಂದೆಡೆ, ಬಿಜೆಪಿ ಕೂಡ ಬೆಳಗಾವಿ ಕ್ಷೇತ್ರದಲ್ಲಿ ಸುರೇಶ ಅಂಗಡಿ ಕುಟುಂಬದ ಮೇಲೆ ಅವಲಂಬಿತವಾಗಿದ್ದು, ಅಂಗಡಿ ಕುಟುಂಬದ ಒಬ್ಬರಿಗೆ ಅಥವಾ ಅಂಗಡಿ ಅವರ ಮಗಳ ಮಾವ ಜಗದೀಶ ಶೆಟ್ಟರ್‌ಗೆ ಟಿಕೆಟ್ ನೀಡುವ ನಿರೀಕ್ಷೆಯಿದೆ.

SCROLL FOR NEXT