ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ 
ರಾಜಕೀಯ

ಯಡಿಯೂರಪ್ಪ ಕುತ್ತಿಗೆ ಹಿಸುಕಿದ್ದಾರೋ, ಬೆಳೆಸಿದ್ದಾರೋ ಎಂಬುದು ಚುನಾವಣೆ ಬಳಿಕ ತಿಳಿಯಲಿದೆ: ವಿಜಯೇಂದ್ರ

Manjula VN

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕುತ್ತಿಗೆ ಹಿಸುಕಿದ್ದಾರೋ ಅಥವಾ ತಳಮಟ್ಟದಲ್ಲಿದ್ದವರನ್ನು ಮೇಲಕ್ಕೆ ಬೆಳೆಸಿದ್ದಾರೋ ಎಂಬುದು ಮುಂಬರುವ ಲೋಕಸಭಾ ಚುನಾವಣೆ ಬಳಿಕ ತಿಳಿದುಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹಾಗೂ ತಂದೆಯ ವಿರುದ್ಧ ಕಿಡಿಕಾರುತ್ತಿರುವ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ವರಿಷ್ಠರು ಈ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದರು.

ಈಶ್ವರಪ್ಪನವರು ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ ಒಂದು ಕಾಲದಲ್ಲಿ ಯಡಿಯೂರಪ್ಪನವರು ಸೈಕಲ್ ನಲ್ಲಿ ರಾಜ್ಯಾದ್ಯಂತ ಸುತ್ತಾಡಿ ಕಟ್ಟಿದ ಫಲವಾಗಿ ಇಂದು ರಾಜ್ಯದಲ್ಲಿ ಪಕ್ಷ ಬಲಿಷ್ಠ ವಾಗಿದೆ. ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ನವರು ಕುತ್ತಿಗೆ ಹಿಸುಕಿದ್ದಾರೋ, ಇಲ್ಲ ಎತ್ತರಕ್ಕೆ ಬೆಳೆಸಿದ್ದಾರೋ ಎಂಬುದು ತಿಳಿಯಲಿದೆ ಎಂದು ವ್ಯಂಗ್ಯವಾಡಿದರು.

ವರಿಷ್ಠರು ಸಾಮೂಹಿಕವಾಗಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನಮ್ಮ ಒತ್ತಡ ಏನೂ ಇಲ್ಲ ಅದೂ ಅಲ್ಲದೆ ಗೆಲ್ಲುವ ಪಕ್ಷದಲ್ಲಿ ಸಮಸ್ಯೆಗಳು ಹೆಚ್ಚಾಗಿ ಇರುತ್ತದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಈ ಸಮಸ್ಯೆ ಯಾಕೇ ಇಲ್ಲ ಎಂದರೆ, ಅಲ್ಲಿ ಹೋದ ಅಭ್ಯರ್ಥಿಗಳಿಗೆ ಠೇವಣಿ ಸಿಗೋದಿಲ್ಲ ಎನ್ನುವುದು ಗೊತ್ತಿದೆ. ಅದಕ್ಕೆ ಅಲ್ಲಿ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರು ಶಿವಮೊಗ್ಗಕ್ಕೆ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಇಂದು ದೇಶದ ಪ್ರಧಾನಿ ಮೋದಿಯವರು ಶಿವಮೊಗ್ಗಕ್ಕೆ ಬರುತ್ತಾ ಇದ್ದಾರೆ. ಇದು ರಾಜ್ಯದಲ್ಲಿ ಸಂಚಲವನ್ನೇ ಉಂಟು ಮಾಡುತ್ತದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಮೋದಿ ಪರವಾದ ಅಲೆ ಇದೆ, ಹಾಗಾಗಿ ಕಾಂಗ್ರೆಸ್ ನವರು ತಮ್ಮ ಅಭ್ಯರ್ಥಿಗಳನ್ನು ಹಾಕಲು ಯೋಚಿಸುತ್ತಿದ್ದಾರೆ, ಯಾವುದೋ ಭ್ರಮೆಯಲ್ಲಿದ್ದ ಕಾಂಗ್ರೆಸ್ ಗೆ ಈಗ ಅರಿವಾಗಿದೆ. ಹಾಗಾಗಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಚಿಂತೆ ಮಾಡಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.

SCROLL FOR NEXT