ಬಿಎಸ್ ಯಡಿಯೂರಪ್ಪ 
ರಾಜಕೀಯ

ಟಿಕೆಟ್ ಹಂಚಿಕೆಯಲ್ಲಿ ಮೇಲುಗೈ; ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪಗೆ ಅಗ್ನಿ ಪರೀಕ್ಷೆ

ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸಿದ ನಂತರ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವ ವಿಷಯದಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸಿದ ನಂತರ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವ ವಿಷಯದಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ. ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಸ್ಥಿರಗೊಳಿಸುವಲ್ಲಿ ಲೋಕಸಭೆಯ ಫಲಿತಾಂಶ ಮಹತ್ವದ್ದಾಗಿದೆ ಎನ್ನುತ್ತವೆ ಮೂಲಗಳು.

ಬಿಜೆಪಿ ಹೈಕಮಾಂಡ್ ಆಯ್ಕೆಗಳನ್ನು ಮಾಡಿದ್ದರೂ, ಬಿಎಸ್ ಯಡಿಯೂರಪ್ಪ ಅವರ ಪಾಳೆಯದ ಎಲ್ಲಾ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ ಎಂಬುದು ಪಟ್ಟಿಯಿಂದ ಸ್ಪಷ್ಟವಾಗಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ ಮತ್ತು ಜೆಡಿಎಸ್‌ನೊಂದಿಗೆ ಮೈತ್ರಿಯೊಂದಿಗೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯಲ್ಲಿದೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ತಪ್ಪಿರುವ ಬಹುತೇಕ ನಾಯಕರು ಯಡಿಯೂರಪ್ಪ ವಿರುದ್ಧ ಲಾಬಿ ಮಾಡಿದ್ದರಿಂದ ಅವರು 2021ರಲ್ಲಿ ಸಿಎಂ ಸ್ಥಾನದಿಂದ ಇಳಿಯಬೇಕಾಗಿತ್ತು ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರ ಬಲಗೈ ಬಂಟನ ಎದುರು ಸೋತಿದ್ದಾರೆ. ಸಿ.ಟಿ.ರವಿ ಉಡುಪಿ-ಚಿಕ್ಕಮಗಳೂರು ಸಂಸದೀಯ ಸ್ಥಾನದಿಂದ ಸ್ಪರ್ಧಿಸಲು ಬಯಸಿದ್ದರು. ಆದಾಗ್ಯೂ, ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಈ ಹಿಂದೆ ಯಡಿಯೂರಪ್ಪ ಅವರ ಆಪ್ತರಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿದ್ದರು.

ಯಡಿಯೂರಪ್ಪ ಅವರು ಸಿ.ಟಿ.ರವಿ ಅವರಿಗೆ ಟಿಕೆಟ್ ನೀಡದಂತೆ ನೋಡಿಕೊಂಡಿದ್ದು ಮಾತ್ರವಲ್ಲದೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ. ಈ ಬೆಳವಣಿಗೆ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಮಾಜಿ ಸಿಎಂ ಡಿವಿ ಸದಾನಂದಗೌಡರನ್ನು ಕೆರಳಿಸಿದೆ.

2011ರಲ್ಲಿ ಯಡಿಯೂರಪ್ಪನವರ ಬೆಂಬಲದಿಂದ ಡಿವಿ ಸದಾನಂದಗೌಡ ಅವರನ್ನು ಸಿಎಂ ಸ್ಥಾನಕ್ಕೆ ಏರಿಸಲಾಗಿತ್ತು, ಆದರೆ ಸಿಎಂ ಆದ ಬಳಿಕ ಗೌಡರು ತಮ್ಮ ರಾಜಕೀಯ ಎದುರಾಳಿಗಳ ಜತೆ ಕೈಜೋಡಿಸಿ ಯಡಿಯೂರಪ್ಪ ಅವರನ್ನು ಕೆರಳಿಸಿದ್ದರು. ಅದೇ ರೀತಿ, ಯಡಿಯೂರಪ್ಪನವರ ಸ್ನೇಹಿತ-ವೈರಿಯಾಗಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕೆಇ ಕಾಂತೇಶ್ ಗೆ ಟಿಕೆಟ್ ಕೊಡಿಸುವಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ವಿಫಲರಾಗಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡಿದ್ದರು.

ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿಯಿಂದ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಕಾಂತೇಶ್ ಗೆ ಲೋಕಸಭೆ ಟಿಕೆಟ್ ಕೈ ತಪ್ಪಿದ ಕಾರಣ ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದೀಗ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರನ್ನು ಸೋಲಿಸುವುದಾಗಿ ಈಶ್ವರಪ್ಪ ಪಣ ತೊಟ್ಟಿದ್ದಾರೆ. ಯಡಿಯೂರಪ್ಪ ವಿರೋಧಿಗಳ ಜತೆ ಕೈಜೋಡಿಸಿರುವ ಮತ್ತೊಬ್ಬ ಹಿರಿಯ ನಾಯಕ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಬದಲಿಗೆ ಹೊಸಬ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರನ್ನು ಪಕ್ಷ ಆಯ್ಕೆ ಮಾಡಿದೆ.

ಕೇಂದ್ರ ಸಚಿವ ಭಗವಂತ ಖೂಬಾ (ಬೀದರ್), ರಾಜಾ ಅಮರೇಶ್ವರ ನಾಯ್ಕ್ (ರಾಯಚೂರು), ಉಮೇಶ್ ಜಾಧವ್ (ಕಲಬುರಗಿ), ಬಿ ಶ್ರೀರಾಮುಲು (ಬಳ್ಳಾರಿ), ರಮೇಶ್ ಜಿಗಜಿಣಗಿ (ವಿಜಯಪುರ), ಗಾಯತ್ರಿ ಸಿದ್ದೇಶ್ವರ್ (ದಾವಣಗೆರೆ) ಯಡಿಯೂರಪ್ಪ ಶಿಫಾರಸಿನ ಮೇರೆಗೆ ಟಿಕೆಟ್ ನೀಡಿದ ಇತರ ಅಭ್ಯರ್ಥಿಗಳು ಎಂದು ಮೂಲಗಳು ತಿಳಿಸಿವೆ. ಈ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಆಂತರಿಕ ಪ್ರತಿರೋಧವನ್ನು ಎದುರಿಸಿದರು. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ವಿಜಯೇಂದ್ರ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಪ್ರಧಾನಿ ಮೋದಿ ಅಲೆಯೊಂದಿಗೆ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಅವರ ಆಪ್ತ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT