ಪ್ರತಿಭಟನಾನಿರತ ಕಾರ್ಯಕರ್ತರು.
ಪ್ರತಿಭಟನಾನಿರತ ಕಾರ್ಯಕರ್ತರು. 
ರಾಜಕೀಯ

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳಗೆ ಬಂಡಾಯ ಬಿಸಿ: ಗೋ ಬ್ಯಾಕ್ ಘೋಷಣೆ ಕೂಗಿದ ಕಾರ್ಯಕರ್ತರು, ಕಾರಿಗೆ ಮುತ್ತಿಗೆ!

Manjula VN

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಬಂಡಾಯದ ಬಿಸಿ ತಟ್ಟಿದ್ದು, ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಂತೆ, ಟಿಕೆಟ್ ವಂಚಿತ ರಘು ಚಂದನ್ ಕಡೆಯವರು ಕಾರಜೋಳ ಕಾರಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ಕಾರಜೋಳ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆಯೇ ಟಿಕೆಟ್ ವಂಚಿತ ರಘು ಚಂದನ್ ಕಡೆಯವರು ಚಳ್ಳಕೆರೆ ಗೇಟ್ ಬಳಿ ಜಮಾಯಿಸಿ ಗೋ ಬ್ಯಾಕ್ ಗೋವಿಂದ ಕಾರಜೋಳ, ಗೋ ಬ್ಯಾಕ್ ಗೋವಿಂದ ಕಾರಜೋಳ ಎಂದು ಭಿತ್ತಿ ಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು.

ಪರಿಸ್ಥಿತಿಯ ಗಂಭೀರತೆ ಅರಿತು ಜಿಲ್ಲಾ ಪೊಲೀಸರು ಕಾರಜೋಳ ಅವರಿಗೆ ಭದ್ರತೆ ಒದಗಿಸಿದರು. ಬಳಿಕ ಅನಿವಾರ್ಯವಾಗಿ ಕಾರಜೋಳ ಅವರು ಕಚೇರಿಗೆ ತೆರಳಲು ಮತ್ತೊಂದು ಮಾರ್ಗದಲ್ಲಿ ತೆರಳಬೇಕಾಯಿತು.

ಪೊಲೀಸ್ ಅಧೀಕ್ಷಕ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಪೊಲೀಸರು ಅಲರ್ಟ್ ಆಗಿದ್ದರು, ಕೆಲವರು ಗೋವಿಂದ್ ಕಾರಜೋಳ ಅವರ ಮೇಲೆ ಮೊಟ್ಟೆ, ಕಲ್ಲುಗಳನ್ನು ಎಸೆಯಲು ಮುಂದಾಗಿದ್ದರು. ಈ ವೇಳೆ 14 ಜನರನ್ನು ಬಂಧನಕ್ಕೊಳಪಡಿಸಲಾಗಿದೆ. ಇದಲ್ಲದೆ, ಕಪ್ಪು ಬಾವುಟ, ಎಣ್ಣೆ ಹಾಗೂ ಮೊಟ್ಟೆಯನ್ನೂ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ಹಿರಿಯೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾರಜೋಳ ಅವರು, ರಾಜ್ಯದಲ್ಲಿ ಮೊದಲ ಬಾರಿಗೆ ಜೆಡಿಎಸ್ ಜೊತೆ ಬಿಜೆಪಿ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದ್ದು, ಸಮನ್ವಯದೊಂದಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ 28 ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಹಿಂದಿನ ಲೋಕಸಭಾ ಚುನಾವಣೆಗಿಂತ ಈ ಬಾರಿ ನಮ್ಮ ಶಕ್ತಿ ವೃದ್ಧಿಸಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಲಿದ್ದಾರೆಂದು ಹೇಳಿದರು.

ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದ್ದಾರೆ ಎಂಬ ಕಾರಣಕ್ಕೆ ತಮ್ಮ ವಿರುದ್ಧ ಕ್ಷೇತ್ರದಲ್ಲಿ ಬಂಡಾಯ ಎದ್ದಿದೆಯಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಬಂಡಾಯ ಇಲ್ಲ ಎಂದು ತಿಳಿಸಿದರು.

SCROLL FOR NEXT