ದಿಂಗಾಲೇಶ್ವರ ಸ್ವಾಮೀಜಿ 
ರಾಜಕೀಯ

ಧಾರವಾಡ: ಜಾತಿ ಆಧಾರದ ಮೇಲೆ ಲಿಂಗಾಯತರ ಮತ ಚಲಾವಣೆ ಡೌಟ್; ಹಾಗಿದ್ದರೆ ಈ ಬಾರಿ ಗೆಲ್ಲೋದು ಯಾರು?

ಐದನೇ ಬಾರಿಗೆ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.

ಧಾರವಾಡ: ಐದನೇ ಬಾರಿಗೆ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.

ಈ ಹಿಂದೆ ಪಕ್ಷ ಇದೇ ತಂತ್ರ ಅನುಸರಿಸಿತ್ತು, ಆದರೆ ಈ ಸ್ಟ್ಯಾಟರ್ಜಿ ಫಲಿಸಲಿಲ್ಲ, ಹೀಗಾಗಿ ಈ ಬಾರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಶಿರಹಟ್ಟಿ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮಿಗಳ ಬೆಂಬಲ ಪಡೆಯಲು ಕಾಂಗ್ರೆಸ್ ಮುಂದಾಗಿದೆ.

ಧಾರವಾಡ ಭಾಗದಲ್ಲಿ ಒಟ್ಟು ಮತದಾರರ ಶೇಕಡ 25 ಕ್ಕೂ ಹೆಚ್ಚು ಪ್ರಮಾಣದಲ್ಲಿ ಲಿಂಗಾಯತ ಮತದಾರರಿದ್ದರೂ, ಅವರು ಎಂದಿಗೂ ಜಾತಿ ಆಧಾರದ ಮೇಲೆ ಮತ ಚಲಾಯಿಸಿಲ್ಲ. ಕಳೆದ 17 ಚುನಾವಣೆಗಳಲ್ಲಿ, ಉದ್ಯಮಿ ವಿಜಯ ಸಂಕೇಶ್ವರ್ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದನ್ನು ಹೊರತುಪಡಿಸಿದರೆ, ಇತರ ಸಮುದಾಯಗಳ ಅಭ್ಯರ್ಥಿಗಳನ್ನು ಹೆಚ್ಚು ಬಾರಿ ಆಯ್ಕೆ ಮಾಡಿದ್ದಾರೆ. ಇತರ ನಾಲ್ಕು ಸಂಸದರಲ್ಲಿ ಮೂವರು ಬ್ರಾಹ್ಮಣರು ಮತ್ತು ಒಬ್ಬರು ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿಬಿ ಕರ್ಮಾಕರ್ ಎಂಬ ಬ್ರಾಹ್ಮಣ ಅಭ್ಯರ್ಥಿ, ಲಿಂಗಾಯತರಾದ ಕಿಸ್ಸಾನ್ ಮಜ್ದೂರ್ ಪ್ರಜಾ ಪಾರ್ಟಿಯ ಸಿಟಿ ಕಂಬಳಿ ವಿರುದ್ಧ ಗೆದ್ದರು. 1957 ರಲ್ಲಿ ಕರ್ಮಾಕರ್ ಅವರು ಲಿಂಗಾಯತರಾಗಿದ್ದ ಸ್ವತಂತ್ರ ಅಭ್ಯರ್ಥಿ ಬಿಎನ್ ಮುನವಳ್ಳಿ ಅವರನ್ನು ಸೋಲಿಸಿದರು. 1962 ರಿಂದ 1977 ರವರೆಗೆ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬ್ರಾಹ್ಮಣ ಅಭ್ಯರ್ಥಿ ಸರೋಜಿನಿ ಮಹಿಷಿ ಎರಡು ಬಾರಿ ಲಿಂಗಾಯತ ಅಭ್ಯರ್ಥಿಗಳ ವಿರುದ್ಧವೇ ಗೆಲುವು ಸಾಧಿಸಿದ್ದರು.

1980ರಲ್ಲಿ ಜನತಾ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಮಹಿಷಿ, ಕುರುಬ (ಒಬಿಸಿ) ಸಮುದಾಯದ ಡಿ.ಕೆ.ನಾಯ್ಕರ ವಿರುದ್ಧ ಸೋಲು ಕಂಡಿದ್ದರು. ಮುಂದಿನ ಮೂರು ಚುನಾವಣೆಗಳಲ್ಲಿ ಜನತಾ ಪಕ್ಷ ಅಥವಾ ಜನತಾ ದಳದಿಂದ ಸ್ಪರ್ಧಿಸಿದ್ದ ಲಿಂಗಾಯತ ಅಭ್ಯರ್ಥಿಗಳನ್ನು ಸೋಲಿಸಿದರು. ನಾಯ್ಕರ್ ಅವರು 1996 ರಲ್ಲಿ ಕ್ಷೇತ್ರದಿಂದ ವಿಜಯ ಸಂಕೇಶ್ವರರ ವಿರುದ್ಧ ಸೋತರು ನಂತರ ನಡೆದ 1998 ಮತ್ತು 1999 ರ ಚುನಾವಣೆಗಳಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗಳ ವಿರುದ್ಧ ಗೆದ್ದರು.

2004 ರ ಚುನಾವಣೆಯಲ್ಲಿ, ಕ್ಷೇತ್ರವು ಮತ್ತೆ ಬ್ರಾಹ್ಮಣರಾದ ಪ್ರಲ್ಹಾದ ಜೋಶಿ ಅವರನ್ನು ಆಯ್ಕೆ ಮಾಡಿತು, ಅವರು ಕಾಂಗ್ರೆಸ್‌ನ ನಿವೃತ್ತ ಅಧಿಕಾರಿ ಬಿಎಸ್ ಪಾಟೀಲ್ ವಿರುದ್ಧ ಸ್ಪರ್ಧಿಸಿದ್ದರು. ಮುಂದಿನ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜೋಶಿ ವಿರುದ್ಧ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಯಾವುದೇ ಯಶಸ್ಸು ನೀಡಲಿಲ್ಲ. ಜೋಶಿ ಅವರು 2009 ರಲ್ಲಿ ಮಂಜುನಾಥ್ ಕುನ್ನೂರ ಮತ್ತು 2014 ಮತ್ತು 2019 ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಸೋಲಿಸಿದರು. ಲಿಂಗಾಯತ ಸಮುದಾಯವು ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯವಾಗಿದ್ದರೂ ಯಾವಾಗಲೂ ಇತರ ಸಮುದಾಯಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ.

ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಲಿಂಗಾಯತ ದ್ರೋಹದ ವಿಷಯವನ್ನು ಸಾಕಷ್ಟು ತೀವ್ರವಾಗಿ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ಸದಸ್ಯ ಯೋಗೀಶ್‌ಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದ್ದರಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪ್ರಚಾರದ ಸಮಯದಲ್ಲಿ, ಜೋಶಿ ಲಿಂಗಾಯತ ಧರ್ಮೀಯರಿಗೆ ಹಣದ ಆಮಿಷ ಒಡ್ಡಿದ್ದಾರೆ ಮತ್ತು ಲಿಂಗಾಯತ ಸಮುದಾಯದಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ವಿನಯ್ ಆರೋಪಿಸಿದ್ದಾರೆ. ಈ ಚುನಾವಣೆಯಲ್ಲಿ ಜೋಶಿ ಅವರನ್ನು ಸೋಲಿಸದ ಹೊರತು ಸಮುದಾಯಕ್ಕೆ ಯಾವುದೇ ಬೇರೆ ಮಾರ್ಗವಿಲ್ಲ ಎಂದು ಅವರು ತಮ್ಮ ಪ್ರಚಾರದ ವೇಳೆ ಹೇಳಿದ್ದಾರೆ.

ಮತ್ತೊಂದೆಡೆ, ದಿಂಗಾಲೇಶ್ವರ ಸ್ವಾಮಿ ಜೋಶಿ ವಿರುದ್ಧ 'ಪವಿತ್ರ ಯುದ್ಧ' ಘೋಷಿಸಿದ್ದಾರೆ, ಕೇಂದ್ರ ಸಚಿವರು ಲಿಂಗಾಯತ ಧರ್ಮೀಯರನ್ನು ಅವಮಾನಿಸಿದ್ದಾರೆ ಮತ್ತು ಸಮುದಾಯದ ಮುಖಂಡರನ್ನು ಹತ್ತಿಕ್ಕಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿದಿದ್ದರೂ, ಮಠಾಧೀಶರು ಜೋಶಿ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. "ಸಮುದಾಯದ ಹೆಮ್ಮೆಯನ್ನು ಉಳಿಸಲು" ಅವರಿಗೆ ಪಾಠ ಕಲಿಸುವಂತೆ ಲಿಂಗಾಯತರಿಗೆ ಮನವಿ ಮಾಡುತ್ತಿದ್ದಾರೆ. ಈ ಪ್ರಯತ್ನಗಳು ಜೋಶಿ ಅವರ ಗೆಲುವಿಗೆ ಅಡ್ಡಗಾಲು ಹಾಕುತ್ತದೆಯೇ ಎಂಬುದು ಜೂನ್ 4 ರಂದು ತಿಳಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJPಗೆ ಒಂದು ಅವಕಾಶ ಕೊಡಿ, ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

HAL ನಿರ್ಮಿತ 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್‌ಗೆ ಸಚಿವ ರಾಮ್ ಮೋಹನ್ ನಾಯ್ಡು ಹಸಿರು ನಿಶಾನೆ

ಕೋಗಿಲು ಮನೆಗಳ ತೆರವು ಕೇಸ್​ಗೆ ಟ್ವಿಸ್ಟ್: 2016ರ ಮೊದಲು ಇಲ್ಲಿ ಮನೆಗಳೇ ಇರಲಿಲ್ಲ, ನಿವಾಸಿಗಳ ಆರೋಪಕ್ಕೆ ಸ್ಯಾಟಲೈಟ್ ಫೋಟೋ ಮೂಲಕ GBA ತಿರುಗೇಟು..!

Kogilu layout Demolition: ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡಲಾಗುವುದು; ಸಿಎಂ ಸಿದ್ದರಾಮಯ್ಯ

ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ತಿಮ್ಮಪ್ಪನ ದರ್ಶನಕ್ಕೆ ದೇವಸ್ಥಾನಗಳಲ್ಲಿ ಭಕ್ತ ಸಾಗರ; ಹಲವೆಡೆ ವಾಹನ ಸಂಚಾರ ನಿರ್ಬಂಧ

SCROLL FOR NEXT