ಬೆಂಗಳೂರು: ಕಾಂಗ್ರೆಸ್ ನಲ್ಲಿ ಭಿನ್ನಮತ ಇಲ್ಲವೆಂದು ಹೇಳುವುದಿಲ್ಲ. ಶಾಸಕರು ಅತೃಪ್ತರಾಗಿರುವುದು ನಿಜ ಆದರೆ, ಸರ್ಕಾರ ಪತನವಾಗಲಿದೆ ಎಂಬುದು ಸುಳ್ಳು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸೋಮವಾರ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರ ಮಾದರಿಯಲ್ಲಿ ಆಪರೇಷನ್ ಕಮಲದ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದೇನಿದ್ರೂ ಪಾರ್ಟಿ ಒಳಗೆ ಜಗಳ ಅಷ್ಟೇ ಹೊರತಾಗಿ ಪಾರ್ಟಿ ಹೊರಗೆ ನಮ್ಮ ಘರ್ಷಣೆ ಇಲ್ಲ. ಹಾಗಾಗಿ, ಸರ್ಕಾರ ಬೀಳುತ್ತದೆ ಎನ್ನುವುದು ಸುಳ್ಳು ಎಂದು ಹೇಳಿದರು.
ನಮ್ಮ ಸರ್ಕಾರ 4 ವರ್ಷ ಇದ್ದೇ ಇರುತ್ತದೆ. ಭಿನ್ನಮತ ಇಲ್ಲ ಎಂದು ಹೇಳಲ್ಲ. ಆದರೆ ಸರ್ಕಾರ ಬೀಳುತ್ತೆ ಅನ್ಮೋದು ಸುಳ್ಳು. ಅವರ ಪಕ್ಷದಲ್ಲೂ ಭಿನ್ನಮತ ಇಲ್ವಾ? ವರ್ಗಾವಣೆ,ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇರಬಹುದು. ಅಧಿಕಾರ ಇರುವವರೆಗೆ ಸಮಸ್ಯೆ ಇರುತ್ತವೆ. ನಾವು ಸಮಸ್ಯೆ ಸರಿಪಡಿಸಿಕೊಳ್ಳುತ್ತೇವೆ. ಗೊಂದಲ, ಭಿನ್ನಮತ ಆಗ್ತಾನೇ ಇರುತ್ತದೆ ಹಾಗೂ ಹೋಗ್ತಾನೇ ಇರುತ್ತದೆ. ಅದನ್ನೇ ಮುಂದಿಟ್ಟುಕೊಂಡು ಸರ್ಕಾರ ಬೀಳುತ್ತೆ ಅನ್ನೋದು ಸುಳ್ಳು. ಇಲ್ಲಿ ಲಾಂಗ್ ಜಂಪ್ ಜಿಗಿಯೋಕೆ ಆಗಲ್ಲ. ಮಹಾರಾಷ್ಟ್ರದ್ದು ಬೇರೆ, ಕರ್ನಾಟಕಕ್ಕೆ ಅದನ್ನು ಹೋಲಿಕೆ ಮಾಡೋಕೆ ಆಗಲ್ಲ ಎಂದು ತಿಳಿಸಿದರು.
ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಸಿಎಂ ಅವರನ್ನು ಕೇಳಬೇಕು. ಸಚಿವರಿಗೆ ಚುನಾವಣೆಯಲ್ಲಿ ಯಾವುದೇ ಟಾಸ್ಕ್, ಕಂಡೀಷನ್ ಕೊಟ್ಟಿರಲಿಲ್ಲ. ಗೆಲ್ಲಿಸಿಕೊಂಡು ಬರಲೇಬೇಕೆಂದು ಹೇಳಿರಲಿಲ್ಲ. ಹೈಕಮಾಂಡ್ ನಿಂದ ಬರಬೇಕಿತ್ತು ಅಲ್ವೇ. ಇಂಗ್ಲೆಡ್ ನಂತೆ ನಮ್ಮಲ್ಲಿ ಪರಿಸ್ಥಿತಿ ಇಲ್ಲ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣ ದೇಶದ ಸಮಸ್ಯೆ ಅಲ್ಲ. ವೈಯುಕ್ತಿಕ ಆಗಿದೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೇಮ್ಸ್ ಬಾಂಡ್ ಥರ ಹಿಗ್ಗಿಸೋಕೆ ಆಗಲ್ಲ. ಅದನ್ನೇ ನಾವು ಫೋಕಸ್ ಮಾಡೋದಲ್ಲ. ರಾಜ್ಯದಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಅದರ ಕಡೆ ಗಮನಹರಿಸಬೇಕು ಎಂದು ಹೇಳಿದರು.
ಅಧ್ಯಕ್ಷರ ಬಗ್ಗೆ ಆರೋಪ ವಿಚಾರವಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಸುತ್ತಿ ಎಲ್ಲಿಗೆ ಬಂದು ನಿಲ್ಲುತ್ತೆ ನೊಡೋಣ. ಎಸ್ ಐಟಿಯವರು ತನಿಖೆ ಮಾಡುತ್ತಿದ್ದಾರೆ. ಸುಮ್ಮನೆ ಆರೋಪ ಮಾಡಿದರೆ, ರಾಜೀನಾಮೆ ಕೊಡೋಕೆ ಆಗುತ್ತಾ. ಸಿಬಿಐಗೆ ಅವರೇ ಅಲ್ಲೇ ಕೊಡಬಹುದಿತ್ತು. ನಾವು ಹಲವು ಕೇಸ್ ಕೊಟ್ಟಿದ್ದೆವು. ನಾವು ಹೇಳಿದ್ದನ್ನೇ ಸಿಬಿಐನವರು ಹೇಳಿದ್ರು. ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ ಎಂದರು.