ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜಕೀಯ

ಚನ್ನಪಟ್ಟಣ ಉಪಚುನಾವಣೆ: ಪ್ರಜ್ವಲ್ ಸಿಡಿ ವಿಚಾರ ಪ್ರಸ್ತಾಪ; ಹಾಸನದಲ್ಲಿ ಕಣ್ಣೀರು ಹಾಕುವಂತೆ ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ದೇವೇಗೌಡರೆ ಇಲ್ಲಿ ಯಾಕೆ ಬಂದಿರಿ? ನಿಮ್ಮ ಮೊಮ್ಮಗ ಹಾಸನದಲ್ಲಿ ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದರಲ್ಲ ಅಲ್ಲಿ ಹೋಗಿ ಅಳಿ. ಇಲ್ಲಿ ಮೊಮ್ಮಗ 3ನೇ ಬಾರಿಗೆ ಸೋತುಬಿಡುತ್ತಾನೆಂದು ಬಂದು ಇಲ್ಲಿ ಅಳುತ್ತಾ ಇದ್ದಾರೆ.

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜಕೀಯ ಘಟಾನುಘಟಿ ನಾಯಕರುಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡವೆ ಪ್ರಜ್ವಲ್ ರೇವಣ್ಣ ಅವರ ಸಿಡಿ ಪ್ರಕರಣ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಅವರ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕೂಡ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ ಅವರು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರಿಗೆ ಅವಕಾಶ ಕೊಡಿ. ಈ ಉಪಚುನಾವಣೆಯಲ್ಲಿ ಅವರಿಗೆ ಆಶೀರ್ವಾದ ಮಾಡಿ, ಯೋಗೇಶ್ವರ್ ಗೆ ಎಲ್ಲರೂ ಕೈ ಎತ್ತಿ ಆಶೀರ್ವಾದ ಮಾಡಿದ್ದೀರಿ, ನಾನು ಚನ್ನಪಟ್ಟಣಕ್ಕೆ ಮತ್ತೊಮ್ಮೆ ಬರ್ತೀನಿ, 11ಕ್ಕೆ ಸಾರ್ವಜನಿಕ ಸಭೆ ಇದೆ, ಅಲ್ಲಿ ಹೆಚ್ಚು ಹೊತ್ತು‌ ಮಾತನಾಡುತ್ತೇನೆ. ಇದು ಉಪಚುನಾವಣೆ, ಸಾಮಾನ್ಯ ಚುನಾವಣೆ ಅಲ್ಲ. ಇದೇನು ಸರ್ಕಾರ ರಚನೆ ಮಾಡುವ ಚುನಾವಣೆಯಲ್ಲ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿದ್ದಿರಿ, ಆದರೆ, ಅವರು ಬಿಜೆಪಿ ಜೊತೆ ಸೇರಿ ಕೇಂದ್ರದಲ್ಲಿ ಮಂತ್ರಿ ಆಗುವ ಆಸೆಯಿಂದ ಮಂಡ್ಯಕ್ಕೆ ಹೋಗಿ ನಿಂತರು. ಕೇಂದ್ರದಲ್ಲಿ ಮಂತ್ರಿಯಾಗಿ ಐದಾರು ತಿಂಗಳು ಆಯಿತು. ಐದಾರು ತಿಂಗಳಲ್ಲಿ ಐದು ತಿಂಗಳು ಮಂಡ್ಯದಲ್ಲೇ ಇದ್ದಾರೆ. ಇವರು ದೇಶದ ಮಂತ್ರಿ, ಬೇರೆ ರಾಜ್ಯಗಳಿಗೆ ಹೋಗಲ್ಲ. ಯಾಕಂದ್ರೆ ಇವರು ಜನರ ಪರವಾಗಿ ಕೆಲಸ ಮಾಡಲ್ಲ.

2018ರಲ್ಲಿ‌ ನಾವೆಲ್ಲಾ ಸೇರಿ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದೆವು, ಕೇವಲ 37 ಸ್ಥಾನ ಗೆದ್ದಿದ್ದರೂ ಸಿಎಂ ಮಾಡಿದ್ದೆವು. ಈ ಕುಮಾರಸ್ವಾಮಿ, ದೇವೇಗೌಡರು ಯಾವತ್ತೂ ಬಡವರ ಪರ ಕೆಲಸ ಮಾಡಿಲ್ಲ. ಯಾವಾಗಲೂ ಭಾವನಾತ್ಮಕವಾಗಿ ಜನರ ಅನುಕಂಪ ಗಿಟ್ಟಿಸಿಕೊಂಡು ಅಧಿಕಾರಕ್ಕೆ ಬರುತ್ತಾರೆ. ದೇವೇಗೌಡ ಕುಟುಂಬಕ್ಕೆ ಇದೇ ಕೆಲಸವಾಗಿದೆ. ಈ ಚುನಾವಣೆಯಲ್ಲಿ ಸೋಲುತ್ತೇವೆಂದು ಅವರಿಗೆ ಗೊತ್ತಾಗಿದೆ. ಹಾಗಾಗಿ ಈಗಲೇ ಅಳೋಕೆ ಶುರು ಮಾಡಿದ್ದಾರೆ.

ದೇವೇಗೌಡರೆ ಯಾಕೆ ಇಲ್ಲಿ ಬಂದು ಅಳ್ತೀರಾ? ನಿಮ್ಮ ಮೊಮ್ಮಗ ಹಾಸನದಲ್ಲಿ ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ನಲ್ಲ ಅಲ್ಲಿ ಹೋಗಿ ಅಳಿ. ಇಲ್ಲಿ ಮೊಮ್ಮಗ 3ನೇ ಬಾರಿಗೆ ಸೋತುಬಿಡ್ತಾನೆ ಅಂತ ಬಂದು ಇಲ್ಲಿ ಅಳ್ತಾ ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಆಯ್ತು ಈಗ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಅಳೋದು ಕಲ್ತಿದ್ದಾರೆ. ಅಳೋ ಗಂಡಸರನ್ನ ನಂಬಬಾರದಂತೆ. ಯಾಕೆ ಅಳಬೇಕು? ಕೆಲಸ ಮಾಡಿದ್ದರೆ ಯಾಕೆ ಅಳಬೇಕು? ಕರುಳು ಹಿಂಡಿ ಬಿಡುತ್ತಂತೆ, ಯಾಕೆ ಹಾಸನದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಆದಾಗ ಯಾಕೆ ಅಳಲಿಲ್ಲಾ? ಅಲ್ಲಿ ದೇವೇಗೌಡರಿಗೆ, ನಿಖಿಲ್‌ಗೆ ಅಳು ಬರಲಿಲ್ಲ. ಈಗ ಚನ್ನಪಟ್ಟಣದಲ್ಲಿ ಅಳು ಬರುತ್ತಾ? ಎಂದು ಲೇವಡಿ ಮಾಡಿದರು.

40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕಿ ನನ್ನ ಮೇಲೆ ಇಲ್ಲ. ಆದರೆ, ಈಗ ಬಿಜೆಪಿಯವರು ನನ್ನನ್ನ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ನನ್ನನ್ನ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ದೇವೇಗೌಡ ಅವರು ಈ ವಯಸ್ಸಿನಲ್ಲೂ ಮೊಮ್ಮಗನ ಪರ ಪ್ರಚಾರ ಮಾಡುವುದಕ್ಕೆ ಬಂದಿದ್ದಾರೆ, ಸಿದ್ದರಾಮಯ್ಯನ ಗರ್ವ ಇಳಿಸಬೇಕು ಎಂದು ದೇವೇಗೌಡ ಅವರು ಹೇಳಿದ್ದಾರೆ. ಈ ರೀತ ಹೇಳಿ ಜನರ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನು ಯವಾತ್ತೂ ಅಧಿಕಾರ ಬಂದಾಗ ಗರ್ವದಿಂದ, ಅಹಂ ನಿಂದ ನಡೆದುಕೊಂಡಿಲ್ಲ. ಜನರ ಉತ್ಸಾಹ ನೋಡುತ್ತಿದ್ದಾರೆ ಯೋಗೆಶ್ವರ್ ಗೆಲುವು ನಿಶ್ಚಿತ, ನೂರಕ್ಕೆ ನೂರರಷ್ಟು ಯೋಗೇಶ್ವರ್ ಗೆಲ್ಲುತ್ತಾರೆ. ಯೋಗೇಶ್ವರ್ ಈ ತಾಲೂಕಿನವರು, ಇಲ್ಲಿನ ಜನರ ಕಷ್ಟ ಗೊತ್ತಿರುವವರು. ನಿಖಿಲ್ ಕುಮಾರಸ್ವಾಮಿಗೆ ಗೊತ್ತಾ, ಹಳ್ಳಿಗಳು ಗೊತ್ತಾ? ಕುಮಾರಸ್ವಾಮಿಗೂ ಗೊತ್ತಿಲ್ಲ ಎಂದರು.

ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗಿದ್ದಾರೆ, ನಾವು ಮೇಕೆದಾಟು ಯೋಜನಗೆ ಮುಂದಾಗಿದ್ದೇವೆ. ಈಗ ರೈತನ ಮಗ, ಮಣ್ಣಿನ ಮಗ ಅದನ್ನು ಮಾಡಿಸಲಿ, ಕೇಂದ್ರದಲ್ಲಿ ಅನುಮತಿ ಕೊಡಿಸಲಿ, 24 ಗಂಟೆಗಳಲ್ಲಿ ಸೈನ್ ಹಾಕಿಸುತ್ತೇನಂದು ಹೇಳಿದ್ದರು. ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ದೇವೇಗೌಡರು ಇಲ್ಲಿಗೆ ಬಂದು ಕಣ್ಣೀರು ಹಾಕಿದರೆ. ಮೇಕೆದಾಟು ಮಾಡಲು ಆಗಲ್ಲ, ರಾಜ್ಯದ ಪರವಾಗಿ ಬಿಜೆಪಿ-ಜೆಡಿಎಸ್ ನವರು ಬಾಯಿ ಬಿಡಲ್ಲ. ಇಂತವರಿಗೆ ಓಟ್ ಹಾಕ್ತೀರಾ? ಇಂತವರನ್ನ ನೀವು ಆಯ್ಕೆ ಮಾಡಬಾರದು ನಿಖಿಲ್ ಕುಮಾರಸ್ವಾಮಿ ಸೋಲಿಸಿ ಯೋಗೇಶ್ವರ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT