ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರು ಮೊದಲು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ಐಆರ್ ದಾಖಲಾದ ಕೂಡಲೇ ರಾಜೀನಾಮೆ ನೀಡುವ ಅಗತ್ಯವಿಲ್ಲ. ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರು ಆರೋಪಗಳ ಬಗ್ಗೆ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಎಫ್ಐಆರ್ ದಾಖಲಾದ ಕೂಡಲೇ ರಾಜೀನಾಮೆ ನೀಡಬೇಕಾದರೆ, ಇದೂವರೆಗೂ ಎಫ್ಐಆರ್ ದಾಖಲಾಗಿರುವವರು, ಆರೋಪಪಟ್ಟಿ ಸಲ್ಲಿಕೆಯಾಗಿರುವವರು, ಜಾಮೀನಿನ ಮೇಲೆ ಹೊರಗಿರುವವರು ಕೂಡ ರಾಜೀನಾಮೆ ನೀಡಬೇಕೆಂದು ತಿರುಗೇಟು ನೀಡಿದರು.
ವಿರೋಧ ಪಕ್ಷದ ನಾಯಕರು ಇತರರಿಗೆ ಉಪದೇಶಿಸುವ ಮೊದಲು ರಾಜೀನಾಮೆ ನೀಡುವ ಮೂಲಕ ಮಾದರಿಯಾಗಬೇಕು. ಅದು ಅವರಿಗೆ ಸಿಎಂ ರಾಜೀನಾಮೆ ಪಡೆಯುವ ನೈತಿಕ ಅಧಿಕಾರವನ್ನು ನೀಡುತ್ತದೆ ಎಂದು ಹೇಳಿದರು.
ಇದೇ ವೇಳೆ ನೂರಾರು ಕೋಟಿ ರೂ.ಬೆಲೆಬಾಳುವ ಭೂಮಿ ಕಬಳಿಕೆ ಪ್ರಕರಣ ಸಂಬಂಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಲೊಟ್ಟೆಗೊಲ್ಲಹಳ್ಳಿ ಸರ್ವೆ ನಂಬರ್ 10/1ರಲ್ಲಿ32 ಗುಂಟೆ ಜಮೀನನ್ನು ಬಿಡಿಎ 1977ರ ಫೆಬ್ರವರಿಯಲ್ಲಿ ಭೂಸ್ವಾಧೀನಕ್ಕೆ ನೋಟಿಫೈ ಮಾಡಿತ್ತು. ಅದಕ್ಕೂ ಮುನ್ನ ಈ ಜಮೀನು ರಾಮಸ್ವಾಮಿ ಎನ್ನುವರಿಗೆ ಸೇರಿತ್ತು. 26 ವರ್ಷಗಳ ಕಾಲ ಬಿಡಿಎ ಸುಪರ್ದಿಯಲ್ಲಿದ್ದ ಈ ಜಮೀನನ್ನು ಆರ್.ಅಶೋಕ್ ಅವರು 2007ರಲ್ಲಿ ಶುದ್ಧಕ್ರಯ ಮಾಡಿಕೊಂಡಿದ್ದಾರೆ. 2009 ರ ಅ.16 ರಂದು ರಾಮಸ್ವಾಮಿ ಕಡೆಯವರಿಂದ ಈ ಜಮೀನನ್ನು ಡಿನೋಟಿಫೈಗೆ ಅರ್ಜಿ ಸಲ್ಲಿಸಲಾಗುತ್ತದೆ. ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 'ಕೂಡಲೇ ಮಂಡಿಸಿ' ಎಂದು ಸೂಚಿಸಿದ್ದಾರೆ.
ಡಿನೋಟಿಫೈ ಆಗುವ ಮುನ್ನವೇ ಅಶೋಕ ಜಮೀನು ಖರೀದಿಸಿದ್ದಾರೆ. ಬಿಡಿಎ ಜಮೀನಿಗೆ ಅರ್ಜಿ ಸಲ್ಲಿಸಿದ ರಾಮಸ್ವಾಮಿ ಅವರಿಗೆ ನಿವೇಶನಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಆದರೆ ಅಶೋಕ ಅವರು ಹತ್ತು ದಿನಗಳಲ್ಲಿ ಡಿನೋಟಿಫೈ ಮಾಡಿ ಬಿಡಿಎಗೆ ಭಾರಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ನಿವೇಶನಗಳನ್ನು ಮುಡಾಕ್ಕೆ ಹಿಂದಿರುಗಿಸಿರುವುದು ಅವರ ವೈಯಕ್ತಿಕ ನಿರ್ಧಾರ. ಇದು ಡಿನೋಟಿಫೈ ಭೂಮಿ ಅಲ್ಲ ಎಂದು ಇದೇ ವೇಳೆ ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂಬ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಇಬ್ಬರೂ ಒಟ್ಟಿಗೆ ಬೆಳೆದವರು ಮತ್ತು ದಶಕಗಳಿಂದ ಪರಿಚಿತರಾಗಿದ್ದಾರೆಂದು ಹೇಳಿದರು.