ಬೆಂಗಳೂರು: ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪ ಆಧಾರ ರಹಿತ ಎಂದು ಹೇಳಿರುವ ಬಿಜೆಪಿ ನಾಯಕ ಮತ್ತು ಮಹದೇವಪುರದ ಮಾಜಿ ಶಾಸಕ ಅರವಿಂದ್ ಲಿಂಬಾವಳಿ ಅವರು, ಆರೋಪಗಳಿಗೆ ದಾಖಲೆ ಸಹಿತ ಉತ್ತರ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದೇವಪುರದಲ್ಲಿ ಯಾವುದೇ ಅಕ್ರಮಗಳೂ ನಡೆದಿಲ್ಲ. ಸಕ್ರಮ ಚುನಾವಣೆ ನಡೆದಿದೆ. ರಾಹುಲ್ ಗಾಂಧಿ ಆರೋಪಗಳು ನಿರಾಧಾರ, ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಮಾಡಿರುವ ಐದು ಹಂತದ ಮತಗಳ್ಳತನ ಹಾಗೂ ಏಳು ಉದಾಹರಣೆಗಳಿಗೂ ಲಿಂಬಾವಳಿ ಅವರು ದಾಖಲೆ ಸಹಿತ ಉತ್ತರ ಕೊಟ್ಟಿದ್ದಾರೆ.
ಮಹದೇವಪುರ ಕ್ಷೇತ್ರದಲ್ಲಿ ಒಟ್ಟು 6,80,514 ಮತದಾರರಿದ್ದಾರೆ. ನಮ್ಮ ಕ್ಷೇತ್ರಕ್ಕೆ ವಲಸಿಗರು ಬರುವುದರಿಂದ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚು ಮತಗಳು ಬಂದಿವೆ.
ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಗ್ರಾಫ್ ಮೇಲೆ ಹೋಗುತ್ತೆ. ರಾಹುಲ್ ಗಾಂಧಿಗೆ ಏಕೆ ಅಸಮಾಧಾನ ಆಗಿದೆ ಗೊತ್ತಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಲೀಡ್ ಸಿಕ್ಕಿತ್ತು. ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ ಮುಂದಿತ್ತು. ಮಹದೇವಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಗೆ ಹೆಚ್ಚು ಮತ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಯವರು ತಪ್ಪು ಮಾಹಿತಿ ನೀಡಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿತ್ತು ಎಂದು ತಿಳಿಸಿದರು.
ರಾಹುಲ್ ಗಾಂಧಿಯವರಿಗೆ ಎಸ್.ಎಂ. ಕೃಷ್ಣ ಮೈಂಡ್ ಫುಲ್ ಆಫ್ ಇಮೆಚ್ಯುರಿಟಿ ಎಂದಿದ್ದರು. ಮತಗಳ್ಳತನ ಆಗಿದೆ ಎಂದು ಮಹದೇವಪುರದಿಂದ ಶುರು ಮಾಡಿದ್ದಾರೆ. 2008 ರಿಂದ ನಾಲ್ಕು ಬಾರಿ ವಿಧಾನಸಭೆ ಮತ್ತು ನಾಲ್ಕು ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹದೇವಪುರದಲ್ಲಿ ಬಿಜೆಪಿ ಗೆದ್ದಿದೆ. ನಾನು ನಾಳೆ ನಾಡಿದ್ದರಲ್ಲಿ ದೆಹಲಿಗೆ ಹೋಗಿ ಪ್ರಾತ್ಯಕ್ಷಿಕೆ ಕೊಡುತ್ತೇನೆ. ರಾಹುಲ್ ಗಾಂಧಿ ಆರೋಪದ ಕುರಿತು ರಿಯಾಲಿಟಿ ಚೆಕ್ ಮಾಡಿದ್ದೇವೆ.
ಮತದಾರರ ಪಟ್ಟಿಗೆ ಹೆಸರು ಸೇರಿಸಲು 4 ಬಾರಿ ಗುರುಕೀರತ್ ಸಿಂಗ್ ಅರ್ಜಿ ಸಲ್ಲಿಸಿದ್ದರು. 4 ಬಾರಿಯೂ ತಿರಸ್ಕಾರವಾಗಿತ್ತು. ಮತಪಟ್ಟಿ ಬಂದಾಗ ಬಳಿಕ 4 ಕಡೆ ಹೆಸರು ಕಾಣಿಸಿಕೊಂಡಿದೆ. ಬಳಿಕ 3 ಕಡೆ ಅವರು ಹೆಸರು ರದ್ದು ಕೋರಿದ್ದರು. ಆತ ಲಖನೌದಲ್ಲಿ ಹೆಸರು ಸೇರಿಸಿದ್ದರು. ಮುಂಬೈನಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲೂ ಮತದಾರರಾಗಿದ್ದರು. ಬೆಂಗಳೂರಿಗೆ ಬಂದ ಮೇಲೆ ಇಲ್ಲೂ ಮತದಾರರ ಪಟ್ಟಿಗೆ ಹೆಸರು ಸೇರಿಸಿದ್ದಾರೆ. ಬಳಿಕ ಬೆಂಗಳೂರಲ್ಲೇ ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಹೋಟೆಲ್ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಡಾರ್ಮೆಟ್ರಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಹಲವು ರೂಮ್ಗಳು ಇವೆ.
ಬೆಂಗಳೂರು ಸೆಂಟ್ರಲ್ನ 7 ಕ್ಷೇತ್ರಗಳಲ್ಲಿ 'ಕೈ' ಮುಂದಿತ್ತು. ಮಹದೇವಪುರದಲ್ಲಷ್ಟೇ ಬಿಜೆಪಿಗೆ ಲೀಡ್ ಸಿಕ್ಕಿತ್ತು ಎಂಬುದು ಸುಳ್ಳು. 4 ಕ್ಷೇತ್ರಗಳಲ್ಲಿ (ರಾಜಾಜಿನಗರ, ಗಾಂಧಿ ನಗರ, ಸಿ.ವಿ.ರಾಮನ್ನಗರ, ಮಹದೇವ ಪುರ)ಲ್ಲಿ ಬಿಜೆಪಿ ಅಭ್ಯರ್ಥಿಗೆ ಲೀಡ್ ಸಿಕ್ಕಿತ್ತು. ಮತ ಕಳವಾಗಿಲ್ಲ. ಇಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಮತದಾರರು ಹೆಚ್ಚಿದ್ದಾರೆ. 2016-17ರಲ್ಲಿ 1.48 ಲಕ್ಷ ಆಸ್ತಿಗಳಿದ್ದವು. ಇದರಿಂದ 361 ಕೋಟಿ ರು. ತೆರಿಗೆ ಬರುತ್ತಿತ್ತು. 2024-25 ರಲ್ಲಿ 3.59 ಲಕ್ಷ ಆಸ್ತಿಗಳಾಗಿವೆ. 885 ಕೋಟಿ ರು. ತೆರಿಗೆ ಬರುತ್ತಿದೆ.
ಸಿದ್ದರಾಮಯ್ಯ ಸ್ವಕ್ಷೇತ್ರ ವರುಣ, ಸಂಡೂರು, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲೂ ಇದೇ ಸಂಖ್ಯೆ ಇದೆ. ಚಾಮರಾಜಪೇಟೆಯಲ್ಲಿ ಆಯಿಷಾ ಬಾನು, ಶಿವಾಜಿನಗರದಲ್ಲಿ ರೆಹಮತುಲ್ಲಾ ಕೂಡ 2 ಕಡೆ ಮತದಾರರ ಚೀಟಿ ಹೊಂದಿದ್ದಾರೆ.
ನಿಮ್ಮ ಬಳಿಯಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿ. ವಿಪಕ್ಷ ನಾಯಕರಾಗಿ ಇದು ಶೋಭೆಯಲ್ಲ. ನಿಮ್ಮ ಸರ್ಕಾರದಲ್ಲಿ ನಿಮ್ಮ ಅಧಿಕಾರಿಗಳೇ ಕೆಲಸ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಏಕೆ ಹೋದರು? ಮಹದೇವಪುರ ಕ್ಷೇತ್ರದ ಮಾಹಿತಿಯನ್ನ ವರಿಷ್ಠರು ಕೇಳಿದ್ದಾರೆ. ಕೇಂದ್ರದ ನಮ್ಮ ನಾಯಕರು ಕ್ಷೇತ್ರದ ಮಾಹಿತಿ ಕೇಳಿದ್ದಾರೆ. ಮಾಹಿತಿಯನ್ನ ನಮ್ಮ ಹೈಕಮಾಂಡ್ ನಾಯಕರಿಗೆ ಕೊಡುತ್ತೇವೆ ಎಂದು ಹೇಳಿದರು.
ರಾಹುಲ್ ಗಾಂಧಿಯವರೇ ನಿಮ್ಮ ಪಕ್ಷದವರು ನಿದ್ದೆ ಮಾಡುತ್ತಿದ್ರಾ? 45 ದಿನಗಳಲ್ಲಿ ಹಾಕಬಹುದಾಗಿದ್ದ ಅರ್ಜಿಯನ್ನು ಇನ್ನೂ ಹಾಕಿಲ್ಲ. ಅವರು ನಿದ್ದೆ ಮಾಡುತ್ತಿದ್ದರೂ ಹೇಳುವಾಗ ಸತ್ಯ ಹೇಳಬೇಕಲ್ವಾ? ಯಾವುದೇ ದೂರು ಕೊಡದೇ ತಮ್ಮ ಆಡಳಿತ ಇರುವ ರಾಜ್ಯಜ್ಜೆ ಬಂದು ಅವಾಜ್ ಹಾಕುತ್ತಿರುವುದಕ್ಕೆ ನಾವು ಹೆದರಲ್ಲ. ಜಿ ಪರಮೇಶ್ವರ್ ಹೇಳಿದಂತೆ ನಾವು ಗುದ್ದುವವರಲ್ಲ. ನಿಮ್ಮ ಬಳಿ ಇರುವ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ಚುನಾವಣಾ ಆಯೋಗ ಕೇಳುತ್ತಿದೆ, ಕೊಡಿ. ವಿಪಕ್ಷ ನಾಯಕರಾಗಿ ಇದು ಶೋಭೆಯಲ್ಲ. ನಿಮ್ಮ ಸರ್ಕಾರದಲ್ಲಿ ನಿಮ್ಮ ಅಧಿಕಾರಿಗಳೇ ಕೆಲಸ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಏಕೆ ವಾಪಸ್ ಹೋದರು ಅಂತ ಅವರನ್ನೇ ಕೇಳಬೇಕು ಎಂದರು.
ಮಹದೇವಪುರ ಕ್ಷೇತ್ರದ ಮಾಹಿತಿಯನ್ನು ನಮ್ಮ ಕೇಂದ್ರದ ನಾಯಕರನ್ನು ಕೇಳಿದ್ದಾರೆ. ಅವರಿಗೆ ನಾವು ಮಾಹಿತಿ ಒದಗಿಸುತ್ತೇವೆ. ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.