ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೋಲಾರ ಜಿಲ್ಲೆ ನರಸಾಪುರ ಹೋಬಳಿಯ ಗರುಡನಪಾಳ್ಯ ಗ್ರಾಮದಲ್ಲಿ ಕೆರೆ ಮತ್ತು ಸ್ಮಶಾನ ಭೂಮಿಯ ದಾಖಲೆಗಳನ್ನು ತಿರುಚಿ 20 ಎಕರೆಗೂ ಹೆಚ್ಚು ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು, ಅಕ್ರಮ ಎಸಗಿದ್ದಾರೆಂದು ಬಿಜೆಪಿ ಆರೋಪಿಸಿದೆ.
ಅಕ್ರಮದ ವಿರುದ್ಧ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬ್ಯಾಟರಾಯನಪುರ ವೃತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಪೋಲಿಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಕಾರರನ್ನು ಬಂಧಿಸಿ ಸಂಪಿಗೆಹಳ್ಳಿ ಸಹಾಯಕ ಪೊಲೀಸ್ ಠಾಣೆಯ ಮೈದಾನಕ್ಕೆ ಕರೆದೊಯ್ದು, ನಂತರ ಬಿಡುಗಡೆ ಮಾಡಲಾಯಿತು.
ಕಾಂಗ್ರೆಸ್ನಿಂದ ತಮ್ಮನ್ನು ತಾವು ಶುದ್ಧ ಮತ್ತು ಭ್ರಷ್ಟರಲ್ಲದ ರಾಜಕಾರಣಿ ಎಂದು ಕೃಷ್ಣ ಬೈರೇಗೌಡ ಅವರು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ಭೂಕಬಳಿಕೆ ಅಕ್ರಮ ಮುಡಾ ಹಗರಣಕ್ಕಿಂತ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಏತನ್ಮಧ್ಯೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ,ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ನರಸಾಪುರ ಹೋಬಳಿ ಗರುಡನಪಾಳ್ಯ ಗ್ರಾಮದ 20 ಎಕರೆ 16 ಗುಂಟೆ (ಸರ್ವೇ ಸಂಖ್ಯೆ 46) ಜಮೀನು ಮೂಲ ದಾಖಲೆಯಲ್ಲಿ ಕೆರೆ ಎಂದು ನಮೂದಾಗಿದೆ. ಅದೇ ರೀತಿ ಸರ್ವೇ ಸಂಖ್ಯೆ 47 ರಲ್ಲಿ ಒಂದು ಎಕರೆ ಜಮೀನು ಮೂಲ ದಾಖಲೆಯ ಪ್ರಕಾರ ಸ್ಮಶಾನ ಎಂದು ನಮೂದಾಗಿದೆ.
ಆದರೆ, ಕೆರೆ ಮತ್ತು ಸ್ಮಶಾನಕ್ಕೆ ಸೇರಿದ ಒಟ್ಟು 21ಎಕರೆ 16 ಗುಂಟೆ ಜಮೀನಿನ ದಾಖಲೆಗಳನ್ನು ತಿದ್ದಿ, ಖರಾಬು ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. 2001–02ರಲ್ಲಿ ಈ ಕೃತ್ಯ ನಡೆದಿದೆ. ಕೃಷ್ಣಬೈರೇಗೌಡ ಮತ್ತು ಅವರ ಕುಟುಂಬದ ಹೆಸರಿಗೆ ಬರೆಸಲಾಗಿದೆ. ಈಗಲೂ ಕೃಷ್ಣಬೈರೇಗೌಡ ಅವರ ಕುಟುಂಬದ ಹೆಸರಿನಲ್ಲಿಯೇ ಇದೆ. ಕಂದಾಯ ಕಾನೂನಿನ ಪ್ರಕಾರ, ಸರ್ಕಾರಿ ಜಮೀನು ಅದರಲ್ಲೂ ಕರೆ, ಸ್ಮಶಾನದ ಜಮೀನುಗಳನ್ನು ಯಾವುದೇ ವ್ಯಕ್ತಿಯ ಹೆಸರಿಗೆ ದಾಖಲೆ ಮಾಡಲು ಸಾಧ್ಯವಿಲ್ಲ. ಈ ಜಮೀನಿನ ಮಾರುಕಟ್ಟೆ ಮೌಲ್ಯ ರೂ.100 ಕೋಟಿ ಮೀರುತ್ತದೆ. 1978ರ ಮೂಲ ದಾಖಲೆಗಳಲ್ಲಿ ಕೆರೆ, ಸ್ಮಶಾನ ಎಂದೇ ಇದೆ. ಕೆರೆ ಮತ್ತು ಸ್ಮಶಾನ ಜಮೀನು ದಾಖಲೆಗಳನ್ನು ಬದಲಾವಣೆ ಮಾಡಲು ಯಾವ ಅಧಿಕಾರಿಗೂ ಅಧಿಕಾರವಿಲ್ಲ. ಸಚಿವರು ಅಧಿಕಾರ ದುರ್ಬಳಕೆ ಮಾಡುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮಾತನಾಡಿ, ‘ತಾವು ಪ್ರಾಮಾಣಿಕರು, ಶುದ್ಧಹಸ್ತರೆಂದು ಕೃಷ್ಣಬೈರೇಗೌಡ ಬಿಂಬಿಸಿಕೊಳ್ಳುತ್ತಾರೆ. ದಾಖಲೆಗಳನ್ನು ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ಇದು ‘ಬೇಲಿಯೇ ಎದ್ದು ಹೊಲ ಮೇಯ್ದ’ ಪ್ರಕರಣ. ಮುಖ್ಯಮಂತ್ರಿ ಈ ಭೂಹಗರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಒಂದು ವೇಳೆ ಸರ್ಕಾರ ಈ ಕುರಿತು ಮೃದು ಧೋರಣೆ ತಾಳಿದರೆ ಕಾನೂನು ಹೋರಾಟದ ಜತೆಗೆ ಪ್ರಜಾಸತ್ತಾತ್ಮಕ ಹೋರಾಟ ನಡೆಸುತ್ತೇವೆಂದು ಎಚ್ಚರಿಸಿದರು.
‘ಈ ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಲ್ಲಿ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪತ್ನಿ 14 ನಿವೇಶನಗಳನ್ನು ವಾಪಸ್ ಮಾಡಿದ್ದರು. ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ 5 ಎಕರೆ ಜಮೀನನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಕುಟುಂಬದ ಒಡೆತನದ ಟ್ರಸ್ಟ್ಗೆ ಮಂಜೂರು ಮಾಡಿಸಿಕೊಂಡಿದ್ದರು. ಬಳಿಕ ಅದನ್ನು ಹಿಂತಿರುಗಿಸಿದರು. ಇದೀಗ ಮತ್ತೊಂದು ಹಗರಣ ಬಯಲಿದೆ ಬಂದಿದೆ ಎಂದು ಹೇಳಿದರು.