ಪರಮೇಶ್ವರ್, ಸತೀಶ್ ಮತ್ತು ರಾಜಣ್ಣ 
ರಾಜಕೀಯ

KPCC ಅಧ್ಯಕ್ಷರ ಬದಲಾವಣೆಗೆ ಸಿದ್ದರಾಮಯ್ಯ ಸಂಪುಟ ಸದಸ್ಯರ ಪಟ್ಟು: ಉತ್ಸಾಹ ತೋರದ ಹೈಕಮಾಂಡ್; ಖಾತೆ ಬದಲಾವಣೆಗೆ ಪರಂ ಬೇಡಿಕೆ!

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಜಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಮಾವೇಶದ ವಿಚಾರವನ್ನು ಪ್ರಸ್ತಾಪಿಸಿದ್ದಲ್ಲದೆ, ತಮ್ಮ ‘ನಿಷ್ಠಾವಂತ ಬೆಂಬಲಿಗ’ ಹಾಗೂ ಮಾಜಿ ಎಂಎಲ್‌ಸಿ ಎಂಸಿ ವೇಣುಗೋಪಾಲ್‌ಗೆ ಮತ್ತೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಲಾಬಿ ನಡೆಸಿದರು.

ಬೆಂಗಳೂರು: ಕೆ‍ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ. ಶಿವಕುಮಾರ್‌ ಅವರನ್ನು ಇಳಿಸಲೇಬೇಕು ಎಂಬ ಪಣ ತೊಟ್ಟಿರುವ ದಲಿತ ಸಚಿವರು ತಮ್ಮ ಯತ್ನ ಮುಂದುವರಿಸಿದ್ದಾರೆ. ಕೆಪಿಸಿಸಿಗೆ ಶೀಘ್ರವೇ ನೂತನ ಅಧ್ಯಕ್ಷರ ಆಯ್ಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಉತ್ಸಾಹ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಶೋಷಿತರ ಸಮಾವೇಶ ನಡೆಸಲು ಸಚಿವರು ಯೋಜನೆ ರೂಪಿಸಿದ್ದು, ಅದಕ್ಕಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದ ಹಲವು ಸಚಿವರು ನಿರಂತರವಾಗಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುತ್ತಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆಎನ್ ರಾಜಣ್ಣ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ದೆಹಲಿಗೆ ತೆರಳಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಜಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಮಾವೇಶದ ವಿಚಾರವನ್ನು ಪ್ರಸ್ತಾಪಿಸಿದ್ದಲ್ಲದೆ, ತಮ್ಮ ‘ನಿಷ್ಠಾವಂತ ಬೆಂಬಲಿಗ’ ಹಾಗೂ ಮಾಜಿ ಎಂಎಲ್‌ಸಿ ಎಂಸಿ ವೇಣುಗೋಪಾಲ್‌ಗೆ ಮತ್ತೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಲಾಬಿ ನಡೆಸಿದರು. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರೊಂದಿಗೂ ಮಾತುಕತೆ ನಡೆಸಿದರು.

ಎಂಸಿ ವೇಣುಗೋಪಾಲ್ ಹಿಂದುಳಿದ ವರ್ಗದ ಸಮುದಾಯದಿಂದ ಬಂದವರಾಗಿದ್ದಾರೆ, ವೇಣುಗೋಪಾಲ್ ಗೆ ಎಂಎಲ್ ಸಿ ಸ್ಥಾನ ನೀಡಲು ಪರಮೇಶ್ವರ್ ಸಿಎಂ ಸಿದ್ದರಾಮಯ್ಯ ಅವರಿಂದ ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಆದರೆ ಹೈಕಮಾಂಡ್ ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲವೊಂದು TNIE ಗೆ ತಿಳಿಸಿದೆ.

ಬಜೆಟ್ ಅಧಿವೇಶನದ ನಂತರ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಪರಮೇಶ್ವರ ಅವರು ಖಾತೆ ಬದಲಾವಣೆಗೆ ತಮ್ಮ ಬೇಡಿಕೆಯನ್ನು ಮುಂದಿಟ್ಟರು ಎಂದು ಮೂಲವೊಂದು ತಿಳಿಸಿದೆ. ಅವರು ಕಂದಾಯ ಅಥವಾ ಕೈಗಾರಿಕೆಗಳ ಖಾತೆ ನಿರೀಕ್ಷಿಸುತ್ತಿದ್ದಾರೆಂದು ವರದಿಯಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಇತ್ತೀಚೆಗೆ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಸ್ಥಳೀಯ ಸಂಸ್ಥೆಗಳಿಗೆ ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಹೈಕಮಾಂಡ್‌ಗೆ ಉತ್ಸಾಹವಿಲ್ಲದ ಕಾರಣ ಸ್ವಲ್ಪ ಸಮಯ ಕಾಯುವಂತೆ ಸುರ್ಜೇವಾಲಾ ಸತೀಶ್‌ ಜಾರಕಿಹೊಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಹಕಾರ ಸಚಿವ ಕೆಎನ್ ರಾಜಣ್ಣ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿ ಎಂದು ಹೇಳಿದ್ದಾರೆ. ಆದರೆ ಅವರ ವಿವಾದಾತ್ಮಕ ಹೇಳಿಕೆಗಳನ್ನು ಗಮನಿಸಿದರೆ ಹೈಕಮಾಂಡ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯಿಲ್ಲ.ಮಾಧ್ಯಮಗಳಲ್ಲಿ ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಿದ್ದರು. ಆದರೆ ಇದು ಹೈಕಮಾಂಡ್ ಮಟ್ಟದಲ್ಲಿ ಕೆಲಸ ಮಾಡುವುದಿಲ್ಲ" ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಎಂಸಿ ವೇಣುಗೋಪಾಲ್ ಜೊತೆಗೆ ಹಿರಿಯ ನಾಯಕ ಬಿಎಲ್ ಶಂಕರ್, ಯುವ ಮುಖಂಡ ವಿನಯ್ ಕಾರ್ತಿಕ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ಯು.ಬಿ.ವೆಂಕಟೇಶ್, ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರ ಹೆಸರುಗಳು ಖಾಲಿ ಇರುವ ನಾಲ್ಕು ಎಂಎಲ್‌ಸಿ ಸ್ಥಾನಗಳಿಗೆ ಸದ್ದು ಮಾಡುತ್ತಿವೆ. ಮೂಲಗಳ ಪ್ರಕಾರ ಹೈಕಮಾಂಡ್ ಶೀಘ್ರದಲ್ಲೇ ತನ್ನ ಆಯ್ಕೆಯನ್ನು ಸ್ಪಷ್ಟಪಡಿಸುವ ಸಾಧ್ಯತೆಯಿರುವುದರಿಂದ ಲಾಬಿ ತೀವ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇದು ನನ್ನ ಮನದ ಆಸೆ': ಸಿಎಂ ಹುದ್ದೆ ತೊರೆದು ರಾಜ್ಯಸಭೆ ಪ್ರವೇಶ ಖಚಿತಪಡಿಸಿದ Nitish Kumar

'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ'.. 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಾರೆ': ನಟಿ ಆಕ್ರೋಶ! VIDEO

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ, ಕನ್ನಡಿಗ Vaishak Vijayakumar, ಹುಡುಗಿ ಯಾರು ಗೊತ್ತಾ? Video

ರಾಜ್ಯಸಭೆ ಚುನಾವಣೆಗೆ ಇಂದು ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ?: NDAಯಲ್ಲಿ ಮಹತ್ವದ ಬೆಳವಣಿಗೆ

T20 World Cup 2026: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ಇಂಗ್ಲೆಂಡ್; ಕೋಚ್ ಗೌತಮ್ ಗಂಭೀರ್‌ಗೆ ಕಠಿಣ ಸವಾಲು

SCROLL FOR NEXT