ಚಿಕ್ಕಬಳ್ಳಾಪುರ: ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆಗಾಗ ಮುನ್ನಲೆಗೆ ಬರುವುದುಂಟು. ಇತ್ತೀಚೆಗೆ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದೆ. ಇತ್ತ ರಾಮನಗರ ಶಾಸಕ ಸಿಎಂ ಬದಲಾವಣೆ ಅಗತ್ಯವಿದೆ ಎಂದು ಹೇಳಿದ್ದರು.
ಸಿದ್ದರಾಮಯ್ಯ ಲಕ್ಕಿ, ಲಾಟರಿ ಹೊಡೆದುಬಿಟ್ಟ, ಅವನ ಗ್ರಹಚಾರ ಚೆನ್ನಾಗಿತ್ತು, ಅದಕ್ಕೆ ಸಿಎಂ ಆಗಿ ಬಿಟ್ಟ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್ ಪಾಟೀಲ್ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಇಂದು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 5 ವರ್ಷ ನಾನೇ ಸಿಎಂ ಆಗಿರ್ತೀನಿ. ನಿಮಗೇಕೆ ಅನುಮಾನ ಎಂದು ಪುನರುಚ್ಛರಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳು ಅವರ ಬಳಿ ನೀವು 5 ವರ್ಷ ಸಿಎಂ ಆಗಿರ್ತೀರಾ? ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಹೌದು, ನಿಮಗೇಕೆ ಆ ಅನುಮಾನ? ಎಂದು ಕೇಳಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸತ್ಯ ಹೇಳುವುದು ಗೊತ್ತೇ ಇಲ್ಲ ಅವರಿಗೆ. ಅವರು ನಂಬುತ್ತಾರಾ ಬಿಡುತ್ತಾರಾ ಗೊತ್ತಿಲ್ಲ. ನಾವು ಎಲ್ಲ ಒಟ್ಟಾಗಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಈಗಾಗಲೇ ಮೈಸೂರಲ್ಲಿ ಹೇಳಿದ್ದೀನಿ. 5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಕಲ್ಲುಬಂಡೆ ತರಹ ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ. ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ. ಯಾವುದಾದರೂ ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ಕೇಳಿದರು.
ಪಕ್ಷಕ್ಕಾಗಿ ಡಿ ಕೆ ಶಿವಕುಮಾರ್ ಅವರ ಶ್ರಮವನ್ನು ಉಲ್ಲೇಖಿಸಿ, ಅವರನ್ನು ಬೆಂಬಲಿಸುವ ಶಾಸಕರು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನನ್ನಂತೆಯೇ ನೂರಾರು ಜನರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಾನು ಒಬ್ಬಂಟಿಯಲ್ಲ, ಪಕ್ಷದ ಲಕ್ಷಾಂತರ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಾವು ಮೊದಲು ಅವರ ಬಗ್ಗೆ ಯೋಚಿಸಬೇಕು ಎಂದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ಬೇಟಿಯಾಗಿ ಬಂದಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದಲ್ಲಿ ಸೆಪ್ಟಂಬರ್ ನಂತರ ಕ್ರಾಂತಿ ನಡೆಯಲಿದೆ. ಸಿಎಂ ಬದಲಾವಣೆ ಅಥವಾ ಸಚಿವರ ಬದಲಾವಣೆ ಆಗಲಿದೆ ಎಂಬ ಚರ್ಚೆ ಸಾಕಷ್ಟು ನಡೆಯುತ್ತಿದೆ.
ಈ ವರ್ಷದ ಕೊನೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ರಾಜಕೀಯ ವಲಯಗಳಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್ನಲ್ಲಿ, ಕೆಲವು ಸಮಯದಿಂದ ಊಹಾಪೋಹಗಳು ನಡೆಯುತ್ತಿವೆ, ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದವನ್ನು ಉಲ್ಲೇಖಿಸಿ.
ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್, ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ಇಲ್ಲ, ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಕೈ ಬಲಪಡಿಸುವ ಬಗ್ಗೆ ಒತ್ತಿ ಹೇಳಿದ್ದರು.
ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳುತ್ತಾರಲ್ಲಾ ಎಂದಾಗ ಡಿ ಕೆ ಶಿವಕುಮಾರ್, ಅವರು ನಮ್ಮ ಹೈಕಮಾಂಡಾ, ಆರ್ ಅಶೋಕ್, ಬಿ.ವೈ. ವಿಜಯೇಂದ್ರ, ಚಲವಾದಿ ನಾರಾಯಣಸ್ವಾಮಿ ಆ ರೀತಿ ಹೇಳಿದರೆ ನೀವು ಬರೆದುಬಿಡುವುದೇ, ನೀವು ಪರಿಶೀಲಿಸಬೇಕಲ್ಲವೇ ಎಂದು ಕೇಳಿದರು.
ಆಡಳಿತಾರೂಢ ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನವಿಲ್ಲ, ಸಿದ್ದರಾಮಯ್ಯ ನಾಯಕತ್ವದ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯದ ಅಗತ್ಯವಿಲ್ಲ ಎಂದು ಹೇಳಿದ್ದರು.
ನೊಟೀಸ್ ಎಚ್ಚರಿಕೆ
ಇಂದು ಮತ್ತೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್, ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ಇಲ್ಲ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಸರ್ಕಾರದ ಕೈಗಳನ್ನು ಬಲಪಡಿಸುವ ಬಗ್ಗೆ ಒತ್ತಿ ಹೇಳಿದರು.
ಪಕ್ಷದ ಶಿಸ್ತು ಮುಖ್ಯ, ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಯಾರನ್ನೂ ಕೇಳಿಲ್ಲ ನಾಯಕತ್ವ ಬದಲಾವಣೆಯ ವಿಷಯದ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವ ನಾಯಕರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಈ ಮಧ್ಯೆ, ಕರ್ನಾಟಕದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸತತ ಮೂರನೇ ದಿನವೂ ಪಕ್ಷದ ಶಾಸಕರೊಂದಿಗೆ ತಮ್ಮ ಏಕದಿನ ಸಭೆಗಳನ್ನು ಮುಂದುವರೆಸಿದ್ದಾರೆ.
ಸುರ್ಜೆವಾಲಾ ಅವರ ಸಭೆಗಳು ಪಕ್ಷದಲ್ಲಿನ ಅಸಮಾಧಾನವನ್ನು ಶಮನಗೊಳಿಸುತ್ತವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಪಕ್ಷ ಮತ್ತು ಸಂಘಟನೆಗೆ ಸಂಬಂಧಿಸಿದ ವಿಷಯಗಳು ಮತ್ತು ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಸುರ್ಜೆವಾಲಾ ಈಗಿನಿಂದಲೇ ಹೊಣೆಗಾರಿಕೆಯನ್ನು ನಿಗದಿಪಡಿಸುತ್ತಿದ್ದಾರೆ ಎಂದು ಹೇಳಿದರು.
ಮೇ 2023 ರಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಇತ್ತು, ಆಗ "ಪರ್ಯಾಯ ಮುಖ್ಯಮಂತ್ರಿ ಸೂತ್ರ"ದ ಆಧಾರದ ಮೇಲೆ ಇಬ್ಬರ ನಡುವೆ ರಾಜಿ ಸಂಧಾನವಾಗಿತ್ತು, ಅದರ ಪ್ರಕಾರ ಎರಡೂವರೆ ವರ್ಷಗಳ ಬಳಿಕ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ ಪಕ್ಷದಿಂದ ಅಧಿಕೃತವಾದ ಮಾಹಿತಿ ಬಂದಿಲ್ಲ.