ಸಿದ್ದರಾಮಯ್ಯ ಹಾಗೂ ವಿಜಯೇಂದ್ರ 
ರಾಜಕೀಯ

ಸಿಎಂ ಕುರ್ಚಿ ಅಲುಗಾಡಿದಾಗಲೆಲ್ಲಾ ಸಿದ್ದರಾಮಯ್ಯ ಸಮಾವೇಶ ಅಸ್ತ್ರ ಬಳಕೆ: BY ವಿಜಯೇಂದ್ರ

ಕಳೆದ ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ಶೂನ್ಯವಾಗಿವೆ. ಅವರ ಸಾಧನೆಗಳು ನಿಜವಾಗಿದ್ದರೆ, ಶಾಸಕರ ಅಸಮಾಧಾನವನ್ನು ಹೋಗಲಾಡಿಸಲು ಸುರ್ಜೆವಾಲಾ ಪದೇ ಪದೇ ರಾಜ್ಯಕ್ಕೆ ಬರುತ್ತಿರಲಿಲ್ಲ.

ಬೆಂಗಳೂರು: ಸಿದ್ದರಾಮಯ್ಯ ಎಂದರೆ ಸಮಾವೇಶ, ಸಮಾವೇಶ ಎಂದರೆ ಸಿದ್ದರಾಮಯ್ಯ. ಮುಖ್ಯಮಂತ್ರಿ ಕುರ್ಚಿ ಅಲುಗಾಡಿದಾಗಲೆಲ್ಲಾ ಸಿದ್ದರಾಮಯ್ಯ ಅವರು ಸಮಾವೇಶದ ಅಸ್ತ್ರ ಬಳಕೆ ಮಾಡುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಮಾವೇಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಅವರ ಪಾಳಯ ತಮ್ಮ ರಾಜಕೀಯ ಉಳಿವಿಗಾಗಿ ಹಿಂದಿಯೇತರ ಸಮುದಾಯವನ್ನು ಮುಂದಿಟ್ಟುಕೊಂಡು ಹೈಕಮಾಂಡ್ ಅನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ಶೂನ್ಯವಾಗಿವೆ. ಅವರ ಸಾಧನೆಗಳು ನಿಜವಾಗಿದ್ದರೆ, ಶಾಸಕರ ಅಸಮಾಧಾನವನ್ನು ಹೋಗಲಾಡಿಸಲು ಸುರ್ಜೆವಾಲಾ ಪದೇ ಪದೇ ರಾಜ್ಯಕ್ಕೆ ಬರುತ್ತಿರಲಿಲ್ಲ. ಶಾಸಕರ ಅಸಮಾಧಾನದ ವ್ಯಾಪ್ತಿಯನ್ನು ಸುರ್ಜೆವಾಲಾ ಅರ್ಥಮಾಡಿಕೊಳ್ಳುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಶಾಸಕರ ಮನಸ್ಥಿತಿ ಅರಿಯಲು ಸುರ್ಜೇವಾಲಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಹೀಗಾಗಿ ತಮ್ಮ ಕುರ್ಚಿಯ ಬಗ್ಗೆ ಚಿಂತಿತರಾಗಿರುವ ಸಿದ್ದರಾಮಯ್ಯ ಮೈಸೂರಿನಲ್ಲಿ ಸಮಾವೇಶ ನಡೆಸುವ ಮೂಲಕ ಹೈಕಮಾಂಡ್ ಅನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.

ನಾನು ಸಿಎಂ ಆಗಬೇಕು, ನಾನು ಸಿಎಂ ಆಗಬೇಕು...-" ಎಂಬ ಸ್ಪರ್ಧೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಸಿಎಂ ಹುದ್ದೆಗೆ ಕುದುರೆ ವ್ಯಾಪಾರ ನಡೆಯುತ್ತಿದೆ. ಇದಕ್ಕಾಗಿ ದರ ನಿಗದಿ ಮಾಡಲಾಗುತ್ತಿದೆ, ಸಿದ್ದರಾಮಯ್ಯ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮೂಲಕ ಹೈಕಮಾಂಡ್‌ಗೆ ನೇರವಾಗಿ ಸವಾಲು ಹಾಕಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿ ಯಾವಾಗಲೂ ಸಿದ್ದರಾಮಯ್ಯಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೆ ಈಗ ದೆಹಲಿಯಲ್ಲಿದ್ದರೂ ಸಿದ್ದರಾಮಯ್ಯಗೆ ಅಪಾಯಿಂಟ್‌ಮೆಂಟ್ ಕೂಡ ನೀಡಿಲ್ಲ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದು ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಕೆಲವು ಶಾಸಕರು ಡಿಕೆ ಶಿವಕುಮಾರ್ ಪರ ಮತ್ತು ಇನ್ನು ಕೆಲವರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಒಟ್ಟಾರೆಯಾಗಿ, ಕಾಂಗ್ರೆಸ್‌ನಲ್ಲಿ ಒಳಜಗಳ ಮತ್ತು ಸಿಎಂ ಹುದ್ದೆಗೆ ಪೈಪೋಟಿ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಹೆಸರೆತ್ತಿದರೆ ಸಿದ್ದರಾಮಯ್ಯ ಕೋಪಗೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಘೋಷಿಸುವಂತೆ ಸಲಹೆ ನೀಡಿದ್ದೇನೆ. ಇಷ್ಟಕ್ಕೇ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ. ಇದರಲ್ಲಿ ಕೋಪ ಮಾಡಿಕೊಳ್ಳಲು ಕಾರಣವೇನಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಬಿಜೆಪಿ ಶಾಸಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ, ಅದು ಕೆಲಸ ಮಾಡಲಿಲ್ಲ. ನಂತರ ಭರತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಿಸಿದರು. ವಿವಿಧ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಅವರನ್ನು ಬೆದರಿಸುವ ಮೂಲಕ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಹಿಂದುಳಿದ ನಾಯಕ ಬೈರತಿ ಬಸವರಾಜ್ ಅವರನ್ನು ನಿರ್ಮೂಲನೆ ಮಾಡಲು ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.

ಶಾಸಕರಿಗೆ ಅನುದಾನದಲ್ಲಿ ತಾರತಮ್ಯ ಕುರಿತ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿಗಳು ಕೃಪೆ ತೋರಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.

ಎರಡು ವರ್ಷ ಆಡಳಿತಾವಧಿ ಮುಗಿದರೂ ಅನುದಾನ ಸಿಗದ ಕುರಿತು ಅವರ ಪಕ್ಷದ ಶಾಸಕರೇ ಅಸಮಾಧಾನ ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಅನುದಾನದ ಕಪಟ ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದರು.

50 ಕೋಟಿ ಬಿಡುಗಡೆಗೆ ಸಿಎಂ ಪತ್ರ ಬರೆದಿದ್ದಾರೆ. ಅಷ್ಟೇ ಬಿಡುಗಡೆ ಆಗಲಿದೆಯೇ? ಯಾವಾಗ ಬಿಡುಗಡೆ ಆಗಲಿದೆ? ಯಾವಾಗ ಶಾಸಕರ ಕೈ ಸೇರಲಿದೆ? ಅಭಿವೃದ್ಧಿ ಕೆಲಸ ಆಗುವುದು ಯಾವಾಗ- ಇವೆಲ್ಲವೂ ಯಕ್ಷಪ್ರಶ್ನೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಆಡಳಿತ ಪಕ್ಷದವರ ಕಣ್ಣಿಗೆ ಬೆಣ್ಣೆ, ವಿಪಕ್ಷದವರ ಕಣ್ಣಿಗೆ ಸುಣ್ಣ ಎಂಬುದು ನಿರಂತರವಾಗಿ ನಡೆಯುತ್ತ ಬಂದಿದೆ. ಈಗಲೂ ಅದನ್ನೇ ಮುಂದುವರೆಸಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dasara Holidays extended: ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆ; ಜಾತಿ ಗಣತಿ ಅವಧಿ ವಿಸ್ತರಣೆ!

Mark ಚಿತ್ರದ 'ಸೈಕೋ ಸೈತಾನ್' ಚಿತ್ರದ ಹಾಡು ಸಖತ್ ಟ್ರೋಲ್; Darshan ಫ್ಯಾನ್ಸ್ ಟಾಂಗ್, Youtube ವಿಡಿಯೋ ಡಿಲೀಟ್!

ಇದು 'ಮೋದಾನಿ-ನಿರ್ಭರ್ ಭಾರತ': ಸರ್ಕಾರದ ಹಳದಿ ಬಟಾಣಿ ಆಮದು ನೀತಿ ಟೀಕಿಸಿದ ಕಾಂಗ್ರೆಸ್

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

ಡಿಕೆಶಿಯ 'ಸುರಂಗದ ಹುಚ್ಚಿ'ನಿಂದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅಪಾಯ- ಆರ್. ಅಶೋಕ್

SCROLL FOR NEXT