ಸಿಎಂ ಸಿದ್ದರಾಮಯ್ಯ 
ರಾಜಕೀಯ

CM ಸಿದ್ದರಾಮಯ್ಯ ದೆಹಲಿ ಪ್ರಯಾಣ: ಕೇಂದ್ರ-ರಾಜ್ಯದ ನಡುವೆ ಕುದಿಯುತ್ತಿರುವ ಅಸಮಾಧಾನ; ರಾಜ್ಯಪಾಲ ಗೆಹ್ಲೋಟ್ ವಿರುದ್ಧ ದೂರು ಸಾಧ್ಯತೆ?

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರೊಂದಿಗಿನ ಸಂಘರ್ಷದಿಂದಾಗಿ ತಡೆಹಿಡಿಯಲಾದ ನಿರ್ಣಾಯಕ ರಾಜ್ಯ ಮಸೂದೆಗಳ ವಿಷಯವನ್ನು ರಾಷ್ಟ್ರಪತಿ ಭವನದಲ್ಲಿ ಚರ್ಚಿಸುವ ನಿರೀಕ್ಷೆಯಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗುವ ಉದ್ದೇಶ ಹೊಂದಿದ್ದಾರೆ. ಇದೇ ವೇಳೆ ಹೈಕಮಾಂಡ್​ಗೂ ಭೇಟಿ ಆಗಲಿರುವ ಸಿಎಂ, ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿಯಿಂದಾಗಿ ರಾಜ್ಯ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವಿನ ಕುದಿಯುತ್ತಿರುವ ಅಸಮಾಧಾನದಿಂದ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರೊಂದಿಗಿನ ಸಂಘರ್ಷದಿಂದಾಗಿ ರಾಷ್ಟ್ರಪತಿ ಭವನದಲ್ಲಿ ತಡೆಹಿಡಿಯಲಾದ ನಿರ್ಣಾಯಕ ರಾಜ್ಯ ಮಸೂದೆಗಳ ವಿಷಯವನ್ನು ಚರ್ಚಿಸುವ ನಿರೀಕ್ಷೆಯಿದೆ. ಸರ್ಕಾರ ಕಳುಹಿಸಿದ ಹಲವು ಮಸೂದೆಗಳನ್ನು ವಿವರಣೆ ಕೇಳಿ ರಾಜ್ಯಪಾಲರು ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ವಿಷಯಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಆಡಳಿತ ಯಂತ್ರದಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಈ ಸಂಬಂಧ ಕೇಂದ್ರದ ಜೊತೆ ಉನ್ನತ ಮಟ್ಟದ ಚರ್ಚೆ ನಡೆಸುವ ಸಾಧ್ಯತೆಯಿದೆ.

"ಹಣಕಾಸಿನ ತಾರತಮ್ಯ"ದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲಿದ್ದಾರೆ. ಹೆಸರಿಗೆ ಮಾತ್ರ ಇರುವ ರಾಷ್ಟ್ರೀಯ ಯೋಜನೆ, ಆದರೆ ವರ್ಷಗಳ ಕಾಲ ನಿಧಿಯ ಕೊರತೆಯಿಂದ ಬಳಲುತ್ತಿದೆ. ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,000 ಕೋಟಿ ರೂ.ಗಳ ಹಣ ಬಿಡುಗಡೆ ಮಾಡಬೇಕಾಗಿದೆ. ಈ ಸಂಬಂಧ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಮತ್ತೊಂದು ಆದ್ಯತೆಯೆಂದರೆ ದೀರ್ಘಕಾಲದಿಂದ ವಿಳಂಬವಾಗಿದ್ದ ನಾಲ್ವರು ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನ. ರಮೇಶ್ ಬಾಬು, ದಿನೇಶ್ ಅಮೀನ್ ಮಟ್ಟು, ಆರತಿ ಕೃಷ್ಣ ಮತ್ತು ಡಿಜಿ ಸಾಗರ್ ಅವರ ನಾಮನಿರ್ದೇಶನಕ್ಕೆ ಪಕ್ಷದೊಳಗಿನಿಂದ ಟೀಕೆ ಮತ್ತು ವಿರೋಧ ವ್ಯಕ್ತವಾಗಿದ್ದರೂ, ಅವರು ಈ ಹೆಸರುಗಳೊಂದಿಗೆ ಮುಂದುವರಿಯುತ್ತಿದ್ದಾರೆ.

ಇನ್ನೂ ಕಾಂಗ್ರೆಸ್​ನ ಹೈಕಮಾಂಡ್ ಭೇಟಿ ಮಾಡಲಿರೋ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದಾರೆ.

ವಿಧಾನ ಪರಿಷತ್‌ಗೆ ನಾಲ್ವರನ್ನು ನಾಮನಿರ್ದೇಶನ ಮಾಡುವ ಪಟ್ಟಿಗೆ ಹೈಕಮಾಂಡ್‌ ತಡೆ ನೀಡಿದೆ. ತಡೆಹಿಡಿಯಲಾದ ಪಟ್ಟಿಯಲ್ಲಿ ರಮೇಶ್‌ ಬಾಬು, ಆರತಿ ಕೃಷ್ಣ, ಡಿ.ಎಸ್‌.ಸಾಗರ್‌, ದಿನೇಶ್‌ ಅಮೀನ್‌ ಮಟ್ಟು ಹೆಸರುಗಳಿವೆ. ಇದೇ ಪಟ್ಟಿಗೆ ಅನುಮತಿ ನೀಡುವಂತೆ ಹೈಕಮಾಂಡ್‌ಗೆ ಮನವರಿಕೆ ಮಾಡಲು ಕೊಡಲು ಸಿಎಂ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ರಾಷ್ಟ್ರಪತಿ ಮತ್ತು ನ್ಯಾಯಾಂಗದ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಲು ಒತ್ತಾಯಿಸಿದ್ದಾರೆ, ಹೀಗಾಗಿ ಸಿಎಂ ಸಿದ್ದರಾಮಯ್ಯ ಕೂಡ ಅದೇ ರೀತಿಯ ಸಂಘಟಿತ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಇದು ದೃಢವಾದ ಒಕ್ಕೂಟದ ಬೆಳೆಯುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ತೆರಿಗೆಗಳಲ್ಲಿ ತಮ್ಮ ನ್ಯಾಯಯುತ ಪಾಲು ಮತ್ತು ಸ್ಥಗಿತಗೊಂಡ ಯೋಜನಾ ನಿಧಿಗಾಗಿ ಒಟ್ಟುಗೂಡುತ್ತಿವೆ. ಈ ಭೇಟಿಯು ಕೇಂದ್ರದ ಮೇಲೆ ಒತ್ತಡವನ್ನು ಹೇರುತ್ತದೆ. ಇದು ಇತರ ಬಿಜೆಪಿಯೇತರ ರಾಜ್ಯಗಳು ಸಹ ಈ ಮಾರ್ಗವನ್ನು ಆರಿಸಿಕೊಳ್ಳಲು ಪ್ರಚೋದಿಸಬಹುದು ಎಂದು ಅವರು ಹೇಳಿದರು.

ಈ ಸಲದ ದೆಹಲಿ ಪ್ರವಾಸದಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯಿಲ್ಲ. ಅಷ್ಟಕ್ಕೂ ಸಂಪುಟ ಸರ್ಜರಿ ಸದ್ಯಕ್ಕೆ ಅಗತ್ಯವಿಲ್ಲ ಎಂಬ ನಿಲುವನ್ನು ಈಗಾಗಲೇ ತೆಗೆದುಕೊಂಡಾಗಿದೆ. ಅಲ್ಲಿಗೆ ಮಂತ್ರಿಮಂಡಲ ವಿಸ್ತರಣೆ -ಪುನಾರಚನೆ ಕುರಿತ ಮಾತುಕತೆಯಿಲ್ಲ ಎಂದು ಮೂಲಗಳು ತಿಳಿಸಿವೆ,

ರಾಜಕೀಯ ಚಂಚಲತೆ ಹೆಚ್ಚಾಗುತ್ತಿದ್ದಂತೆ, ಎಲ್ಲರ ಕಣ್ಣುಗಳು ದೆಹಲಿಯ ಮೇಲೆ ನೆಟ್ಟಿವೆ, ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಬಿಜೆಪಿ ನಾಯಕರನ್ನು ಮುಖಾಮುಖಿಯಾಗಿ ಭೇಟಿ ಮಾಡಿ ಸಮನ್ವಯತೆಯಿಂದ ಕೆಲಸ ಮಾಡಿಸಿಕೊಳ್ಳುವ ಧ್ಯೇಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT