ಚಿತ್ರದುರ್ಗ: ಓರ್ವ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಒಂದು ಮೋರಿಯನ್ನೂ ನಿರ್ಮಿಸಲಾಗುತ್ತಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ಅಳಲು ತೋಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಣ್ಕುಪ್ಪೆ ಕ್ರಾಸ್ ಸಮೀಪದಲ್ಲಿ ಸೋಮವಾರ ಟೂಲ್ ಫ್ಯಾಬ್ ರಿನಿವೇಬಲ್ ಎನರ್ಜಿ ಮತ್ತು ಇನ್ಫ್ರಾ ಸಂಸ್ಥೆಯಿಂದ ಏರ್ಪಡಿಸಿದ್ದ ನೂತನ ವಿಂಡ್ಮಿಲ್ ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಶಾಸಕ ಗೋಪಾಲಕೃಷ್ಣ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಪರೋಕ್ಷ ಕಿಡಿಕಾರಿದರು.
'ಖಾಸಗಿ ಕಂಪನಿಯೊಂದು ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಿರುವುದು ಶ್ಲಾಘನೀಯ. ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಮೂಲಕ ಕಂಪನಿ ಮಹತ್ವದ ಕೊಡುಗೆ ನೀಡುತ್ತಿದೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತೆಯೇ ಆರಂಭದಲ್ಲಿ ಮೊಳಕಾಲ್ಮುರಿನಂತಹ ಗ್ರಾಮೀಣ ಭಾಗದಲ್ಲಿ ಕಂಪನಿ ಆರಂಭಿಸಿರುವ ಖಾಸಗಿಯವರ ಸಾಹಸವನ್ನು ಪ್ರಶಂಸೆ ಮಾಡುತ್ತಾ ಸರ್ಕಾರದಿಂದ ತಮಗೆ ಆಗುತ್ತಿರುವ ಅನುದಾನ ಕೊರತೆಯನ್ನು ಪರೋಕ್ಷವಾಗಿ ಹೊರ ಹಾಕಿದರು.
'ಶಾಸಕನಾದ ನನಗೆ ನನ್ನ ಕ್ಷೇತ್ರದ ಹಳ್ಳಿಗಳಲ್ಲಿ ಒಂದು ಚರಂಡಿ ಅಥವಾ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಕಂಪನಿಯವರು ಇಲ್ಲಿಗೆ ಬಂದು ದೊಡ್ಡ ಫ್ಯಾಕ್ಟರಿ ಕಟ್ಟಿ ನಡೆಸುತ್ತಾರೆ ಎಂದರೆ ಅದು ನನಗೆ ಮೂರ್ಖತನದಂತೆ ಕಂಡಿತ್ತು. ನಾನು ಮೊದಲಿಗೆ ಖಾಸಗಿ ಕಂಪನಿಯರು ಯಾಕೆ ಈ ಹಳ್ಳಿಗಳಿಗೆ ಬಂದು ಕೈಗಾರಿಕೆ ಸ್ಥಾಪಿಸುತ್ತಿದ್ದಾರೆ ಎಂದು ಯೋಚಿಸಿದ್ದೆ. ಒಬ್ಬ ಶಾಸಕನಾಗಿ ನಾನೇ ಮೂಲಸೌಕರ್ಯ ಒದಗಿಸಲು ಕಷ್ಟಪಡುತ್ತಿರುವಾಗ, ಇವರು ಹೇಗೆ ಯಶಸ್ವಿಯಾಗುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ, ಸ್ಥಳೀಯ ಜನರ ಮೇಲೆ ನಂಬಿಕೆಯಿಟ್ಟು, ಇಲ್ಲಿನ ಯುವಕರಿಗೆ ಉದ್ಯೋಗ ನೀಡುವ ಮೂಲಕ ಈ ಕಂಪನಿ ಮಹತ್ತರವಾದ ಕೊಡುಗೆ ನೀಡುತ್ತಿದೆ" ಎಂದರು.
ಈ ಇಂಡಸ್ಟ್ರೀ ನಿರ್ಮಾಣದಿಂದ ತಾಲೂಕಿನ 200ರಿಂದ 300 ಯುವಕರಿಗೆ ಕೆಲಸ ದೊರೆಯಲಿದೆ. ನಂಜುಡಪ್ಪ ವರದಿಯ ಪ್ರಕಾರ ಈ ತಾಲೂಕಿನಲ್ಲಿ ನಿರ್ಮಾಣವಾಗಬೇಕಿದ್ದ ಅನೇಕ ಸಣ್ಣ ಕೈಗಾರಿಕೆಗಳ ಅನುಷ್ಠಾನದ ಭರವಸೆಗಳು ಇಂದಿಗೂ ಕೈಗೂಡಿಲ್ಲ ಎಂದರು. ಹಿಂದಿನಿಂದಲೂ ಆರಂಭವಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದ ತಾಲೂಕಿನ ಕೊಂಡ್ಲಹಳ್ಳಿಯ ಜವಳಿ ಪಾರ್ಕ್ ಘಟಕದ ಸ್ಥಾಪನೆ ಇನ್ನು ತಳ ಹಂತದಲ್ಲಿಯೇ ಇದೆ. ಗ್ರಾಮಗಳ ಅಭಿವೃದ್ಧಿಗೆ ಸಣ್ಣ ಕೈಗಾರಿಕೆಗಳು ಪ್ರಧಾನ ಪಾತ್ರವಹಿಸಲಿವೆ ಎನ್ನುವ ಹಿರಿಯರ ಮಾತು ಈ ತಾಲೂಕಿನಲ್ಲಿಇದುವರೆಗೂ ನಡೆಯದಿರುವುದು ನೋವಿನ ಸಂಗತಿ’’ ಎಂದರು.
ಸ್ಥಳೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಐಟಿಐ ಪದವೀಧರರಿಗೆ ಉದ್ಯೋಗ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, "ನಾನು ಈ ಕಂಪನಿಯ ಕುಟುಂಬದ ಸದಸ್ಯನಿದ್ದಂತೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಉಚಿತವಾಗಿ ನಿಮ್ಮ ಜೊತೆಗಿರುತ್ತೇನೆ. ಯಾವುದೇ ಸಮಸ್ಯೆಗಳು ಬಂದರೂ ಅದನ್ನು ಬಗೆಹರಿಸಲು ಸದಾ ಸಿದ್ಧ, ಈ ಕಾರ್ಯಕ್ರಮಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಬರಬೇಕಿತ್ತು, ಆದರೆ ಮುಖ್ಯಮಂತ್ರಿಗಳ ಜೊತೆ ದೆಹಲಿ ಪ್ರವಾಸ ಕೈಗೊಂಡಿದ್ದರಿಂದ ಬರಲಾಗಲಿಲ್ಲ ಎಂದು ಗೋಪಾಲಕೃಷ್ಣ ಸ್ಪಷ್ಟಪಡಿಸಿದರು.
ಬಿಜೆಪಿ ಕಿಡಿ
ಇನ್ನು ಶಾಸಕ ಗೋಪಾಲಕೃಷ್ಣಅವರ ಹೇಳಿಕೆಯ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದ್ದು, 'ಕಾಂಗ್ರೆಸ್ ಪಕ್ಷದ ವೈಫಲ್ಯದ ಮತ್ತೊಂದು ಸ್ಪಷ್ಟ ಒಪ್ಪಿಗೆ. ಅವರ ಸ್ವಂತ ಶಾಸಕರು ಇಷ್ಟೊಂದು ಅಸಹಾಯಕರಾಗಿದ್ದರೆ, ಕರ್ನಾಟಕದ ಜನರಿಗೆ ಯಾವ ಭರವಸೆ ಇದೆ? ಇದು ಆಡಳಿತವಲ್ಲ. ಇದು ಶುದ್ಧ ಅಸಮರ್ಥತೆ' ಎಂದು ಕಿಡಿಕಾರಿದೆ.